×
Ad

ಡಿ.21ಕ್ಕೆ ಬೃಹತ್ ಶರೀಅತ್ ಸಂರಕ್ಷಣಾ ಸಮಾವೇಶ

Update: 2016-12-17 23:09 IST

ಭಟ್ಕಳ, ಡಿ.17: ಕೇಂದ್ರ ಸರಕಾರ ಹಾಗೂ ನ್ಯಾಯಾಲಯ ಗಳಿಂದ ಮುಸ್ಲಿಮ್ ಪರ್ಸನಲ್ ಹಾಗೂ ಶರೀಅತ್ ಕಾನೂನಿನಲ್ಲಿ ಹಸ್ತಕ್ಷೇಪವನ್ನು ಖಂಡಿಸಿ ಡಿ.21 ರಂದು ರಾತ್ರಿ 8:30ಕ್ಕೆ ಜಾಮಿಯಾ ಇಸ್ಲಾಮಿಯಾ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಬೃಹತ್ ಶರೀಅತ್ ಸಂರಕ್ಷಣಾ ಸಮಾವೇಶ ನಡೆಸಲಾಗುವುದು ಎಂದು ಶರೀಅತ್ ಸಂರಕ್ಷಣಾ ಸಮಾವೇಶದ ಮಾಧ್ಯಮ ಸಂಚಾಲಕ ವೌಲಾನ ಅಬ್ದುಲ್ ಅಲೀಮ್ ಖಾಸ್ಮಿ ತಿಳಿಸಿದರು.


ಅವರು ಶನಿವಾರ ಸಂಜೆ ತಂಝೀಮ್ ಕಾರ್ಯಾಲಯ ದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು.
  ಭಾರತೀಯ ಸಂವಿಧಾನ ಪ್ರತಿಯೊಬ್ಬರಿಗೂ ತಮ್ಮ ತಮ್ಮ ಧರ್ಮದಂತೆ ಜೀವಿಸುವ ಸ್ವಾತಂತ್ರ್ಯ ನೀಡಿದೆ. ಅದೇ ರೀತಿ ಪ್ರತಿ ಸಮುದಾಯಕ್ಕೆ ತನ್ನದೇ ಆದ ವೈಯಕ್ತಿಕ ಹಾಗೂ ವಿಭಿನ್ನ ರೀತಿಯ ಕಾನೂನುಗಳಿದ್ದು, ಅದಕ್ಕೆ ಕಾನೂನಿನ ಮಾನ್ಯತೆಯಿದೆ.

ಇವುಗಳಲ್ಲಿ ಕುರ್‌ಆನ್ ಮತ್ತು ಸುನ್ನತ್ ಆಧಾರದಲ್ಲಿ ರಚಿತಗೊಂಡಿರುವ ಮುಸ್ಲಿಮ್ ಪರ್ಸನಲ್ ಲಾ ಕೂಡ ಒಂದಾಗಿದೆ.ಓರ್ವ ಮುಸ್ಲಿಮನ ಬದುಕಿನ ತಳಹದಿ, ತನ್ನ ಜೀವನ ಮತ್ತು ಮರಣ ಕೇವಲ ಅಲ್ಲಾಹನಿಗಾಗಿದೆ ಎಂಬ ವಿಶ್ವಾಸದ ಆಧಾರದಲ್ಲಿ ಸ್ಥಾಪಿತವಾಗಿದೆ. ಅವನ ಪ್ರತಿಯೊಂದು ಕರ್ಮವು ಅಲ್ಲಾಹನ ಆಜ್ಞೆಗೆ ಅಧೀನವಾಗಿದೆ ಎಂದರು.
 ಮುಸ್ಲಿಮರು ತಮ್ಮ ವೈಯಕ್ತಿಕ ಜೀವನದ ಎಲ್ಲ ಸಮಸ್ಯೆಗಳ ಪರಿಹಾರಕ್ಕೆ ಶರೀಅತ್ ಕಾನೂನನ್ನೇ ಅವಲಂಬಿಸಿದ್ದು ಇದಕ್ಕೆ ಬೇರೊಂದು ಮಾರ್ಗ ಇಲ್ಲ ಎಂದರು.
ದೇಶದಲ್ಲಿ ಸಮಾನ ಸಿವಿಲ್ ಕೋಡ್ ಅಥವಾ ಮುಸ್ಲಿಮ್ ಮಹಿಳೆಯರ ಮೇಲಿನ ಶೋಷಣೆಯ ಹೆಸರಿನಲ್ಲಿ ಸರಕಾರ ಮತ್ತು ನ್ಯಾಯಾಲಯಗಳ ಮೂಲಕ ಮುಸ್ಲಿಮರ ವೈಯಕ್ತಿಕ ಕಾನೂನಿನಲ್ಲಿ ಮೂಗು ತೂರಿಸುವ ಹುನ್ನಾರ ನಡೆಸುತ್ತಿದ್ದು, ಇದನ್ನು ಮುಸ್ಲಿಮ್ ಸಮುದಾಯ ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ ಎಂದರು. ತಂಝೀಮ್ ಮೀಡಿಯಾ ವಾಚ್ ಕಮಿಟಿಯ ಸಂಚಾಲಕ ಡಾ.ಮುಹಮ್ಮದ್ ಹನೀಫ್ ಶಬಾಬ್ ಮಾತನಾಡಿ, ಮುಸ್ಲಿಮ್ ಸಮುದಾಯ ಶರೀಅತ್ ಕಾನೂನಿನಲ್ಲಿ ಸರಕಾರ ಹಾಗೂ ನ್ಯಾಯಾಲಯಗಳು ಮಾಡುತ್ತಿರುವ ಹಸ್ತಕ್ಷೇಪವನ್ನು ಎಂದಿಗೂ ಸಹಿಸುವುದಿಲ್ಲ. ತಲಾಖ್ ಮತ್ತು ಮುಸ್ಲಿಮ್ ಮಹಿಳೆಯರ ಮೇಲೆ ಅತಿರೇಕ ನಡೆಯುತ್ತಿದೆ ಎಂಬ ಕಾರಣಕ್ಕಾಗಿ ಪ್ರಕರಣ ಈಗ ಮತ್ತೊಮ್ಮೆ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ. ಮತ್ತೊಂದೆಡೆ ಸ್ವತಃ ಸರಕಾರವೇ ಮುಸ್ಲಿಮ್ ಪರ್ಸನಲ್ ಲಾ ಅನ್ನು ಗುರಿಯಾಗಿಸಿಕೊಂಡು ಲಾ ಕಮಿಷನ್ ಮೂಲಕ ಸಮಾನ ನಾಗರಿಕ ಸಂಹಿತೆ ಜಾರಿಗೊಳಿಸುವ ಪ್ರಯತ್ನಕ್ಕೆ ಕೈಹಾಕಿದೆ. ಆದರೆ ಸರಕಾರದ ಸಮಾನ ನಾಗರಿಕ ಸಂಹಿತೆ ಕುರಿತ ಸ್ಪಷ್ಟ ಚಿತ್ರಣ ಇದುವರೆಗೂ ಸಾರ್ವಜನಿಕರ ಎದುರು ಇಟ್ಟಿಲ್ಲ ಎಂದರು.


 ಅದನ್ನು ರದ್ದು ಮಾಡುವ ಅಥವಾ ಮಾನ್ಯ ಮಾಡುವ ಪ್ರಶ್ನೆಯೇ ಉದ್ಭವಿಸದು. ಒಂದು ವೇಳೆ ಸಮಾನ ನಾಗರಿಕ ಸಂಹಿತೆ ಜಾರಿಗೊಂಡರೂ ಇದು ಕೇವಲ ಮುಸ್ಲಿಮರ ಸಮಸ್ಯೆಯಲ್ಲ. ಬದಲಾಗಿ ಯಾವೆಲ್ಲ ಸಮುದಾಯಗಳಲ್ಲಿ ತಮ್ಮದೇ ಆದ ವೈಯಕ್ತಿಕ ಕಾನೂನು ಇದೆಯೇ ಆ ಎಲ್ಲ ಸಮುದಾಯ, ವರ್ಗ, ಸಮಾಜದ ಸಮಸ್ಯೆಯೂ ಆಗುವುದರಲ್ಲಿ ಎರಡು ಮಾತಿಲ್ಲ. ಆದರೆ ಮುಸ್ಲಿಮ್ ವೈಯಕ್ತಿಕ ಕಾನೂನಿನ ಹರಣ ಮಾಡುವ ಯೋಜನೆ ಮಾತ್ರ ಇಲ್ಲಿ ಸ್ಪಷ್ಟವಾಗಿ ಕಾಣಿಸುತ್ತಿದೆ ಎಂದರು.


ಆಲ್ ಇಂಡಿಯಾ ಮುಸ್ಲಿಮ್ ಪರ್ಸನಲ್ ಲಾಬೋರ್ಡ್ ಅಧ್ಯಕ್ಷ ಹಝ್ರತ್ ಮೌಲಾನ ಸೈಯದ್ ಮುಹಮ್ಮದ್‌ರಾಬೇ ಹಸನಿ ನದ್ವಿ, ಪ್ರಧಾನ ಕಾರ್ಯದರ್ಶಿ ಹಝ್ರತ್ ಮೌಲಾನ ವಲೀ ರಹ್ಮಾನಿ ಸಾಹೇಬ್, ದಾರುಲ್ ಉಲೂಮ್ ನದ್ವತುಲ್ ಉಲಮಾ ಲಖ್ನೋ ಇದರ ಆಡಳಿತಾಧಿಕಾರಿ ಹಝ್ರತ್ ಮೌಲಾನ ಸೈಯದ್ ಮುಹಮ್ಮದ್ ವಾಝೆಹ್‌ರಶೀದ್ ಸಾಹೇಬ್ ನದ್ವಿ, ದಾರುಲ್‌ಉಲೂಮ್ ನದ್ವತುಲ್ ಉಲಮಾ ಲಖ್ನೋದ ಪ್ರಾಂಶುಪಾಲ ಹಝ್ರತ್ ಮೌಲಾನಾ ಡಾ. ಸಯೀದುರ್ರಹ್ಮಾನ್ ಸಾಹೇಬ್ ಆಝ್ಮಿ, ಮೌಲಾನ ತೌಖೀರ್‌ರಝಾ, ಜಮಾಅತೆ ಇಸ್ಲಾಮಿ ಹಿಂದ್ ರಾಷ್ಟ್ರೀಯ ಉಪಾಧ್ಯಕ್ಷ ಸೈಯದ್ ಸಾದತುಲ್ಲಾ ಹುಸೈನ್, ಅಂತಾರಾಷ್ಟ್ರೀಯ ಮುಸ್ಲಿಮ್ ವಿದ್ವಾಂಸ ಹಝ್ರತ್ ಮೌಲಾನ ಸೈಯದ್ ಸಲ್ಮಾನ್ ಸಾಹೇಬ್ ಹುಸೈನ್ ನದ್ವಿ ಮುಂತಾದ ಗಣ್ಯರು, ಉಲೆಮಾಗಳು, ಪಂಡಿತರು ಸಮಾವೇಶವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ ಎಂದರು.
ಸಮಾವೇಶದಲ್ಲಿ ಗೋವಾದಿಂದ ಮಂಗಳೂರು ವರೆಗಿನ ವಿವಿಧ ಜಮಾಅತ್ ಸದಸ್ಯರು, ಸಾರ್ವಜನಿಕರು ಸಾವಿರಾರು ಸಂಖ್ಯೆಯಲ್ಲಿ ಭಾಗವಹಿಸಲಿದ್ದಾರೆ ಎಂದರು.
ಈ ಸಂದರ್ಭದಲ್ಲಿ ತಂಝೀಮ್ ಉಪಾಧ್ಯಕ್ಷ ಜಾಫರ್ ಮೊಹತೆಶಮ್, ಅಬ್ದುಲ್‌ರಕೀಬ್‌ಎಂ.ಜೆ, ಸಿದ್ದೀಕ್ ಡಿ.ಎಫ್. ಮತ್ತಿತರರು ಉಪಸ್ಥಿತರಿದ್ದರು. ತಂಝೀಮ್ ಪ್ರಧಾನ ಕಾರ್ಯದರ್ಶಿ ಮುಹಿದ್ದಿನ್ ಅಲ್ತಾಫ್ ಖರೂರಿ ಸ್ವಾಗತಿಸಿ, ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News