ಟಿಪ್ಪು ಜಯಂತಿ ಆಚರಣೆ ವೇಳೆ ಅರೆನಗ್ನ ಚಿತ್ರ ವೀಕ್ಷಿಸಿದ ಸಚಿವ: ಆರೋಪ
ರಾಯಚೂರು/ಬೆಂಗಳೂರು, ನ.10: ‘ಮೈಸೂರು ಹುಲಿ’ ಟಿಪ್ಪುಸುಲ್ತಾನ್ ಜಯಂತಿ ಆಚರಣೆ ಸಂದರ್ಭದಲ್ಲಿ ವೇದಿಕೆಯಲ್ಲಿ ಉಪಸ್ಥಿತರಿದ್ದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ತನ್ವೀರ್ಸೇಠ್ ಯುವತಿಯರ ಅರೆನಗ್ನ ಚಿತ್ರಗಳನ್ನು ವೀಕ್ಷಣೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ತನ್ವೀರ್ಸೇಠ್, ನಗರದ ಸ್ಟೇಷನ್ ರಸ್ತೆಯಲ್ಲಿರುವ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತದ ವತಿಯಿಂದ ಆಯೋಜಿಸ ಲಾಗಿದ್ದ ಟಿಪ್ಪುಸುಲ್ತಾನ್ ಜಯಂತಿಯಲ್ಲಿ ತಮ್ಮ ಮೊಬೈಲ್ನಲ್ಲಿ ಅರೆನಗ್ನ ಚಿತ್ರಗಳನ್ನು ವೀಕ್ಷಿಸುತ್ತಿರುವುದನ್ನು ದೃಶ್ಯಮಾಧ್ಯಮಗಳ ಕ್ಯಾಮೆರಾಗಳು ಸೆರೆಹಿಡಿದಿವೆಯೆನ್ನಲಾಗಿದೆ.
ಟಿಪ್ಪುಸುಲ್ತಾನ್ ಅವರ ಜೀವನ, ಸಾಧನೆಗೆ ಸಂಬಂಧಿಸಿದಂತೆ ಕಾರ್ಯಕ್ರಮದಲ್ಲಿ ತಜ್ಞರು ಉಪನ್ಯಾಸ ನೀಡುತ್ತಿದ್ದಾಗ ಸಚಿವರು, ತಮ್ಮ ಮೊಬೈಲ್ನಲ್ಲಿ ಅರೆನಗ್ನ ಚಿತ್ರಗಳನ್ನು ವೀಕ್ಷಿಸುವಲ್ಲಿ ಮಗ್ನರಾಗಿರುವ ದೃಶ್ಯಾವಳಿಗಳನ್ನು ಮಾಧ್ಯಮಗಳು ಪ್ರಸಾರ ಮಾಡಿವೆ.
ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಇಲಾಖೆಯ ಮಹತ್ವದ ಜವಾಬ್ದಾರಿಯನ್ನು ಹೊತ್ತಿರುವ ತನ್ವೀರ್ಸೇಠ್ರ ನಡವಳಿಕೆ, ಸಾರ್ವಜನಿಕವಾಗಿ ಸಾಕಷ್ಟು ಆಕ್ರೋಶಕ್ಕೆ ಗುರಿಯಾಗಿದೆ. ಅಲ್ಲದೆ, ಪ್ರತಿಪಕ್ಷ ಬಿಜೆಪಿ ಸಚಿವರ ರಾಜೀನಾಮೆಗೆ ಆಗ್ರಹಿಸಿದೆ.
ಬಿಜೆಪಿ ಸರಕಾರದ ಅವಧಿಯಲ್ಲಿ ಸದನದಲ್ಲಿ ಸಚಿವರಾದ ಲಕ್ಷ್ಮಣ ಸವದಿ, ಸಿ.ಸಿ.ಪಾಟೀಲ್, ಕೃಷ್ಣ ಜೆ.ಪಾಲೇಮಾರ್ ಅಶ್ಲೀಲ ಚಿತ್ರಗಳನ್ನು ವೀಕ್ಷಣೆ ಮಾಡಿ ಸಿಕ್ಕಿಬಿದ್ದಿದ್ದರು. ಆ ವಿಚಾರದಲ್ಲಿ ವಿರೋಧ ಪಕ್ಷದ ನಾಯಕರಾಗಿದ್ದ ಸಿದ್ದರಾಮಯ್ಯ, ಸಾರ್ವಜನಿಕವಾಗಿ ಬಿಜೆಪಿ ಪಕ್ಷ ಹಾಗೂ ಸರಕಾರದ ನೈತಿಕತೆಯನ್ನು ಪ್ರಶ್ನಿಸಿದ್ದರು.
ಆದರೆ, ಈಗ ಇತಿಹಾಸ ಮರುಕಳಿಸುವಂತೆ ಮುಖ್ಯಮಂತ್ರಿಯ ತವರು ಜಿಲ್ಲೆ ಮೈಸೂರಿನವರಾದ ತನ್ವೀರ್ಸೇಠ್, ಸರಕಾರದ ಕಾರ್ಯಕ್ರಮದಲ್ಲಿ ವೇದಿಕೆಯಲ್ಲಿ ಕೂತು ಯುವತಿಯರ ಅರೆನಗ್ನ ಚಿತ್ರಗಳನ್ನು ವೀಕ್ಷಿಸಿರುವ ಘಟನೆಯು ಚರ್ಚೆಗೆ ಗ್ರಾಸ ಒದಗಿಸಿದೆ. ಕಳೆದ ಬೆಳಗಾವಿ ಅಧಿವೇಶನದಲ್ಲಿ ಬಿಜೆಪಿ ಶಾಸಕ ಪ್ರಭುಚವಾಣ್, ಕಾಂಗ್ರೆಸ್ ನಾಯಕಿ ಪ್ರಿಯಾಂಕ ಗಾಂಧಿಯ ಚಿತ್ರವನ್ನು ತಮ್ಮ ಮೊಬೈಲ್ನಲ್ಲಿ ಅಸಭ್ಯವಾಗಿ ವೀಕ್ಷಿಸಿದ್ದ ಘಟನೆಯು ವಿವಾದಕ್ಕೆ ಎಡೆಮಾಡಿಕೊಟ್ಟಿತ್ತು.
ವರದಿ ಕೈಸೇರಿದ ಬಳಿಕ ಕ್ರಮ
ರಾಯಚೂರಿನಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ತನ್ವೀರ್ಸೇಠ್, ಟಿಪ್ಪುಸುಲ್ತಾನ್ ಜಯಂತಿ ಕಾರ್ಯಕ್ರಮದಲ್ಲಿ ಅರೆನಗ್ನ ಚಿತ್ರ ವೀಕ್ಷಣೆ ಮಾಡಿದ್ದಾರೆ ಎನ್ನಲಾಗಿರುವ ಕುರಿತು ವರದಿ ಕೇಳಿದ್ದೇನೆ. ಆನಂತರವಷ್ಟೇ ಮುಂದಿನ ಕ್ರಮ ಕೈಗೊಳ್ಳಲಾಗುವುದು. ಮಾಧ್ಯಮಗಳಲ್ಲಿ ಬರುವುದನ್ನೆಲ್ಲವನ್ನು ನಂಬಲು ಆಗುತ್ತದೆಯೆ, ವರದಿ ಬರಲಿ, ಆನಂತರ ರಾಜೀನಾಮೆ ಬಗ್ಗೆ ನಿರ್ಧಾರ.
-ಸಿದ್ದರಾಮಯ್ಯ, ಮುಖ್ಯಮಂತ್ರಿ
ನಾನು ಯಾವುದೇ ಅಶ್ಲೀಲ ಚಿತ್ರಗಳ ಅಂತರ್ಜಾಲ ತಾಣವನ್ನು ವೀಕ್ಷಿಸುತ್ತಿರಲಿಲ್ಲ. ನಿರಂತರವಾಗಿ ನನ್ನ ಮೊಬೈಲ್ಗೆ ವಾಟ್ಸಪ್ ಸಂದೇಶಗಳು ಬರುತ್ತಿದ್ದವು. ಮೈಸೂರಿನಲ್ಲಿ ಅದ್ಧೂರಿಯಾಗಿ ಟಿಪ್ಪುಸುಲ್ತಾನ್ ಜಯಂತಿ ನಡೆಯುತ್ತಿತ್ತು. ಯಾವುದಾದರೂ ಅಹಿತಕರ ಘಟನೆಗಳು ರಾಜ್ಯದ ಇತರ ಭಾಗಗಳಲ್ಲಿಯೂ ನಡೆಯುತ್ತಿದೆಯೇ ಎಂದು ತಿಳಿದುಕೊಳ್ಳಲು ಸಂದೇಶಗಳನ್ನು ನೋಡುತ್ತಿದ್ದೆ. ಈ ಸಂದರ್ಭದಲ್ಲಿ ಯಾವುದೇ ರೀತಿಯ ಅಂತರ್ಜಾಲ ತಾಣ ಅಥವಾ ಚಿತ್ರಗಳನ್ನು ತೆರೆದು ವೀಕ್ಷಣೆ ಮಾಡಿಲ್ಲ.
-ತನ್ವೀರ್ಸೇಠ್, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ
ತನ್ವೀರ್ಸೇಠ್ ತಪ್ಪು ಮಾಡಿಲ್ಲ
ಟಿಪ್ಪುಜಯಂತಿ ಆಚರಣೆ ಅತ್ಯಂತ ಸೂಕ್ಷ್ಮ ವಿಚಾರ. ಮೈಸೂರಿನಲ್ಲಿ ಏನಾದರೂ ಘಟನೆಗಳು ನಡೆದಿವೆಯೆ ಎಂಬುದರ ಕುರಿತು ಸಂದೇಶಗಳು ಬಂದಿರಬಹುದು ಎಂಬ ಉದ್ದೇಶದಿಂದ ವಾಟ್ಸಪ್ ವೀಕ್ಷಣೆ ಮಾಡಿದ್ದಾರೆ. ತನ್ವೀರ್ಸೇಠ್ ಅಂತಹ ವ್ಯಕ್ತಿಯಲ್ಲ. ಅವರನ್ನು ಬಹಳ ಹತ್ತಿರದಿಂದ ನಾನು ನೋಡಿದ್ದೇನೆ. ಉದ್ದೇಶಪೂರ್ವಕವಾಗಿ ಈ ಘಟನೆ ನಡೆದಿಲ್ಲ ಎಂಬುದು ನನ್ನ ಅಭಿಪ್ರಾಯ.
-ಝಮೀರ್ಅಹ್ಮದ್ಖಾನ್, ಜೆಡಿಎಸ್ ಬಂಡಾಯ ಶಾಸಕ