ನಮ್ಮ ಮೇಲೆ ದಾಳಿಯಾದರೆ 'ಬುಲೆಟ್' ಲೆಕ್ಕವಿಡದೆ ಪ್ರತಿದಾಳಿ : ರಾಜನಾಥ್

Update: 2016-10-09 03:59 GMT

ಬರ್ಮೆರ್ (ರಾಜಸ್ಥಾನ), ಅ.9: ಭಾರತ ಎಂದೂ ದಾಳಿ ಮಾಡಿಲ್ಲ. ಆದರೆ ನಮ್ಮ ಮೇಲೆ ದಾಳಿಯಾದರೆ ಬುಲೆಟ್ ಲೆಕ್ಕವಿಡದೇ ಪ್ರತಿದಾಳಿ ನಡೆಸುತ್ತದೆ ಎಂದು ಗೃಹ ಸಚಿವ ರಾಜನಾಥ್ ಸಿಂಗ್ ಗುಡುಗಿದ್ದಾರೆ.
ಪಾಕಿಸ್ತಾನದ ಗಡಿಯಲ್ಲಿ ಭದ್ರತಾ ಪರಿಶೀಲನೆ ನಡೆಸಿದ ಬಳಿಕ ಅವರು ಭದ್ರತಾ ಪಡೆ ಸಿಬ್ಬಂದಿಯನ್ನು ಉದ್ದೇಶಿಸಿ ಮಾತನಾಡಿದರು. ನಾವೆಂದೂ ಮೊದಲು ಗುಂಡು ಹಾರಿಸಿಲ್ಲ. ಆದರೆ ನಮ್ಮ ಮೇಲೆ ದಾಳಿ ನಡೆದರೆ, ಪ್ರತಿಯಾಗಿ ನಾವು ಗುಂಡಿನ ಲೆಕ್ಕ ಇಡದೇ ಪ್ರತಿದಾಳಿ ನಡೆಸುತ್ತೇವೆ ಎಂದು ಹೇಳಿದರು.
ಗಡಿಭದ್ರತಾ ಪಡೆಯ ಮನಬಾವೊ ಗಡಿ ಹೊರಠಾಣೆಗೆ ಭೇಟಿ ನೀಡಿದ ಅವರು, ಗಡಿ ಮೂಲಸೌಕರ್ಯ ಅಭಿವೃದ್ಧಿಪಡಿಸಲು ಸರ್ಕಾರ ಅಗತ್ಯ ಕ್ರಮ ಕೈಗೊಳ್ಳುತ್ತದೆ. ಹೊನಲು ಬೆಳಕಿನ ವ್ಯವಸ್ಥೆ ಹಾಗೂ ಪರ್ಯಾಯ ರಸ್ತೆಯನ್ನು ಅಭಿವೃದ್ಧಿಪಡಿಸಿ, ಗಸ್ತು ತಿರುಗಲು ಅನುಕೂಲ ಮಾಡಿಕೊಡಲಾಗುವುದು ಎಂದು ಭರವಸೆ ನೀಡಿದರು.
ಪ್ರತಿಕೂಲ ಹವಾಮಾನ ಹಾಗೂ ಕಠಿಣವಾದ ಮರುಭೂಮಿ ಕಣಿವೆ ಮಧ್ಯೆಯೂ ದೇಶದ ಗಡಿಕಾಯುವ ಕೆಲಸ ಮಾಡುತ್ತಿರುವುದು ಶ್ಲಾಘನೀಯ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News