ಆರ್.ಅಶೋಕ್‌ ಸದನದ ದಾರಿ ತಪ್ಪಿಸುತ್ತಿದ್ದಾರೆ : ಯಾಸಿರ್ ಹಸನ್‌

Update: 2016-12-03 14:53 GMT

ಬೆಂಗಳೂರು, ಡಿ.3:  ಪ್ರಸ್ತುತ ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ನಡೆಯುತ್ತಿದ್ದು, ಸದನದಲ್ಲಿ ಬಿಜೆಪಿ ನಾಯಕ ಅಶೋಕರವರು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಬಗ್ಗೆ ನಿರಾಧಾರ ಆರೋಪವನ್ನು ಮಾಡಿ ಸದನವನ್ನು ತಪ್ಪು ದಾರಿಗೆ ಎಳೆದಿದ್ದನ್ನು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ರಾಜ್ಯ ಪ್ರಧಾನ ಕಾರ್ಯದರ್ಶಿ ಯಾಸಿರ್ ಹಸನ್‌ರವರು ತೀವ್ರವಾಗಿ ಖಂಡಿಸಿದ್ದಾರೆ. 

ರಾಜ್ಯದ ಪ್ರತಿನಿಧಿಗಳು ಒಟ್ಟಾಗಿ ರಾಜ್ಯದ ಅಭಿವೃದ್ಧಿಯ ಬಗ್ಗೆ ಚರ್ಚೆ ನಡೆಸುತ್ತಿರುವ ಅಮೂಲ್ಯ ವೇಳೆಯಲ್ಲಿ , ಯಾವುದೇ ಮಾಹಿತಿ ಇಲ್ಲದೆ ನಿರಾಧಾರ ಹೇಳಿಕೆ ನೀಡಿರುವುದು ದೌರ್ಭಾಗ್ಯಕರ. ಗೌರವಾನ್ವಿತ ಸದನದಲ್ಲಿ ಯಾವುದೇ ವಿಚಾರವನ್ನು ಮಂಡಿಸುವ ವೇಳೆ ಪ್ರಸ್ತುತ ವಿಷಯಕ್ಕೆ ಸಂಬಂಧಿಸಿದಂತೆ ಜನಪ್ರತಿನಿಧಿಗಳ ಕೈಯಲ್ಲಿ ಪ್ರಮಾಣೀಕೃತ ದಾಖಲೆಗಳು ಇರಬೇಕಾಗುತ್ತದೆ. ಆದರೆ ಅಶೋಕ್‌ರವರು ಅಂತಹ ದಾಖಲೆಗಳನ್ನು ಮುಂದಿಡದೆ ಕೇವಲ ಪೂರ್ವಗ್ರಹಪೀಡಿತರಾಗಿ ವರದಿಯನ್ನು ಮಂಡಿಸಿದ್ದನ್ನು ಅವರು ಖಂಡಿಸಿದ್ದಾರೆ. 

ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಸಂಘಟನೆಯು ಒಂದು ಸಾಮಾಜಿಕ ಸಂಘಟನೆಯಾಗಿದ್ದು , ಅಲ್ಪಸಂಖ್ಯಾತ ಮತ್ತು ದಮನಿತ ವರ್ಗಗಳ ಸಬಲೀಕರಣಕ್ಕಾಗಿ ಸಮಾಜಮುಖಿಯಾಗಿ ಕಾರ್ಯ ನಿರ್ವಹಿಸುತ್ತಿದೆ. ದೇಶದ ಸುಮಾರು 18 ರಾಜ್ಯಗಳಲ್ಲಿ ತಳ ಮಟ್ಟದ ಕಾರ್ಯಕರ್ತರನ್ನು ಹೊಂದಿದ್ದು ದೇಶದ ಕಟ್ಟುವ ಪ್ರಕ್ರಿಯೆಯಲ್ಲಿ ಅವಿರತ ಪ್ರಯತ್ನ ನಡೆಸುತ್ತಿದೆ.

ಜಾತಿ, ಧರ್ಮ, ಭಾಷೆ, ವರ್ಣ, ಲಿಂಗ ಭೇದವಿಲ್ಲದೆ ಪ್ರತಿಯೊಬ್ಬ ಪ್ರಜೆಯು ತನ್ನ ಧಾರ್ಮಿಕ, ಸಾಮಾಜಿಕ, ರಾಜಕೀಯ, ಶೈಕ್ಷಣಿಕ, ಔದ್ಯೋಗಿಕ ಹಕ್ಕುಗಳನ್ನು ಪಡೆದು ದೇಶದ ಮುಖ್ಯವಾಹಿನಿಯಲ್ಲಿ ಸಾಗಬೇಕೆಂಬುದು ಸಂಘಟನೆಯ ಆಶಯವಾಗಿದೆ.   ಆದರೆ ಅಶೋಕ್‌ರವರು ಸುಳ್ಳು ವರದಿಯನ್ನು ನೀಡಿ ಸಂಘಟನೆಯ ಗೌರವಕ್ಕೆ ಚ್ಯುತಿಯನ್ನು ತಂದಿರುತ್ತಾರೆ. 

ಈ ಹಿಂದೆ ಹುಣಸೂರಿನಲ್ಲಿ ನಡೆದ ಜೋಡಿ ಕೊಲೆ ಪ್ರಕರಣದಲ್ಲಿ ಸಂಘಟನೆಯನ್ನು ಎಳೆದು ತಂದಾಗ ಸಂಘಟನೆಯು ಪ್ರಸ್ತುತ ಪ್ರಕರಣದಲ್ಲಿ ತನಗೆ ಯಾವುದೇ ಸಂಬಂಧವಿಲ್ಲವೆಂದು ಸ್ಪಷ್ಟಪಡಿಸಿತ್ತು. ಇದೀಗ ಪ್ರಸ್ತುತ ಕೊಲೆ ಆರೋಪಿಯು ಇತ್ತೀಚಿನ ಕೊಲೆ ಪ್ರಕರಣವೊಂದರಲ್ಲಿ ಆರೋಪಿಯಾದಾಗ ಅದನ್ನೂ ಸಂಘಟನೆಯ ತಲೆಗೆ ಕಟ್ಟಲು ಅಶೋಕ್‌ರವರು ಪ್ರಯತ್ನಿಸಿದ್ದಾರೆ. ಮಾತ್ರವಲ್ಲ ಹುಣಸೂರು ಕೊಲೆ ಪ್ರಕರಣ ನಡೆದ ಸಂದರ್ಭದಲ್ಲಿ ರಾಜ್ಯದಲ್ಲಿ ಬಿಜೆಪಿ ಸರಕಾರ ಇತ್ತು ಅನ್ನುವುದು ಇಲ್ಲಿ ಗಮನಾರ್ಹ.  ಆದರೆ ಕೇರಳದಲ್ಲಿ ಪ್ರೊಫೆಸರ್ ಜೋಸೆಫ್‌ರವರ ಕೈ ಕಡಿತ ಪ್ರಕರಣಕ್ಕೂ ಸಂಘಟನೆಗೂ ಯಾವುದೇ ಸಂಬಂಧವಿಲ್ಲ ಎಂದು ನ್ಯಾಯಾಲಯ ತೀರ್ಪು ನೀಡಿದ್ದರೂ, ಅದನ್ನು ಮರೆಮಾಚಿ ಕೇವಲ ನಮ್ಮ ಸಂಘಟನೆಯನ್ನು ಅವಹೇಳಿಸಲು ಪ್ರಯತ್ನಿಸಿದ್ದು ಖಂಡನೀಯ.

ಆದರೆ ಕಳೆದ 25 ವರ್ಷಗಳಲ್ಲಿ ಕೇವಲ ಕಣ್ಣೂರು ಜಿಲ್ಲೆ ಒಂದರಲ್ಲೇ ಸುಮಾರು 117 ರಾಜಕೀಯ ಕೊಲೆಗಳು ನಡೆದಿದೆ. ಇವುಗಳಲ್ಲಿ ಗರಿಷ್ಠ ಪ್ರಮಾಣದ ಕೊಲೆಗಳನ್ನು ನಡೆಸಿದ್ದು ಮಾನ್ಯ ಅಶೋಕ್‌ರವರು ಪ್ರತಿನಿಧಿಸುವ ಬಿಜೆಪಿ-ಆರೆಸ್ಸೆಸ್ ಕಾರ್ಯಕರ್ತರಾಗಿದ್ದಾರೆ. ಅದರಲ್ಲೂ ಮಡಿದವರಲ್ಲಿ 99% ಹಿಂದುಳಿದ ವರ್ಗದವರು. ಈ ವಿಚಾರ ಅಶೋಕ್‌ರವರಿಗೆ ತಿಳಿಯದೆ ಹೋಯಿತೇ ಏಂದು ಪ್ರಶ್ನಿಸಿದ್ದಾರೆ.

ಒಟ್ಟಾರೆ ಆರೆಸ್ಸೆಸ್ ಮನಸ್ಥಿತಿಯು ಮುಸ್ಲಿಮ್, ಕ್ರೈಸ್ತ, ಕಮ್ಯೂನಿಸ್ಟ್ ವಿರೋಧಿಯಾಗಿದ್ದು, ಎಂದಿಗೂ ದೇಶದಲ್ಲಿ ಈ ಮಂದಿ ರಾಜಕೀಯ, ಸಾಮಾಜಿಕವಾಗಿ ಸಬಲೀಕರಣಗೊಳ್ಳಬಾರದು ಎಂದು ಬಯಸುತ್ತದೆ. ಆದ್ದರಿಂದ ಅಶೋಕ್‌ರವರ ಹೇಳಿಕೆಯಲ್ಲಿ ಅಚ್ಚರಿ ಪಡುವಂತಹದು ಏನೂ ಇಲ್ಲ. ಇದೀಗ ಕೇಂದ್ರದ ಬಿಜೆಪಿ ಸರಕಾರವೂ ಅಲ್ಪಸಂಖ್ಯಾತ, ಬಡವರ ಮತ್ತು ಹಿಂದುಳಿದ ವರ್ಗದ ಹಿತಾಸಕ್ತಿಗೆ ಚಿಕ್ಕಾಸಿನ ಬೆಲೆಯನ್ನು ನೀಡದೆ ಸರ್ವಾಧಿಕಾರಿ ಪ್ರವೃತ್ತಿಯನ್ನು ಮೆರೆಯುತ್ತಿದೆ. ಇವೆಲ್ಲದರ ಹಿಂದೆ ಕೋಮುವಾದದ ವಿರುದ್ಧ ಧ್ವನಿ ಎತ್ತುವ ಮತ್ತು ಸಾಮಾಜಿಕ ನ್ಯಾಯಕ್ಕಾಗಿ ಹೋರಾಡುವ ಸಂಘಟನೆಯನ್ನು ಮಟ್ಟ ಹಾಕುವ ಷಡ್ಯಂತ್ರವಿದೆ. ಸಂಘಟನೆಯು ಇದನ್ನು ತೀವ್ರವಾಗಿ ಖಂಡಿಸುತ್ತದೆ ಮತ್ತು ಮುಂದಿನ ದಿನಗಳಲ್ಲಿ ಇದರ ವಿರುದ್ಧ ನ್ಯಾಯಾಂಗ ಹೋರಾಟವನ್ನು ಮಾಡಲು ತೀರ್ಮಾನಿಸಿದೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News