ಆಂಗ್ಲೋ ಉರ್ದು ಪ್ರೌಢಶಾಲೆಯಲ್ಲಿ ಸಾಹಿತ್ಯಿಕ ಸ್ಪರ್ಧೆ
ಭಟ್ಕಳ, ಡಿ.24: ಅಂಜುಮನ್ ಹಾಮಿಯ ಮುಸ್ಲಿಮೀನ್ ಶಿಕ್ಷಣ ಸಂಸ್ಥೆಯ ಇಸ್ಲಾಮಿಯಾ ಆಂಗ್ಲೋ ಉರ್ದು ಪ್ರೌಢಶಾಲೆಯಲ್ಲಿ ಶನಿವಾರ ವಾರ್ಷಿಕ ಸಾಹಿತ್ಯಿಕ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದ ಜಾಮಿಯಾ ಮಸೀದಿ (ಚಿನ್ನದಪಳ್ಳಿ)ಯಖತೀಬ್ ಮೌಲಾನ ಅಬ್ದುಲ್ ಅಲೀಮ್ ಮಾತನಾಡಿ, ಶ್ರಮವು ನಮ್ಮನ್ನು ಉನ್ನತ ಸ್ಥಾನಕ್ಕೆ ಕೊಂಡೊಯ್ಯಬಲ್ಲುದು. ನಾವು ಆಲಸಿಗಳಾಗಿ ಜೀವಿಸಿದರೆ ಏನನ್ನೂ ಸಾಧಿಸಲು ಸಾಧ್ಯವಿಲ್ಲ. ಶ್ರಮವೇ, ಕಾರ್ಯವೇ ಸಮುದಾಯವನ್ನು ಸಮಾಜದಲ್ಲಿ ತಲೆ ಎತ್ತಿ ನಡೆಯುವಂತೆ ಮಾಡುವುದು ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಉಪಾಧ್ಯಕ್ಷ ಸೈಯದ್ ಅಬ್ದುಲ್ ರಹ್ಮಾನ್ ಬಾತಿನ್ ಮಾತನಾಡಿ, ‘ಶಿಕ್ಷಕರು ನಮಗಾಗಿ ಬಹಳಷ್ಟು ಶ್ರಮವಹಿಸಿದ್ದರು. ಆ ಕಾರಣದಿಂದಲೇ ನಾವು ಸಾಹಿತ್ಯಿಕವಾಗಿ ಇಷ್ಟೊಂದು ಮುಂದೆ ಬಂದಿರುವುದು. ಈಗ ನಿಮ್ಮ ಶಿಕ್ಷಕರು ನಿಮ್ಮ ಮೇಲೆ ಇಷ್ಟೊಂದು ಶ್ರಮ ವಹಿಸುತ್ತಿದ್ದು, ನೀವು ಕೂಡ ಸಮಾಜಕ್ಕೆ ಸಾಹಿತ್ಯಿಕವಾಗಿ ಕೊಡುಗೆ ನೀಡಬೇಕು’ ಎಂದರು.
ವೇದಿಕೆಯಲ್ಲಿ ಹೈಸ್ಕೂಲ್ ಬೋರ್ಡ್ ಕಾರ್ಯದರ್ಶಿ ಅಬ್ದುಲ್ ವಾಜೀದ್ ಕೋಲಾ ಸೇರಿದಂತೆ ಆಡಳಿತ ಮಂಡಳಿ ಸದಸ್ಯರು ಉಪಸ್ಥಿತರಿದ್ದರು.
ಶಾಲಾ ಮುಖ್ಯಾಧ್ಯಾಪಕ ಶಬ್ಬಿರ್ ಆಹ್ಮದ್ ದಫೆದಾರ್ ಸ್ವಾಗತಿಸಿದರು. ಮೌಲಾನ ಶಾಹೀನ್ ಖಮರ್ ಪರಿಚಯಿಸಿದರು. ಶಿಕ್ಷಕ ಅಬ್ದುಲ್ ರಶೀದ್ ಮಿರ್ಜಾನಿ ಹಾಗೂ ಮೌಲಾನ ಅಬ್ದುಲ್ ಹಫೀಝ್ ಖಾನ್ ಕಾರ್ಯಕ್ರಮ ನಿರೂಪಿಸಿದರು. ಮೌಲಾನ ಮುಹಮ್ಮದ್ ಅಶ್ರಫ್ ಮುಅಲ್ಲಿಮ್ ವಂದಿಸಿದರು.