ದಲಿತ ಮುಖಂಡನ ಬರ್ಬರ ಹತ್ಯೆ

Update: 2016-10-21 12:20 GMT

ತುಮಕೂರು,ಅ.21: ಹಳೇ ದ್ವೇಷದ ಹಿನ್ನೆಲೆಯಲ್ಲಿ ದಲಿತ ಮುಖಂಡ ಬೀರನಕಲ್ಲು ಕಾಂತರಾಜು ಅವರನ್ನು ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಬೀರನಕಲ್ಲುವಿನಲ್ಲಿ ನಡೆದಿದೆ. ಹೆಂಡತಿ ಹಾಗೂ ಮಗಳೊಂದಿಗೆ ಕಾರಿನಲ್ಲಿ ಹೋಗುತ್ತಿದ್ದ ಕಾಂತರಾಜು ಕಾರನ್ನು ಅಡ್ಡಗಟ್ಟಿದ ದುಷ್ಕರ್ಮಿಗಳು ಹಾರೆಕೋಲಿನಿಂದ ಎದೆಗೆ ತಿವಿದಿದ್ದಾರೆ.

ದುಷ್ಕರ್ಮಿಗಳು ಕಾರನ್ನು ಅಡ್ಡ ಗಟ್ಟುತ್ತಿದ್ದಂತೆ ಹೆಂಡತಿ, ಮಗಳು ಕಾರಿನಿಂದ ಇಳಿದು ಓಡಿಹೋಗಿ ಗ್ರಾಮಸ್ಥರ ಸಹಾಯಕೋರಿದ್ದಾರೆ, ಗ್ರಾಮಸ್ಥರು ಅಲ್ಲಿಗೆ ಬರುವಷ್ಟರಲ್ಲಿ ಕಾಂತರಾಜು ಅವರನ್ನು ಬರ್ಬರವಾಗಿ ಹತ್ಯೆ ಮಾಡಿದ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ.

6 ತಿಂಗಳ ಹಿಂದೆ ಬೀರನಕಲ್ಲು ಗ್ರಾಮದ ಲಿಂಗಾಯಿತ ಸಮುದಾಯದ ಕೆಲವರ ಮೇಲೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ದೌರ್ಜನ್ಯ ಕಾಯ್ದೆ ಅಡಿ ಪ್ರಕರಣ ದಾಖಲಿಸಿದ್ದ ಕಾಂತರಾಜು ಮೇಲೆ ಬೀರಿನಕಲ್ಲಿನ ಕೆಲವರು ಮಚ್ಚಿನಿಂದ ಹಲ್ಲೆ ನಡೆಸಿದ್ದರು. ತೀವ್ರವಾಗಿ ಗಾಯಗೊಂಡಿದ್ದ , ಕಾಂತರಾಜು ಆಗ ತಪ್ಪಿಸಿಕೊಂಡಿದ್ದರು. ಈ ಘಟನೆಯಿಂದಾಗಿ ಕೆಲವರು ಊರುಬಿಟ್ಟು ಪರಾರಿಯಾಗಿದ್ದರು.

ಈ ಘಟನೆಯ ಹಿನ್ನೆಲೆಯಲ್ಲಿಯೇ ಈಗ ಕಾಂತರಾಜು ಅವರ ಹತ್ಯೆಯಾಗಿದೆ ಎಂದು ಶಂಕಿಸಲಾಗಿದ್ದು, ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಾರ್ತಿಕ್ ರೆಡ್ಡಿ, ಪಿಎಸ್ಐ ಕಾಂತರಾಜು ಸೇರಿದಂತೆ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಆರೋಪಿಗಳ ಬಂಧನಕ್ಕೆ ಬಲೆ ಬೀಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News