×
Ad

ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಮಾಹಿತಿ ಸಂಗ್ರಹ

Update: 2016-09-29 22:16 IST

ಚಿಕ್ಕಮಗಳೂರು, ಸೆ.29: ಮಳೆ ಕೊರತೆಯಿಂದ ತಲೆದೋರಿರುವ ಬರಪರಿಸ್ಥಿಯನ್ನು ಎದುರಿಸಲು ಖಾಸಗಿಯಾಗಿ ಬೋರ್‌ವೆಲ್ ಮತ್ತು ಬಾವಿ ನಿರ್ಮಾಣ ಮಾಡಿರುವವರಿಂದ ಗ್ರಾಮಸ್ಥರಿಗೆ ಕುಡಿಯುವ ನೀರು ಪೂರೈಸಲು ಕೆಲವು ವ್ಯಕ್ತಿಗಳನ್ನು ಮನವೊಲಿಸುವ ಪ್ರಯತ್ನ ಮಾಡಲಾಗಿದೆ ಎಂದು ಶಾಸಕ ಬಿ.ಬಿ.ನಿಂಗಯ್ಯ ತಿಳಿಸಿದ್ದಾರೆ.

ಅವರು ಇಂದು ಅಂಬಳೆ ಹೋಬಳಿಯ ಮಳಲೂರಿನಲ್ಲಿ ನಡೆದ ಕುಡಿಯುವ ನೀರಿನ ಸಮಸ್ಯೆ ಕುರಿತು ಹಮ್ಮಿಕೊಳ್ಳಲಾದ ಮಾಹಿತಿ ಸಂಗ್ರಹ ಸಭೆಯಲ್ಲಿ ಮಾತನಾಡಿದರು. ಮಳೆ ಕೊರತೆಯಿಂದ ಜನ, ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ. ಹೊಲ ಗದ್ದೆಗಳು ಬರಿದಾಗಿ ಬೆಳೆಗಳು ಒಣಗಿ ನಿಂತಿದೆ. ಇಂತಹ ಸಂದರ್ಭದಲ್ಲಿ ನೀರಿನ ಸಮಸ್ಯೆ ಕುರಿತು ಅ. 8ರಂದು ಜಿಪಂ ನಲ್ಲಿ ನಡೆಯಲಿರುವ ಸಭೆಯಲ್ಲಿ ಪ್ರಸ್ತಾಪಿಸಿ ಸಮಸ್ಯೆ ಪರಿಹರಿಸುವ ಸಲುವಾಗಿ, ಮಾಹಿತಿ ಸಂಗ್ರಹಿಸಲು ಗ್ರಾಮಗಳಿಗೆ ತೆರಳಿ ವಾಸ್ತವ ಸ್ಥಿತಿ ಅರಿಯಲು ಪ್ರವಾಸ ಮಾಡಲಾಗುತ್ತಿದೆ ಎಂದರು.

ಖಾಸಗಿಯವರ ಬಾವಿ ಮತ್ತು ಬೋರ್‌ವೆಲ್‌ಗಳ ಬಗ್ಗೆ ಮಾಹಿತಿ ಕಲೆಹಾಕಿ ಪಟ್ಟಿಮಾಡಬೇಕು. ಸ್ಥಳೀಯವಾಗಿ ಗ್ರಾಮಸ್ಥರಿಗೆ ಕುಡಿಯುವ ನೀರು ಪೂರೈಸಲು ಅವರನ್ನು ಮನವೊಲಿಸುವ ವಿಶೇಷ ಪ್ರಯತ್ನ ಮಾಡಲಾಗಿದೆ. ಕೆಲವರು ನೀರು ಕೊಡಲು ಒಪ್ಪಿದ್ದಾರೆ. ರೈತರು ಈ ವರ್ಷದ ಕಂದಾಯ ರದ್ದುಮಾಡಲು ಹಾಗೂ ಸಾಲ ಮನ್ನಾ ಮಾಡಬೇಕೆಂಬ ಬೇಡಿಕೆ ಇಟ್ಟಿದ್ದಾರೆ. ಈ ಬಗ್ಗೆ ಸರಕಾರದೊಂದಿಗೆ ಮಾತನಾಡಿ ಮುಂದಿನ ಕ್ರಮ ಜರಗಿಸಲಾಗುವುದು ಎಂದು ಹೇಳಿದರು.

ಹಾದಿಹಳ್ಳಿ, ಹಳುವಳ್ಳಿ, ಗಂಜಲಗೋಡು ಸೇರಿದಂತೆ ಅಂಬಳೆ ಹೋಬಳಿಯ ಕೆಲವೊಂದು ಗ್ರಾಮಗಳಲ್ಲಿ ಬೋರ್‌ವೆಲ್ ನಿರ್ಮಾಣ ಮಾಡಿ ನೀರು ಪೂರೈಸಿ ಎಂದು ಗ್ರಾಮಸ್ಥರು ಮನವಿ ಮಾಡಿದ್ದಾರೆ. ಅಗತ್ಯವಿರುವ ಕಡೆ ಬೋರ್‌ವೆಲ್ ನಿರ್ಮಿಸಿ, ಬೋರ್ ಇರುವ ಕಡೆ ನೀರಿಲ್ಲದಿದ್ದರೆ ರೀ ಕಂಡೀಶನ್ ಮಾಡಿ, ಅದು ಸಾಧ್ಯವಿಲ್ಲದಿದ್ದರೆ ತುರ್ತಾಗಿ ಟ್ಯಾಂಕರ್ ಮೂಲಕ ಕುಡಿಯುವ ನೀರು ಪೂರೈಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಶುಂಠಿ ಬೆಳೆಗಾರರಿಗೆ ಎಚ್ಚರಿಕೆ : ಕ್ಷೇತ್ರದಲ್ಲಿರುವ ಕೆರೆಗಳ ಸುತ್ತಮುತ್ತ ಬೆಳೆದ ಶುಂಠಿ ಬೆಳೆಗಾರರರು ಕೆರೆ ನೀರನ್ನು ಶುಂಠಿಬೆಳೆಗೆ ಪಂಪ್ ಮಾಡುತ್ತಿರುವ ಬಗ್ಗೆ ಸಾರ್ವಜನಿಕರು ದೂರಿದ್ದಾರೆ. ಅಕ್ರಮವಾಗಿ ಶುಂಠಿಗೆ ನೀರು ಹಾಯಿಸುತ್ತಿರುವುದು ಸರಿಯಲ್ಲ. ಕೂಡಲೇ ಇಂತಹ ಕೆಲಸ ಮಾಡುತ್ತಿರುವವರು ನಿಲ್ಲಿಸಬೇಕು. ಕೆರೆ ನೀರನ್ನು ಶುಂಠಿಗೆ ಪಂಪ್‌ಮಾಡುತ್ತಿರುವುದನ್ನು ಕಂಡರೆ ಕ್ರಮ ಜರಗಿಸಲಾಗುವುದು ಎಂದರು.

ತಾಪಂ ಸದಸ್ಯ ಕೆ.ಯು.ಮಹೇಶ್, ಗ್ರಾಪಂ ಸದಸ್ಯರಾದ ವನಿತಾ, ಕೃತಿಕಾ, ಹೊಯ್ಸಳ, ಪಾಪು, ಜಿಪಂ ಇಂಜಿನಿಯರ್ ಆನಂದ್, ಪಿಡಿಒ ಮಂಜುನಾಥ ಗೌಡ, ಇಒ ಸುಂದರೇಶ್, ಸಮಾಜ ಕಲ್ಯಾಣಾಧಿಕಾರಿ ರೇವಣ್ಣ, ಕೃಷಿ ಅಧಿಕಾರಿ ಮಲ್ಲಿಕಾರ್ಜುನ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News