ರಾಜಕೀಯ ಪಕ್ಷಗಳು ಪಕ್ಷಕ್ಕೆ ನಿಧಿ ಸಂಗ್ರಹಿಸುವುದು ತಪ್ಪಲ್ಲ

Update: 2016-12-17 14:20 GMT

ಬೆಂಗಳೂರು,ಡಿ,17: ರಾಜಕೀಯ ಪಕ್ಷಗಳು ಪಕ್ಷಕ್ಕೆ ನಿಧಿ ಸಂಗ್ರಹಿಸುವುದು ತಪ್ಪಲ್ಲ ಎಂದು ಹೇಳಿರುವ ಕೇಂದ್ರ ಇಂಧನ ಸಚಿವ ಪಿಯೂಶ್ ಗೋಯಲ್, ಬಿಜೆಪಿಯಲ್ಲಿ ಎಲ್ಲಾ ವ್ಯವಹಾರಗಳು ಕಾನೂನು ಬದ್ಧವಾಗಿ ನಡೆಯುತ್ತಿವೆ ಎಂದು ಬಲವಾಗಿ ಸಮರ್ಥಿಸಿಕೊಂಡಿದ್ದಾರೆ.

ಜನತೆ ನಡೆಸುವ ನಗದು ರಹಿತ ವಹಿವಾಟಿಗೆ ಯಾವುದೇ ರೀತಿಯ ತೆರಿಗೆ ವಿಧಿಸುವುದಿಲ್ಲ. ಅರ್ಥ ವ್ಯವಸ್ಥೆ ಡಿಜಿಟಲೀಕರಣದತ್ತ ಪರಿವರ್ತನೆಯಾಗಲು ಸರ್ಕಾರ ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಳ್ಳುತ್ತಿದೆ. ನೋಟುಗಳ ಅಸಮತೋಲವನ್ನು ಭಾರತೀಯ ರಿಸರ್ವ್ ಸೂಕ್ತ ರೀತಿಯಲ್ಲಿ ನಿವಾರಣೆ ಮಾಡುತ್ತಿದೆ ಎಂದಿದ್ದಾರೆ.

ನೋಟು ಅಪನಗದೀಕರಣದ ಪರಿಣಾಮಗಳ ಬಗ್ಗೆ ನಗರದ ಹೊರ ವಲಯದ ರೇವಾ ಕಾಲೇಜಿನಲ್ಲಿ ಉಪನ್ಯಾಸ ನೀಡಿದ ಅವರು, ಬಿಜೆಪಿಯಲ್ಲಿರುವ ನಿಧಿಯನ್ನೂ ಪ್ರಾಮಾಣಿಕವಾಗಿ ಬ್ಯಾಂಕ್ ಖಾತೆಯಲ್ಲಿ ಇರಿಸಲಾಗಿದ್ದು, ಅದಕ್ಕೆ ತೆರಿಗೆ ಪಾವತಿಸಲಾಗುತ್ತದೆ ಎಂದರು.

ಪ್ರತಿಪಕ್ಷಗಳ ಆರೋಪವನ್ನು ತಳ್ಳಿಹಾಕಿದ ಅವರು, ವಿಶ್ವದ ಅತಿ ದೊಡ್ಡ ರಾಜಕೀಯ ಪಕ್ಷವಾದ ಬಿಜೆಪಿಗೆ ನೋಟು ಅಮಾನ್ಯೀಕರಣದ ನಂತರ ಕೊರತೆ ಬಾಧಿಸಿಲ್ಲ. ಪಕ್ಷದಲ್ಲಿ ಹಣಕಾಸಿನ ವ್ಯವಹಾರಗಳು ಸಮರ್ಪಕವಾಗಿವೆ ಎಂದರು.

ನಾನು ನನ್ನ ಜೀವನದಲ್ಲಿ ಎಂದೂ ನೂರು ಡಾಲರ್ ನೋಟು ನೋಡೇ ಇಲ್ಲ. ನಾವು ವಿದೇಶಗಳಿಗೆ ಹೋದಾಗ ಹೆಚ್ಚಿನ ಮೌಲ್ಯದ ನೋಟು ಒಯ್ಯುವುದಿಲ್ಲ. ಹಾಗಿದ್ದ ಮೇಲೆ ಭಾರತದಲ್ಲಿ ಶೇಕಡಾ 80 ರಷ್ಟು ಹೆಚ್ಚಿನಮೌಲ್ಯದ ನೋಟುಗಳ ಬಳಕೆ ಏಕೆ. ಜತೆಗೆ 2004 ರ ನಂತರ ಭಾರತ ಕಂಡ ಕೆಲವು ಹಗರಣಗಳ ಒಟ್ಟು ಮೌಲ್ಯವನ್ನು ಚಾರ್ಟೆಡ್ ಅಕೌಂಟೆಂಟ್ ಗಳಿಂದಲೂ ಲೆಕ್ಕ ಹಾಕಲು ಸಾಧ್ಯವಾಗಲಿಲ್ಲ. ಹೀಗಾಗಿಯೇ ಪ್ರಧಾನಿ ಮೋದಿ ಒಂದು ಬದಲಾವಣೆ ಬಯಸಿ, ಭ್ರಷ್ಟಾಚಾರವನ್ನು ಮಟ್ಟ ಹಾಕಲು ನೋಟು ಅಪನಗದೀಕರಣಗೊಳಿಸುವ ದಿಟ್ಟ ನಿರ್ಧಾರ ಕೈಗೊಂಡರು ಎಂದು ಹೇಳಿದರು.

ಪ್ರಾಮಾಣಿಕ ತೆರಿಗೆ ಪಾವತಿ ಆರಂಭವಾದರೆ, ಸರ್ಕಾರಕ್ಕೆ ನಿರೀಕ್ಷಿತ ತೆರಿಗೆ ಹಣ ಹರಿದು ಬಂದಲ್ಲಿ ನಂತರದ ದಿನಗಳಲ್ಲಿ ನಿಶ್ಚಿತವಾಗಿ ತೆರಿಗೆ ದರ ಕಡಿಮೆ ಆಗುತ್ತದೆ. ಇದರ ಪರಿಣಾಮ ಹಣ ಮುಚ್ಚಿಡುವ ಬದಲಾಗಿ ಹಣದ ಹರಿವು ಹೆಚ್ಚುತ್ತದೆ ಹಣದುಬ್ಬರ ತಗ್ಗಿ ಬೆಲೆ ಇಳಿಯಲಿದೆ ಎಂದರು.

ಎಲ್ಲ ಸರ್ಕಾರಿ ಸೇವೆಗಳೂ ಡಿಜಿಡಲೀಕರಣವಾಗಿ ನಗದು ರಹಿತ ವಹಿವಾಟು ಚಲಾವಣೆಗೆ ಬರಬೇಕು. ಇದಕ್ಕೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಖಂಡಿತ ಸೇವಾ ತೆರಿಗೆ ವಿಧಿಸುವುದಿಲ್ಲ ಎಂದು ಭರವಸೆ ನೀಡುತ್ತೇವೆ. ನಾವು ಹಾಗೆಂದು ಸಂಪೂರ್ಣ ನೋಟು ಬಳಕೆಯನ್ನು ಸ್ಥಗಿತಗೊಳಿಸುವುದಿಲ್ಲ.ಜನರಲ್ಲಿ ಅರಿವು ಮೂಡಿಸುವವರೆಗೆ ನೋಟುಗಳ ಬಳಕೆ ಇದ್ದೇ ಇರುತ್ತದೆ ಎಂದು ಹೇಳಿದರು.

ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಮಾತನಾಡಿ,ಪ್ರಧಾನಿ ಮೋದಿ ಕೈಗೊಂಡಿರುವ ನೋಟು ಅಪನಗದೀಕರಣ ಕಾರ್ಯಕ್ರಮ ಭ್ರಷ್ಟಾಚಾರದ ವಿರುದ್ದದ ಯಜ್ಞವಾಗಿದೆ. ಶೀಘ್ರದಲ್ಲೇ ನೋಟು ಕೊರತೆ ಸಮಸ್ಯೆಯೂ ನೀಗಲಿದೆ. ಸ್ವಾರ್ಥಕ್ಕಾಗಿ ರಾಜಕೀಯಕ್ಕಾಗಿ ಪ್ರತಿಪಕ್ಷಗಳ ಜನರ ದಿಕ್ಕು ತಪ್ಪಿಸಲು ಪ್ರಯತ್ನಿಸುತ್ತಿವೆ. ಇದರ ಬಗ್ಗೆ ಎಚ್ವರ ಅಗತ್ಯ. ಒಳ್ಳೆಯ ದಿನಗಳು ಶೀಘ್ರವೇ ಬರಲಿವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News