ಬೆತ್ತಲೆ ಪ್ರತಿಭಟನೆಗೆ ಆಡಳಿತ ವ್ಯವಸ್ಥೆಯ ನಿರ್ಲಕ್ಷ್ಯ ಕಾರಣ: ಸಿಪಿಎಂ ಆರೋಪ
Update: 2016-12-19 23:12 IST
ಮಡಿಕೇರಿ, ಡಿ.19: ದಿಡ್ಡಳ್ಳಿ ನಿರಾಶ್ರಿತರ ಹೋರಾಟಕ್ಕೆ ಬೆಂಬಲ ಸೂಚಿಸಿರುವ ಸಿಪಿಎಂ ಪಕ್ಷ, ಆದಿವಾಸಿಗಳು ಬೆತ್ತಲೆ ಪ್ರತಿಭಟನೆ ನಡೆಸುವಷ್ಟು ಶೋಚನೀಯ ಪರಿಸ್ಥಿತಿಗೆ ತಲುಪಲು ಆಡಳಿತ ವ್ಯವಸ್ಥೆಯ ನಿರ್ಲಕ್ಷ್ಯ ಮನೋಭಾವವೇ ಕಾರಣವೆಂದು ಆರೋಪಿಸಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಪಿಎಂ ಪಕ್ಷದ ರಾಜ್ಯ ಸಮಿತಿ ಸದಸ್ಯ ಎಸ್.ವೈ. ಗುರುಶಾಂತ್, ಜಿಲ್ಲಾಡಳಿತ ಆದಿವಾಸಿಗಳ ಕ್ಷಮೆ ಕೋರಬೇಕೆಂದು ಒತ್ತಾಯಿಸಿದರು.
ಡಿ.22ರಂದು ಆದಿವಾಸಿಗಳು ನಡೆಸುವ ಪಾದಯಾತ್ರೆಗೆ ಪಕ್ಷ ಬೆಂಬಲ ನೀಡಲಿದೆ ಎಂದರು.
ಕಳೆದ 3 ವರ್ಷಗಳಿಂದ ಗಿರಿಜನ ಅಭಿವೃದ್ಧಿಗಾಗಿ ಬಿಡುಗಡೆಯಾಗಿರುವ ಅನುದಾನ ಖರ್ಚಾಗದೆ 29 ಸಾವಿರ ಕೋಟಿ ರೂ.ಗಳಷ್ಟು ಬಾಕಿ ಉಳಿದಿದೆ. ಈ ಹಣದಿಂದ ಗಿರಿಜನರಿಗೆ ನಿವೇಶನ, ವಸತಿ ಮತ್ತು ಮೂಲಭೂತ ಸೌಲಭ್ಯಗಳನ್ನು ಒದಗಿಸಬಹುದಾಗಿತ್ತು. ಆದರೆ, ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಇಂದು ದುರ್ಬಲರು ಬೀದಿ ಪಾಲಾಗುವಂತಾಗಿದೆ ಎಂದು ಅವರು ಆರೋಪಿಸಿದರು.