ವ್ಯವಸ್ಥೆ ಬದಲಾವಣೆಗೆ ಪತ್ರಕರ್ತರು ಪ್ರಯತ್ನಿಸಿ: ಜಯಪ್ರಕಾಶ ಹೆಗ್ಡೆ
ಭಟ್ಕಳ, ನ.27: ಪತ್ರಿಕೆಗಳು, ಪತ್ರಕರ್ತರು ವ್ಯವಸ್ಥೆಗೆ ಹೊಂದಿಕೊಳ್ಳುವ ಬದಲು ಅದನ್ನು ಬದಲಾಯಿಸಲು ಪ್ರಯತ್ನಿಸಬೇಕು ಎಂದು ಮಾಜಿ ಸಚಿವ ಜಯಪ್ರಕಾಶ ಹೆಗ್ಡೆ ಹೇಳಿದ್ದಾರೆ.
ಇಲ್ಲಿನ ಕಮಲಾವತಿ ರಾಮನಾಥ ಶಾನುಭಾಗ್ ಸಭಾಭವನದಲ್ಲಿ ರವಿವಾರ ನಡೆದ ಪತ್ರಕರ್ತರ ರಾಜ್ಯಮಟ್ಟದ ಸಮಾವೇಶದ 2ನೆ ದಿನದ ಬಹುಭಾಷಾ ಕವಿಗೋಷ್ಠಿ, ಸನ್ಮಾನ ಹಾಗೂ ಸಂವಾದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು. ಬ್ರೇಕಿಂಗ್ ನ್ಯೂಸ್ಗಳು ವ್ಯಕ್ತಿಯ ನಿಂದನೆಗೆ ಕಾರಣವಾಗುತ್ತಿವೆ. ಇಂತಹ ಸುದ್ದಿಗಳನ್ನು ನೀಡುವ ಮೊದಲೇ ಸುದ್ದಿಯ ಬಗ್ಗೆ ವಿಮಶೇಗಳನ್ನು ನಡೆಸಬೇಕು. ಪರಿಪೂರ್ಣ ಸಮಾಜಕ್ಕೆ ಪರಿಪೂರ್ಣ ಪತ್ರಿಕೆಗಳು ಹಾಗೂ ಓದುಗರೂ ಇರಬೇಕು ಎಂದು ಅವರು ಅಭಿಪ್ರಾಯಪಟ್ಟರು.
ಮಾಜಿ ಶಾಸಕ ಜೆ.ಡಿ ನಾಯ್ಕ, ಇಂಡಿಯನ್ ಜರ್ನಲಿಸ್ಟ್ ಯೂನಿಯನ್ನ ವಿನೋದ ರೊಹಲಿ, ಸುರೇಶ ಅಕೋರಿ, ತಾಲೂಕು ಜೆಡಿಎಸ್ ಅಧ್ಯಕ್ಷ ಇನಾಯತ್ ಉಲ್ಲಾ ಶಾಬಂದ್ರಿ, ವಿಜಯ ಕರ್ನಾಟಕದ ಹಿರಿಯ ಸ್ಥಾನಿಕ ಸಂಪಾದಕ ಬಂಡು ಕುಲಕರ್ಣಿ, ಬಿಜೆಪಿ ಅಧ್ಯಕ್ಷ ರಾಜೇಶ ನಾಯ್ಕ, ಟಿವಿ9 ಜಿಲ್ಲಾ ವರದಿಗಾರ ಸಂದೀಪ ಸಾಗರ್ ಮುಂತಾದವರು ಮಾತನಾಡಿದರು. ಕಾರ್ಯಕ್ರಮದಲ್ಲಿ ಜಿಲ್ಲೆಯ ಹಿರಿಯ ಪರ್ತಕರ್ತರು, ಸಮಾಜ ಸೇವಕರು, ವಿವಿಧ ಸಂಘಸಂಸ್ಥೆಗಳ ಪ್ರತಿನಿಧಿಗಳು, ಪತ್ರಿಕಾ ಏಜೆಂಟರನ್ನು ಸನ್ಮಾನಿಸಲಾಯಿತು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಮುರುಗೇಶ್ ಶಿವಪೂಜಿ ಹಾಗೂ ರಾಜ್ಯದ ವಿವಿಧೆಡೆಯಿಂದ ಆಗಮಿಸಿದ್ದ ಪತ್ರಕರ್ತರು ಎರಡು ದಿನದ ಸಮಾವೇಶದ ಕುರಿತು ತಮ್ಮ ಅನಿಸಿಕೆ ವ್ಯಕ್ತಪಡಿಸಿದರು. ಭಟ್ಕಳ ಸಂಘದ ಅಧ್ಯಕ್ಷ ವಿಷ್ಣು ದೇವಾಡಿಗ ಸ್ವಾಗತಿಸಿದರು. ಗಂಗಾಧರ ನಾಯ್ಕ, ಶ್ರೀಧರ ಶೇಟ್, ಮಂಜುನಾಥ ನಾಯ್ಕ ನಿರೂಪಿಸಿದರು. ಸುಬ್ರಹ್ಮಣ್ಯ ಭಟ್ ವಂದಿಸಿದರು.