ಬಾಯಲ್ಲಿ ನೀರೂರಿಸುವ ಬಗೆಬಗೆಯ ತಿನಿಸು

Update: 2016-12-03 18:35 GMT

ರಾಯಚೂರಿನಲ್ಲಿ ನಡೆಯುತ್ತಿರುವ 82ನೆ ಅಖಿಲ ಭಾರತ ಸಮ್ಮೇಳನದಲ್ಲಿ ವಾಣಿಜ್ಯ ಮಳಿಗೆಗೆಳು ಕನ್ನಡ ಜಾತ್ರೆಗೆ ಬಂದ ಸಾಹಿತ್ಯಾಸಾಕ್ತರನ್ನು ತಮ್ಮಡೆ ಸೆಳೆಯುತ್ತಿವೆ.
ಸಣ್ಣ ವಸ್ತುಗಳಿಂದ ಹಿಡಿದು ದೊಡ್ಡ ವಸ್ತುಗಳವರೆಗಿನ ಮಾರಾಟ ಬಲು ಜೋರಾಗಿ ನಡೆದಿದೆ. ಬೆಂಗಳೂರು, ಮೈಸೂರು, ತುಮಕೂರು, ಚಿಕ್ಕಮಗಳೂರು, ದಾವಣಗೆರೆ ಸೇರಿದಂತೆ ರಾಯಚೂರು ಜಿಲ್ಲೆಯ ಕೆಲವು ತಾಲೂಕು ಹಾಗೂ ಪಟ್ಟಣದ ವಾಣಿಜ್ಯ ಮಳಿಗೆಗಳು ಕನ್ನಡದ ಜಾತ್ರೆಯಲ್ಲಿ ಕಾಣ ಸಿಗುತ್ತವೆ.


ದಿನನಿತ್ಯದ ಉಪಯೋಗಿ ವಸ್ತುಗಳಾದ ಮಹಿಳೆಯರ ಉಡುಪು ಗಳು, ಪುರುಷರ ಉಡುಪುಗಳು, ಮಕ್ಕಳ ಆಕರ್ಷಕ ಬಟ್ಟೆಗಳು, ಮಹಿಳೆಯರು ಧರಿಸುವ ಕಾಸ್ಮೋಟೀಸ್ ಸಾಮಾನುಗಳು, ಅಡುಗೆ ಸಾಮಾನುಗಳು, ತಿನ್ನುವ ವಸ್ತುಗಳು, ಮಸಾಜ್ ಸಾಮಾನುಗಳು, ಆಯುರ್ವೇದಿಕ್ ಸಾಮಾನುಗಳು, ಬಾಗಲಕೋಟೆ ಕರದಂಟು, ಅಮೀನಗಡ ಕರದಂಟು, ಬೆಳಗಾವಿ ಕುಂದಾ, ರಾಯಚೂರಿನ ವಗ್ಗಣೆ, ಮಿರ್ಚಿ, ಪಾನಿ ಪೂರಿ, ಐಸ್‌ಕ್ರೀಮ್, ಜ್ಯೂಸ್, ಫ್ರೂಟ್ ಸಾಲಡ್, ಚುರುಮುರಿ, ಪಾವ್ ಬಜ್ಜಿ, ಪಾವ್ ವಡಾ, ಗೋಬಿ ಮಂಚೂರಿ, ಯುವತಿಯರ, ಮಕ್ಕಳ ಆಲಂಕಾರಿಕ ಸಾಮಗ್ರಿಗಳು ಹೀಗೆ ನಾನಾ ತರಹದ ಮನೆ ಬಳಕೆ ವಸ್ತುಗಳು, ಮಕ್ಕಳ ಆಟಿಕೆ ಸಾಮಾನು, ಸಾಬೂನು, ಅಗರ್‌ಬತ್ತಿ, ಎಲ್‌ಸಿಡಿ ಬಲ್ಬ್, ತಿನ್ನುವ ವಸ್ತುಗಳು ಸೇರಿದಂತೆ ನೂರಾರು ಬಗೆಯ ಸಾಮಾನುಗಳು ನೋಡುಗರನ್ನು ಆಕರ್ಷಿಸುತ್ತಿವೆ.

ವಾಣಿಜ್ಯ ಮಳಿಗೆಯಲ್ಲಿ ಫ್ರೂಟ್ ಸಾಲಡ್ ಅಂಗಡಿಯು ಎಲ್ಲರನ್ನು ಆಕರ್ಷಿಸುತ್ತಿದ್ದು ಒಂದು ಪ್ಲೇಟಿಗೆ 10 ರೂ.ನಿಗದಿ ಮಾಡಿದ್ದರಿಂದ ಜನ ಸಾಲಾಗಿ ಕ್ಯೂ ಹಚ್ಚಿರುವುದು ಕಂಡು ಬಂತು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಹಾಕಲಾದ ನಮ್ಮ ಜಿಲ್ಲೆಯ ತಾಲೂಕುಗಳ ಸ್ತ್ರೀ ಶಕ್ತಿ ಮಹಿಳಾ ಒಕ್ಕೂಟ, ಸಂಘಗಳು ತಯಾರಿಸಿದ ಸಾಮಾನು ಮಾರಾಟ ಮಳಿಗೆಗಳೂ ಜನರ ಆಕರ್ಷಣೆ ಆಗಿದ್ದವು. ಮಹಿಳೆಯರೇ ತಯಾರಿಸಿದ ಕರಕುಶಲ ವಸ್ತುಗಳಿಗೂ ಕೂಡಾ ಬೇಡಿಕೆ ಬಂದು ಇವುಗಳನ್ನು ಖರೀದಿಸುವ ಭರಾಟೆಯಲ್ಲಿ ಜನ ತೊಡಗಿದ್ದುದು ಕಂಡು ಬಂತು.

ಇನ್ನೂ ಬೀದಿ ಬದಿಯಲ್ಲಿ ಕುಳಿತು, ನಿಂತು ವ್ಯಾಪಾರ ಮಾಡುವ ವರ ವ್ಯಾಪಾರವೂ ಸಾಧಾರಣವಾಗಿತ್ತಾದರೂ ಇಲ್ಲಿ ಮಾರುತ್ತಿದ್ದ, ಮಂಡಕ್ಕಿ, ಚುರುಮುರಿ, ಶೇಂಗಾ, ಕಡ್ಲೆ ಕಾಯಿ ಕೊಳ್ಳಲು ಜನ ಆಸಕ್ತಿ ವಹಿಸಿದ್ದರು. ಬೆಂಗಳೂರು, ಮೈಸೂರು ಇತರ ಕಡೆಗಳಿಂದ ಕೂಡಾ ಮಂಡಕ್ಕಿ, ಶೇಂಗಾ, ಸೌತೆ ಕಾಯಿ ಮಾರುವ ತಂಡವೇ ಬಂದಿದ್ದರು.
ತಿಳಿದುಬಂತು. ಈ ವ್ಯಾಪಾರಿಗಳನ್ನು ಮಾತನಾಡಿಸಿದಾಗ ವ್ಯಾಪಾರ ಪರ್ವ ಇಲ್ಲ ಎಂದು ತಿಳಿಸಿದರು.
ಸಮ್ಮೇಳನದ ವೇದಿಕೆಯ ಪೆಂಡಾಲ್ ಸುತ್ತಮುತ್ತ ಕುಡಿಯುವ ನೀರು ಇಲ್ಲದ ಕಾರಣ ಪಕ್ಕದಲ್ಲೇ ಇದ್ದ ಐಸ್‌ಕ್ರೀಮ್ ಮಾರಾಟಕ್ಕೆ ಉತ್ತಮ ಸ್ಪಂದನೆ ದೊರೆತಿದೆ. ಐಸ್‌ಕ್ರೀಮ್ ಆದರೂ ಸವಿದು ಬಾಯಾರಿಕೆಯನ್ನು ನೀಗಿಸೋಣ ಎಂದು ಚಿಕ್ಕ ಮಕ್ಕಳಿಂದ ಹಿಡಿದು, ಮಹಿಳೆಯರು, ದೊಡ್ಡವರು ವಿವಿಧ ಬಗೆಯ ಐಸ್ ಕ್ರೀಮ್ ಸವಿದರು. ಜೊತೆಗೆ ನೀರಿನ ಬಾಟಲಿಗಳನ್ನು ಹಣ ಕೊಟ್ಟು ಖರೀಸಿದರು. ಐಸ್ ಕ್ರೀಮ್ ಮಾರುವವರನ್ನು ಮಾತನಾಡಿಸಿದಾಗ ಚಿಕ್ಕಮಗಳೂರಿನಿಂದ ನಾವು ಬಂದಿದ್ದೇವೆ. ಇಂತಹ ಸಮ್ಮೇಳನ, ಜಾತ್ರೆಗಳಿಗೆ ನಾವು ಹೋಗುತ್ತಾ ಇರುತ್ತೇವೆ. ಐಸ್ ಕ್ರೀಮ್ ಮಾರಾಟದಿಂದ ಉತ್ತಮ ಹಣ ಬಂದಿರುವ ಕುರಿತು ಹೇಳಿದರು.
ಒಟ್ಟಾರೆಯಾಗಿ ಪ್ರತಿ ವಾಣಿಜ್ಯ ಮಳಿಗೆಗಳಿಗೆ 4 ಸಾವಿರ ರೂ.ಫಿಕ್ಸ್ ಮಾಡಿರುವುದರಿಂದ ಸಮ್ಮೇಳನದ ಆಯೋಜಕರಿಗೆ ಲಾಭ ಬರುವುದು ಒಂದೆಡೆಯಾದರೆ, ನೋಟು ನಿಷೇಧ ಆದರೂ ಇದನ್ನು ಲೆಕ್ಕಿಸದೇ ಜನ ವಿವಿಧ ಬಗೆಯ ಸಾಮಾನು ಕೊಳ್ಳಲು ನಾನು ಮುಂದು, ತಾಮುಂದು ಎಂದು ವ್ಯಾಪಾರ ಮಾಡಿರುವುದು ಲಕ್ಷಾಂತರ ರೂ.ಹಣ ವ್ಯಾಪಾರಿಗಳಿಗೆ ಲಾಭ ಆಗಿರುವುದು ವಿಶೇಷವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News