ಚಲೋ ಉಡುಪಿಗೆ ದ.ಕ. ಜಿಲ್ಲೆಯಿಂದ 2,000 ಮಂದಿ!
ಮಂಗಳೂರು, ಅ.5: ದಲಿತ ಸಮುದಾಯದ ಮೇಲೆ ದೇಶಾದ್ಯಂತ ನಡೆಯುತ್ತಿರುವ ಹಲ್ಲೆ, ದೌರ್ಜನ್ಯವನ್ನು ಖಂಡಿಸಿ ಉಡುಪಿಯಲ್ಲಿ ಅ. 9ರಂದು ನಡೆಯಲಿರುವ ಚಲೋ ಉಡುಪಿಯ ಬಹಿರಂಗ ಸಭೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಿಂದ 2,000ಕ್ಕೂ ಅಧಿಕ ಮಂದಿ ವಿವಿಧ ಸಂಘಟನೆಗಳ ಕಾಯರ್ಕತರು ಭಾಗವಹಿಸಲಿದ್ದಾರೆ.
ಸುದ್ದಿಗೋಷ್ಠಿಯಲ್ಲಿಂದು ಈ ವಿಷಯ ತಿಳಿಸಿದ ದಲಿತ ಸಂಘಟನೆಯ ಮುಖಂಡ ಅಶೋಕ್ ಕೊಂಚಾಡಿ, ರಾಜ್ಯದ 100ಕ್ಕೂ ಅಧಿಕ ಸಮಾನ ಮನಸ್ಕ ಸಂಘಟನೆಗಳ ಸಹಭಾಗಿತ್ವದಲ್ಲಿ ಬೆಂಗಳೂರಿನಿಂದ ಅ.4ರಂದು ಹೊರಟಿರುವ ಉಡುಪಿ ಚಲೋ ಜಾಥಾವು ವಿವಿಧ ಜಿಲ್ಲೆಗಳನ್ನು ಹಾದು ಅ. 8ರಂದು ಉಡುಪಿಗೆ ತಲುಪಲಿದೆ. ಅ. 9ರಂದು ಉಡುಪಿ ಪುರಭವನದಿಂದ ಬೆಳಗ್ಗೆ 11 ಗಂಟೆಗೆ ರ್ಯಾಲಿ ಆರಂಭಗೊಂಡು 12 ಗಂಟೆಯ ಸುಮಾರಿಗೆ ಬಹಿರಂಗ ಸಭೆಯನ್ನು ಆಯೋಜಿಸಲಾಗಿದೆ ಎಂದು ಅವರು ಹೇಳಿದರು.
ಗುಜರಾತ್ನ ಉನಾದಲ್ಲಿ ಸತ್ತದನದ ಚರ್ಮ ಸುಲಿದ ಏಳು ಮಂದಿ ದಲಿತ ಯುವಕರನ್ನು ಕಟ್ಟಿ ಹಾಕಿ ಕಬ್ಬಿಣದ ರಾಡ್ಗಳಿಂದ ಥಳಿಸಿದ ಅಮಾನುಷ ದೌರ್ಜನ್ಯ ಇಡೀ ದೇಶವನ್ನೇ ತಲ್ಲಣಗೊಳಿಸಿದೆ. ಕೋಮುಶಕ್ತಿಗಳು ಆಹಾರ ಹಕ್ಕಿನ ಮೇಲೆ ಅಧಿಪತ್ಯ ಸ್ಥಾಪಿಸುವ ಷಡ್ಯಂತ್ರದ ವಿರುದ್ಧ ಧ್ವನಿ ಎತ್ತುವ ನಿಟ್ಟಿನಲ್ಲಿ ಈಗಾಗಲೇ ದೇಶದಲ್ಲಿ ಪ್ರತಿರೋಧ ಸಂಚಲನ ಮೂಡಿಸಿದೆ. ಇದಲ್ಲದೆ ದಲಿತ ಸಮುದಾಯಕ್ಕೆ ಮೀಸಲಿಟ್ಟ ಡಿಸಿ ಮನ್ನಾ ಭೂಮಿಯನ್ನು ಭೂಮಾಲಕರು, ಸ್ಥಾಪಿತ ಹಿತಾಸಕ್ತಿಗಳು ಕಬಳಿಸಿ ದಲಿತರನ್ನು ಭೂ ವಂಚಿತರನ್ನಾಗಿ ಮಾಡುತ್ತಿದ್ದಾರೆ. ತುಂಡು ಭೂಮಿಗಾಗಿ ಕಳೆದ ಹಲವು ದಶಕಗಳಿಂದ ಹಾತೊರೆಯುತ್ತಿದ್ದ ದಲಿತರು ಭೂಮಿ ಇಲ್ಲದೆ ಪರದಾಡುತ್ತಿದ್ದಾರೆ. ಆಹಾರ ನಮ್ಮ ಆಯ್ಕೆ, ಭೂಮಿ ನಮ್ಮ ಹಕ್ಕು ಎಂಬ ಘೋಷಣೆಯಡಿ ದಲಿತರು ಹಾಗೂ ದಮನಿತರ ಸಾಮಾಜಿಕ ನ್ಯಾಯಕ್ಕಾಗಿ ಸ್ವಾಭಿಮಾನಿ ಸಂಘರ್ಷ ಜಾಥಾ ಬೆಂಗಳೂರಿನಿಂದ ಅಕ್ಟೋಬರ್ 4ರಂದು ಹೊರಟಿದೆ. ಅದೀಗ ಕುಣಿಗಲ್, ಹೊಳೆನರಸೀಪುರ, ಬೇಲೂರು, ಹಾಸನ, ಕೊಪ್ಪ ಮಾರ್ಗವಾಗಿ ಉಡುಪಿಯಲ್ಲಿ ಸಮಾವೇಶಗೊಳ್ಳಲಿದೆ ಎಂದು ಅವರು ಹೇಳಿದರು.
ಜಾಥಾ ಕೋಮು ಸೂಕ್ಷ್ಮ ಪ್ರದೇಶವಾಗಿ ಗುರುತಿಸಿಕೊಂಡಿರುವ ದಕ್ಷಿಣ ಕನ್ನಡ ಜಿಲ್ಲೆಗೆ ಯಾಕೆ ಭೇಟಿ ನೀಡುತ್ತಿಲ್ಲ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅಶೋಕ್ ಕೊಂಚಾಡಿ, ಇದು ಹೋರಾಟದ ಆರಂಭವಷ್ಟೆ, ಮುಂದಿನ ದಿನಗಳಲ್ಲಿ ಹೋರಾಟ ಇನ್ನಷ್ಟು ವ್ಯಾಪಕವಾಗಿ ಜಿಲ್ಲೆ ಜಿಲ್ಲೆಗಳಿಗೂ ವಿಸ್ತರಣೆಗೊಳ್ಳಲಿದೆ ಎಂದರು.
ಗೋಷ್ಠಿಯಲ್ಲಿ ದಲಿತ ನಾಯಕರಾದ ನಿರ್ಮಲ್ ಕುಮಾರ್, ರಮೇಶ್ ಕೋಟ್ಯಾನ್, ರಘುವೀರ್ ಸೂಟರ್ ಪೇಟೆ ಉಪಸ್ಥಿತರಿದ್ದರು.