ಗ್ರಾಮವಿಕಾಸ ಯೋಜನೆ ಕಾಮಗಾರಿಗೆ ಶಾಸಕರಿಂದ ಚಾಲನೆ
ಕಡೂರು, ಅ.16: ಭದ್ರಾ ಮೇಲ್ದಂಡೆ ಯೋಜನೆಯಲ್ಲಿ ಕಡೂರು ತಾಲೂಕಿನ 32 ಕೆರೆಗಳಿಗೆ ನೀರು ತುಂಬಿಸುವ ಯೋಜನೆಯ ವಿಸೃತ ವರದಿಯಲ್ಲಿ 1,200 ಕೋಟಿ ರೂ.ನ್ನು ವೆಚ್ಚ ಮಾಡಲಾಗುತ್ತದೆ ಎಂದು ಶಾಸಕ ವೈ.ಎಸ್.ವಿ ದತ್ತ ತಿಳಿಸಿದರು.
ಚಿಕ್ಕಬಳ್ಳೇಕೆರೆ ಗ್ರಾಮದಲ್ಲಿ ಗ್ರಾಮ ವಿಕಾಸ ಯೋಜನೆ ಕಾಮಗಾರಿಗೆ ಚಾಲನೆ ನೀಡಿ ಅವರು ಮಾತನಾಡಿದರು. ಭದ್ರಾ ಮೇಲ್ದಂಡೆ ಯೋಜನೆಯಲ್ಲಿ ಚಿತ್ರದುರ್ಗ ಕಾಲುವೆಯ ಮೂಲಕ ಕಡೂರಿನ 3 ಕೆರೆಗಳಿಗೆ ಮಾತ್ರ ನೀರು ತುಂಬಿಸುವ ಅವಕಾಶವಿತ್ತು. ಆದರೆ ನಂತರದಲ್ಲಿ ತಮ್ಮ ಆಸಕ್ತಿಯ ಮತ್ತು ಶ್ರಮದ ಫಲವಾಗಿ ಆಂದಿನ ಮುಖ್ಯ ಮಂತ್ರಿ ಸದಾನಂದಗೌಡರು ಮತ್ತೆ ಆ ಯೋಜನೆಯ ರೀ ಸರ್ವೇ ಮಾಡಿಸಿ ಚಿತ್ರದುರ್ಗ ಕ್ಯಾನಲ್ ಮೂಲಕ ಕಡೂರು ತಾಲೂಕಿನ 29 ಕೆರೆಗಳಿಗೆ ನೀರು ತುಂಬಿಸುವ ಅವಕಾಶ ಕಲ್ಪಿಸಿದರು. 12,345 ಕೋಟಿ ರೂ.ವೆಚ್ಚದ ಈ ಯೋಜನೆಯಲ್ಲಿ ಕಡೂರು ತಾಲೂಕಿನಲ್ಲಿ 1,200 ಕೋಟಿ ರೂ. ಈ ಕಾಮಗಾರಿಗಾಗಿಯೇ ವೆಚ್ಚ ಮಾಡಲಾಗುತ್ತದೆ ಎಂದು ವಿಸ್ತೃತ ವರದಿಯಲ್ಲಿ ತಿಳಿಸಲಾಗಿದೆ. ಯೋಜನೆ ಈಗ ಟೆಂಡರ್ ಹಂತದಲ್ಲಿದೆ. ಈ ಭಾಗದ ರೈತರ ಬದುಕು ಹಸನಾಗುತ್ತದೆ ಎಂಬುದರಲ್ಲಿ ಅನುಮಾನವಿಲ್ಲ ಎಂದರು.
ಈ ಹಿಂದೆ ಯಡಿಯೂರಪ್ಪ ಸರಕಾರ ಜಾರಿಗೆ ತಂದಿದ್ದ ಸುವರ್ಣ ಗ್ರಾಮ ಯೋಜನೆಯನ್ನು ಈಗಿನ ಸಿದ್ದರಾಮಯ್ಯನವರ ಸರಕಾರ ರದ್ದುಪಡಿಸಿ ಹೊಸದಾಗಿ ಗ್ರಾಮ ವಿಕಾಸ ಯೋಜನೆ ಆರಂಭಿಸಿದೆ. ಹಿಂದೆ ವರ್ಷಕ್ಕೆ 5 ಗ್ರಾಮಗಳನ್ನು ಸುವರ್ಣಗ್ರಾಮ ಎಂದು ಗುರುತಿಸಿ ಅಭಿವೃದ್ಧಿ ಪಡಿಸಲು ಅವಕಾಶವಿತ್ತು. ಆದರೆ ಈ ಯೋಜನೆಯಲ್ಲಿ ಕೇವಲ 5 ಗ್ರಾಮಗಳಿಗೆ ಮಾತ್ರ ಈ ಭಾಗ್ಯ ಸಿಗುತ್ತದೆ. 75 ಲಕ್ಷ ಅನುದಾನ ಸಿಗುತ್ತದೆ. ಗ್ರಾಮದ ಸರ್ವಾಂಗೀಣ ಅಭಿವೃದ್ಧಿ ಈ ಯೋಜನೆಯ ಉದ್ದೇಶ ಎಂದು ಹೇಳಿದರು.
ಜಿಪಂ ಸದಸ್ಯೆ ವನಮಾಲಾದೇವರಾಜು ಮಾತನಾಡಿದರು.
ಗ್ರಾಪಂ ಅಧ್ಯಕ್ಷ ಲೋಕಪ್ಪ ಅಧ್ಯಕ್ಷತೆ ವಹಿಸಿದ್ದರು. ತಾಪಂ ಸದಸ್ಯ ಪುಟ್ಟಸ್ವಾಮಿ, ಸದಸ್ಯೆ ರಶ್ಮಿಸ್ವಾಮಿ, ಜೆಡಿಎಸ್ ತಾಲೂಕು ಅಧ್ಯಕ್ಷ ಕೋಡಿಹಳ್ಳಿ ಮಹೇಶ್ವರಪ್ಪ, ಮುಖಂಡರಾದ ಬಿಸಲೇಹಳ್ಳಿ ಕೆಂಪರಾಜು, ಸೀಗೇಹಡ್ಲು ಹರೀಶ್, ನಿರ್ಮಿತಿ ಕೇಂದ್ರದ ಇಂಜಿನಿಯರ್ ವೀರೇಶ್, ಪಿಡಿಒ ಬಾಲಾಜಿನಾಯ್ಕ ಮತ್ತಿತರರಿದ್ದರು.