ತೆಂಗಿನ ಮರ ಏರಿದ ಬಾಲಕನಿಗೆ 'ವಿಚಿತ್ರ' ಚಿತ್ರಹಿಂಸೆ !
ಹಾಸನ,ಅ.5: ಕಾಯಿ ಕದಿಯಲು ತೆಂಗಿನ ಮರ ಏರಿದ್ದ ಆರೋಪದಲ್ಲಿ 9 ವರ್ಷದ ಬಾಲಕನೊಬ್ಬನ ಮೇಲೆ ಯುವಕರ ಗುಂಪೊಂದು ಜಾಲಿ ಮರದ ಮುಳ್ಳಿನ ಕೋಲಿನಿಂದ ಹೊಡೆದು ಅಮಾನವೀಯವಾಗಿ , 'ವಿಚಿತ್ರ ಶಿಕ್ಷೆ' ನೀಡಿದ ಘಟನೆ ಹಾಸನದ ಅರಸೀಕೆರೆಯಲ್ಲಿ ನಡೆದಿದೆ.
ಆರು ಮಂದಿಯ ತಂಡ ಬಾಲಕ ನವಾಝ್ನ್ನು ಇರುವೆಗೂಡಿನ ಕಲ್ಲಿನ ಮೇಲೆ ನಿಲ್ಲಿಸಿ ಜಾಲಿ ಮರದ ಮುಳ್ಳಿನ ಕೋಲಿನಿಂದ ಹೊಡೆಯುತ್ತಾ ಖುಶಿಪಟ್ಟಿದೆ. ಒಂದು ವಾರದ ಹಿಂದೆ ಈ ಘಟನೆ ನಡೆದಿದ್ದರೂ,ವಾಟ್ಸಾಪ್ ಹುಚ್ಚು ಆರೋಪಿಗಳನ್ನು ಇದೀಗ ಪೊಲೀಸರ ಕೈಗೆ ಸಿಕ್ಕಿ ಬೀಳುವಂತೆ ಮಾಡಿದೆ.
ಮುಬಾರಕ್, ಶರ್ಪು, ಅರ್ಪನ್, ಸದ್ದಾಂ ಸೇರಿದಂತೆ ಆರು ಮಂದಿ ಬಾಲಕ ನವಾಝ್ಗೆ ವಿಕೃತವಾಗಿ ಥಳಿಸಿದ್ದಾರೆ. ಬಾಲಕ "ಅಣ್ಣ ನನ್ನನ್ನು ಬಿಟ್ಟು ಬಿಡು ಕಾಲಿಗೆ ಬೀಳುತ್ತೇನೆ ” ಎಂದು ಪದೇ ಪದೇ ಅಂಗಲಾಚಿದರೂ, ನವಾಝ್ಗೆ ಯುವಕರು ಮುಳ್ಳಿನಿಂದ ಚುಚ್ಚಿ ಚುಚ್ಚಿ ಅಟ್ಟಹಾಸ ಮೆರೆದಿದ್ದಾರೆ.
ಬಾಲಕಕನ್ನು ಇರುವೆಗೂಡಿನ ಮೇಲೆ ನಿಲ್ಲಿಸಿ ಆತನಿಗೆ ಚಿತ್ರ ಹಿಂಸೆ ನೀಡಿದ್ದು ಮಾತ್ರವಲ್ಲದೆ ದೃಶ್ಯವನ್ನು ಮೊಬೈಲ್'ನಲ್ಲಿ ಚಿತ್ರೀಕರಿಸಿ ತಮ್ಮ ಸ್ನೇಹಿತರಿಗೆ ವಾಟ್ಸಾಪ್ನಲ್ಲಿ ಕಳುಹಿಸಿದ್ದಾರೆ. ಬಾಲಕ ನವಾಝ್ ನಡೆದ ಘಟನೆಯನ್ನು ಮನೆಯಲ್ಲಿ ಹೇಳಿರಲಿಲ್ಲ. ಆದರೆ ಆತನಿಗೆ ಹೊಡೆಯುತ್ತಿದ್ದ ದೃಶ್ಯ ಇದು ಮೊಬೈಲ್ನಿಂದ ಮೊಬೈಲ್ಗೆ ಹರಿದು ಬಾಲಕನ ಹೆತ್ತವರಿಗೂ ಗೊತ್ತಾಗಿದೆ.. ಅವರು ಈ ಬಗ್ಗೆ ಅರಸೀಕೆರೆ ನಗರ ಠಾಣೆಗೆ ದೂರು ನೀಡಿದ್ದಾರೆ. ಬಾಲಕನ ಮೇಲೆ ದೌರ್ಜನ್ಯ ನಡೆಸಿದ ಆರೋಪಿಗಳಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ