×
Ad

ಹೊಸ ರಾಷ್ಟ್ರೀಯ ಜಲನೀತಿ ರೂಪುಗೊಳ್ಳಲಿ: ಬಸವರಾಜ ಬೊಮ್ಮಾಯಿ

Update: 2016-12-04 00:02 IST

ಜಲವಿವಾದ ನ್ಯಾಯಮಂಡಳಿಗಳಿಗೆ ನಿವೃತ್ತ ನ್ಯಾಯಾಧೀಶರನ್ನು ನೇಮಿಸಲಾಗುತ್ತದೆ. ತಾವು ಈ ಜಮೀನಿನಿಂದ ನಿವೃತ್ತಿಯಾಗುವವರೆಗೂ ಸದಸ್ಯರಾಗಿರಬೇಕು ಎಂದು ಅವರು ಬಯಸುತ್ತಾರೆ. ಹೀಗಾಗಿ ನ್ಯಾಯಮಂಡಳಿಗಳಿಂದ ಯಾವುದೇ ಜಲ ವಿವಾದ ಪರಿಹರಿಸಲು ಸಾಧ್ಯವಿಲ್ಲ. 1956ರ ಅಂತಾರಾಜ್ಯ ನದಿ ವಿವಾದ ಕಾಯ್ದೆ ರದ್ದು ಪಡಿಸಿ, ಹೊಸ ರಾಷ್ಟ್ರೀಯ ಜಲ ನೀತಿ ರೂಪಿಸಬೇಕು ಹೀಗೆಂದು ಅಭಿಪ್ರಾಯ ಪಟ್ಟ ವರು ಶಾಸಕ ಬಸವರಾಜ ಬೊಮ್ಮಾಯಿ.

ರೈತರ ನೀರಿನ ಸಮಸ್ಯೆ ಮತ್ತು ಸಾಹಿತ್ಯ ವಲಯಕ್ಕೆ ಕೊಂಡಿ ಬೆಸೆದ ಅವರು, ರಾಜ್ಯದ 17 ಲಕ್ಷ ಹೆಕ್ಟೇರ್ ಪ್ರದೇಶಕ್ಕೆ ಇನ್ನೂ ನೀರಾವರಿ ಸೌಲಭ್ಯ ಕಲ್ಪಿಸಬೇಕಿದೆ. ಮುಂದಿನ ಹತ್ತು ವರ್ಷಗಳನ್ನು ನೀರಾವರಿ ದಶಕ ಎಂದು ಘೋಷಿಸಿ, ನೀರಾವರಿ ಯೋಜನೆಗಳಿಗೆ ಸರಕಾರ ವಿಶೇಷ ಆದ್ಯತೆ ನೀಡಬೇಕು. ಈ ಜಲಕ್ರಾಂತಿಗೆ ಸಾಹಿತ್ಯ ವಲಯ ಒತ್ತಾಸೆಯಾಗಿ ನಿಲ್ಲಬೇಕು ಆಗ್ರಹಿಸಿದರು.

‘ರಾಜ್ಯದ ನೀರು-ನೀರಾವರಿ: ಸಮಸ್ಯೆಗಳು- ಪರಿಹಾ ರಗಳು’ ವಿಷಯವಾಗಿ ವಿಶೇಷ ಉಪನ್ಯಾಸ ನೀಡಿದ ಸಂದ ರ್ಭದಲ್ಲಿ ಈ ಅಭಿಪ್ರಾಯವನ್ನು ಅವರು ವ್ಯಕ್ತಪಡಿಸಿದರು. ಈ ಸಮ್ಮೇಳನದ ಮೂಲಕ ಎರಡನೆ ಹಸಿರು ಕ್ರಾಂತಿಗೆ ಬೆಂಬಲವಾಗಿ ಜಲಕ್ರಾಂತಿಯ ಹಕ್ಕೊತ್ತಾಯ ನಡೆಯಬೇಕು. ಜಲ ಸಾಹಿತ್ಯದ ಮೂಲಕ ಆಳುವವರಲ್ಲಿ ಜಾಗೃತಿ ಮೂಡಿಸಬೇಕು. ನಾಡಗೀತೆಯ ಭಾಗವಾಗಿ ನೀರೂ ಸೇರ್ಪಡೆಗೊಳ್ಳಬೇಕು ಎಂದು ಅವರು ಮನವಿ ಮಾಡಿದರು. ‘ಆಂಧ್ರಪ್ರದೇಶ, ತೆಲಂಗಾಣದ ಜನರಲ್ಲಿ ಇರುವಷ್ಟು ಜಲಜಾಗೃತಿ ನಮ್ಮ ಜನರಲ್ಲಿ ಇಲ್ಲ. ನೀರು ಮಿತಬಳಕೆ ಮತ್ತು ನೀರು ನಿರ್ವಹಣೆಯ ವಿಷಯದಲ್ಲಿ ಜಾಗೃತಿ ಮೂಡಿಸಬೇಕು. ಕಬ್ಬು-ಭತ್ತ ಬೆಳೆಯಲು ಹನಿ ನೀರಾವರಿ ಕಡ್ಡಾಯಗೊಳಿಸಬೇಕು. ತುಂಗಭದ್ರಾ ಜಲಾಶಯದಲ್ಲಿ 20 ಟಿಎಂಸಿ ಅಡಿ ಹೂಳು ತುಂಬಿದ್ದು, ನವಿಲೆ ಬಳಿ ಸಮಾನಾಂತರ ಜಲಾಶಯ ಹಾಗೂ ರಾಯಚೂರು ಜಿಲ್ಲೆ ತಿಂಥಣಿ ಬಳಿ ಕೃಷ್ಣಾ ನದಿಗೆ ಹೊಸ ಜಲಾಶಯ ನಿರ್ಮಿಸಬೇಕು. ಪಶ್ಚಿಮಘಟ್ಟದಲ್ಲಿ ನದಿಗಳ ಜೋಡಣೆಯಂತಹ ಪರಿಸರ ಸ್ನೇಹಿ ಯೋಜನೆ ಕಾರ್ಯಗತಗೊಳ್ಳಬೇಕು. ಬೇಡ್ತಿ-ವರದಾ ನದಿ ಜೋಡಿಸಬೇಕು. ನಾನು ಜಲಸಂಪನ್ಮೂಲ ಸಚಿವನಿದ್ದಾಗ ರೂಪಿಸಿದ್ದ 7 ಲಕ್ಷ ಎಕರೆಗೆ ಸೂಕ್ಷ್ಮ ನೀರಾವರಿ ಕಲ್ಪಿಸುವ ಯೋಜನೆ ಪೂರ್ಣಗೊಳಿಸಬೇಕು’ ಎಂದರು.

‘ರಾಜ್ಯದಲ್ಲಿ ಒಟ್ಟಾರೆ 3,800ಕ್ಕೂ ಹೆಚ್ಚು ಟಿಎಂಸಿ ಅಡಿ ನೀರು ಲಭ್ಯವಿದ್ದರೂ, ಅದರಲ್ಲಿ 1,186 ಟಿಎಂಸಿ ಅಡಿ ಮಾತ್ರ ನಮಗೆ ಲಭ್ಯ. ಸಾವಿರ ಟಿಎಂಸಿ ಅಡಿಗೆ ನಾವು ಯೋಜನೆ ರೂಪಿಸಿದ್ದು, ಇನ್ನೂ 2 ಸಾವಿರ ಟಿಎಂಸಿ ನೀರು ಬಳಕೆ ಸಾಧ್ಯವಾಗಿಲ್ಲ. ರಾಜ್ಯದಲ್ಲಿ ಕೃಷಿಯೋಗ್ಯ ಭೂಮಿ 105 ಲಕ್ಷ ಹೆಕ್ಟೇರ್ ಇದೆ. ಅದರಲ್ಲಿ 65 ಲಕ್ಷ ಹೆಕ್ಟೇರ್‌ಗೆ ನೀರಾವರಿ ಸೌಲಭ್ಯ ಕಲ್ಪಿಸಲು ಅವಕಾಶ ಇದೆ. ಆದರೆ, ಈ ವರೆಗೆ ನಾವು ಎಲ್ಲ ಮೂಲಗಳಿಂದ ನೀರಾವರಿ ಸೌಲಭ್ಯ ಕಲ್ಪಿಸಿರುವುದು 48 ಲಕ್ಷ ಹೆಕ್ಟೇರ್ ಪ್ರದೇಶಕ್ಕೆ ಮಾತ್ರ’ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News