ಪ್ರಜಾಪ್ರಭುತ್ವ ಬಲಪಡಿಸಲು ನ್ಯಾ.ಮಹಾಸ್ವಾಮೀಜಿ ಕರೆ

Update: 2016-11-26 17:20 GMT

ಮಡಿಕೇರಿ,ನ.26: ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬಲಗೊಳಿಸಲು ಪ್ರಜೆಗಳು ಜಾಗೃತರಾಗುವ ಅಗತ್ಯವಿದೆ ಎಂದು ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಆರ್‌ಕೆಜಿಎಂಎಂ. ಮಹಾಸ್ವಾಮೀಜಿ ಅವರು ಹೇಳಿದ್ದಾರೆ. ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ವಕೀಲರ ಸಂಘ, ಸರಕಾರಿ ಅಭಿಯೋಜನಾ ಮತ್ತು ಸರಕಾರಿ ವ್ಯಾಜ್ಯಗಳ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ನ್ಯಾಯಾಲಯದ ಆವರಣದಲ್ಲಿ ಶನಿವಾರ ನಡೆದ ಸಂವಿಧಾನ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಇಡೀ ವಿಶ್ವದಲ್ಲಿಯೇ ಬೃಹತ್ ಸಂವಿಧಾನವನ್ನು ಹೊಂದಿರುವ ಭಾತವು, ರಾಜ್ಯ ನಿರ್ದೇಶಕ ತತ್ವಗಳನ್ನು ಅಳವಡಿಸಿಕೊಂಡಿದೆ. ಈ ಬಗ್ಗೆ ಪ್ರತಿಯೊಬ್ಬರೂ ಅಧ್ಯಯನ ಮಾಡಬೇಕಿದೆ ಮತ್ತು ರಾಷ್ಟ್ರ ನಿರ್ಮಾಣದಲ್ಲಿ ಮತ ದಾನದ ಹಕ್ಕನ್ನು ಪ್ರತಿಯೊಬ್ಬ ಪ್ರಜೆಯೂ ಹೊಂದಿದ್ದಾರೆ.

ಇದರ ಸರಿಯಾದ ಬಳಕೆ ಹಾಗೂ ಪ್ರತೀ ವ್ಯಕ್ತಿ  
ಶಿಕ್ಷಣ ಪಡೆಯುವುದು ಹಾಗೂ ದೇಶದ ಅಭಿವೃದ್ಧಿಯ ಚಿಂತಕರಾಗಿ ಮುಂದುವರಿದು ಉತ್ತಮ ಪ್ರಜಾಪ್ರಭುತ್ವ ರಾಷ್ಟ್ರ ಕಟ್ಟುವಲ್ಲ್ಲಿ ಪ್ರತಿಯೊಬ್ಬರೂ ಜಾಗೃತರಾಗಬೇಕು ಎಂದು ಮಹಾಸ್ವಾಮೀಜಿ ಅವರು ಹೇಳಿದರು. ದೇಶದ ಸಂವಿಧಾನದ ಪ್ರಸ್ತಾವನೆಯಲ್ಲಿ ಭಾರತೀಯರಾದ ನಾವು ಎಂದು ಉಲ್ಲೇಖಿಸಿ ಸಮಾನತೆಯ, ಸಮಾಜವಾದಿ, ಜಾತ್ಯತೀತತೆಯ ಬಗ್ಗೆ ಒತ್ತಿ ಹೇಳಲಾಗಿದೆ, ಭಾರತದಲ್ಲಿನ ಪ್ರತಿಯೊಬ್ಬರೂ ಸಮಾನತೆಯ ಸಮಾನ ಅವಕಾಶಗಳು ಹಾಗೂ ಮೂಲಭೂತ ಹಕ್ಕುಗಳು ಮತ್ತು ಕರ್ತವ್ಯಗಳ ಬಗ್ಗೆ ಸಂವಿಧಾನದಲ್ಲಿ ವಿವರಿಸಲಾಗಿದ್ದು, ಅದರಂತೆ ನಡೆದುಕೊಳ್ಳಬೇಕಾಗಿರುವುದು ಪ್ರತಿಯೊಬ್ಬರ ಕರ್ತವ್ಯ ಎಂದರು.


ಒಂದನೆ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀ ಶರಾದ ಡಿ.ಪವನೇಶ್ ಮಾತನಾಡಿ, ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗ ಸಂವಿಧಾನದ ಭದ್ರಬುನಾದಿಗಳಾಗಿವೆ. ಇದರ ಜೊತೆಯಲ್ಲಿ ವಿವಿಧತೆಯಲ್ಲಿ ಏಕತೆಯನ್ನು ಕಾಣಬಹುದಾಗಿದೆ. ಇದರ ರಚನೆಯಲ್ಲಿ ನೆಹರೂ ಮತ್ತು ಅಂಬೇಡ್ಕರ್ ಅವರ ಮುಂದಾಳತ್ವದಲ್ಲಿ ಉತ್ತಮ ಸಂವಿಧಾನ ದೊರೆತಿದೆ ಎಂದು ಅವರು ತಿಳಿಸಿದರು. ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮೋಹನ್ ಪ್ರಭು ಅವರು ಮಾತನಾಡಿ. ಸಂವಿಧಾನದ ಮೂಲ ಆಶಯಕ್ಕೆ ಧಕ್ಕೆಯಾಗದಂತೆ ಪ್ರತಿಯೊಬ್ಬ ಪ್ರಜೆಯೂ ನಡೆದುಕೊಳ್ಳಬೇಕು.

ಸಮಾನತೆ, ಸ್ವಾತಂತ್ರ್ಯ, ಶಿಕ್ಷಣ ಮತ್ತಿತರ ಮೂಲಭೂತ ಹಕ್ಕುಗಳನ್ನು ನೀಡುವುದರ ಜೊತೆ ಕರ್ತವ್ಯಗಳನ್ನು ಸಹ ಹೇಳಲಾಗಿದೆ. ಅದರಂತೆ ಅದನ್ನು ಕಡ್ಡಾಯವಾಗಿ ಪಾಲನೆ ಮಾಡಬೇಕು ಎಂದು ಹೇಳಿದರು. ವಕೀಲರ ಸಂಘದ ಅಧ್ಯಕ್ಷರಾದ ಸಿ.ಟಿ.ಜೋಸೆಫ್ ಅವರು ಮಾತನಾಡಿ, ವಿವಿಧತೆಯಲ್ಲಿ ಏಕತೆಯನ್ನು ಹೊಂದಿರುವ ರಾಷ್ಟ್ರದಲ್ಲಿ ಹಲವು ಧರ್ಮ, ಜಾತಿ ಮತಗಳನ್ನು ಹೊಂದಿದ್ದು, ಪ್ರತಿಯೊಬ್ಬರೂ ಸಾಮರಸ್ಯ ಹಾಗೂ ಸಮಾನತೆಯಿಂದ ಬದುಕುವಂತಾಗಬೇಕು ಎಂದು ಸಂವಿಧಾನದಲ್ಲಿ ಸ್ಪಷ್ಟವಾಗಿ ಹೇಳಲಾಗಿದ್ದು, ಅದರಂತೆ ನಡೆದುಕೊಳ್ಳಬೇಕಿದೆ ಎಂದರು. ಅಭಿಯೋಜಕರಾದ ಎಂ.ಎಂ.ಕಾರ್ಯಪ್ಪ ಅವರು ಲೋಕಾಯುಕ್ತ ಮತ್ತು ಭ್ರಷ್ಟಾಚಾರ ನಿಗ್ರಹ ದಳದ ಬಗ್ಗೆ ಮತ್ತು ಪೊಲೀಸ್ ದೂರು ಪ್ರಾಧಿಕಾರದ ಬಗ್ಗೆ ಉಪನ್ಯಾಸ ನೀಡಿದರು.

ಅಪರ ಸಿವಿಲ್ ನ್ಯಾಯಾಧೀಶರಾದ ಬಿ.ಎನ್.ರಮೇಶ್ ಬಾಬು, ಸರಕಾರಿ ಅಭಿಯೋಜಕರಾದ ಫಿರೋಝ್ ಖಾನ್, ವಕೀಲರ ಸಂಘದ ಉಪಾಧ್ಯಕ್ಷರಾದ ಕೆ.ಡಿ.ದಯಾನಂದ, ಸಹಾಯಕ ಅಭಿಯೋಜಕರಾದ ರಾಜು ಮತ್ತಿತರರು ಹಾಜರಿದ್ದರು. ಕಾರ್ಯಕ್ರಮಕ್ಕೂ ಮೊದಲು ಭಾರತದ ಸಂವಿಧಾನ ಪ್ರಸ್ತಾವನೆಯನ್ನು ವಕೀಲರಾದ ರತನ್ ತಮ್ಮಯ್ಯ ಪ್ರತಿಜ್ಞಾ ವಿಧಿ ಬೋಧಿಸಿದರು. ವಕೀಲರ ಸಂಘದ ಕಾರ್ಯ ದರ್ಶಿ ಪ್ರೀತಂ ಸ್ವಾಗತಿಸಿದರು. ದಯಾ ಎಚ್.ಬಂಗೇರಾ ಪ್ರಾರ್ಥಿಸಿದರು. ಕಾನೂನು ಸೇವಾ ಪ್ರಾಧಿಕಾರದ ಜಯಪ್ಪ ನಿರೂಪಿಸಿ, ವಂದಿಸಿದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News