ದಿಡ್ಡಳ್ಳಿಯ ನಿರಾಶ್ರಿತರ ಮಕ್ಕಳ ಯೋಗಕ್ಷೇಮ ವಿಚಾರಿಸಿದ ಮಕ್ಕಳ ಕಲ್ಯಾಣ ಸಮಿತಿ

Update: 2016-12-25 14:30 GMT

ಮಡಿಕೇರಿ, ಡಿ.25 :  ದಿಡ್ಡಳ್ಳಿಯ ನಿರಾಶ್ರಿತ ಆದಿವಾಸಿಗಳನ್ನು ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷೆ ಆರತಿ ಸೋಮಯ್ಯ ಮತ್ತು ಸದಸ್ಯರ ತಂಡ ಭೇಟಿಯಾಗಿ ಮಾಹಿತಿ ಪಡೆಯಿತು.

 ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷೆ ಆರತಿ ಸೋಮಯ್ಯ, ಸದಸ್ಯೆ ಗಾಯತ್ರಿ ಕುಮಾರ್, ಬಾಲಕರ ಬಾಲಮಂದಿರದ ಅಧೀಕ್ಷಕ ಬಿ.ಡಿ.ರವೀಂದ್ರ, ಮಕ್ಕಳ ರಕ್ಷಣಾ ಘಟಕದ ಮಂಜುನಾಥ್, ವಿಶೇಷ ಬಾಲ ಪೊಲೀಸ್ ಘಟಕದ ಸುಮತಿ ಮತ್ತು ಮಹೇಶ್ ಅವರನ್ನೊಳಗೊಂಡ ತಂಡವು ದಿಡ್ಡಳ್ಳಿಗೆ ಭೇಟಿ ನೀಡಿ ನಿರಾಶ್ರಿತರ ಕುಟುಂಬದೊಂದಿಗೆ ಚರ್ಚಿಸಿತು.
   
ನಿರಾಶ್ರಿತರ ಪ್ರದೇಶದಲ್ಲಿ ವಾಸವಾಗಿರುವ ಕುಟುಂಬಗಳಲ್ಲಿನ ಮಕ್ಕಳ ಆರೋಗ್ಯ, ಜೀವನ ಸ್ಥಿತಿಗತಿ ಅವಲೋಕಿಸಿದ ತಂಡವು ಈ ಮಕ್ಕಳ ಪಾಲನೆ, ರಕ್ಷಣೆಗೆ ಕೈಗೊಂಡಿರುವ ಕ್ರಮಗಳ ಬಗ್ಗೆ ಸ್ಥಳೀಯ ಅಂಗನವಾಡಿ ಶಿಕ್ಷಕಿಯೊಂದಿಗೆ ಮಾಹಿತಿ ಪಡೆಯಿತು.

ಒಂದು ತಿಂಗಳ ಮಟ್ಟಿಗೆ ನಿರಾಶ್ರಿತರು ಬೀಡು ಬಿಟ್ಟಿರುವ ಈ ವ್ಯಾಪ್ತಿಯ ಬಸವನಹಳ್ಳಿ ಆಶ್ರಮ ಶಾಲೆಯಲ್ಲಿ ಖಾಲಿ ಇರುವ ಕೊಠಡಿಯಲ್ಲಿ ಅಂಗನವಾಡಿ ನಡೆಸಲು ಅವಕಾಶ ಕೋರಲಾಯಿತು. ತಟ್ಟಳ್ಳಿಯಲ್ಲಿರುವ ಅಂಗನವಾಡಿ ಶಿಕ್ಷಕಿ ಚಂದ್ರಮ್ಮ ಅವರಿಗೆ ಸೋಮವಾರದಿಂದ ಮಕ್ಕಳಿಗೆ ಚಟುವಟಿಕೆ ನಡೆಸುವಂತೆ ಸೂಚಿಸಲಾಯಿತು.

ಅಡುಗೆ ಅನಿಲದ ಅನುಕೂಲ ಇಲ್ಲದೆ ಇರುವುದರಿಂದಾಗಿ ಸಮಾಜ ಕಲ್ಯಾಣ ಇಲಾಖೆ ವ್ಯವಸ್ಥೆಗೊಳಿಸಿರುವ ಮಧ್ಯಾಹ್ನದ ಊಟವನ್ನೇ ಮಕ್ಕಳಿಗೆ ನೀಡಿ ಸಂಜೆ ತನಕ ಮಕ್ಕಳನ್ನು ಅಂಗನವಾಡಿಯಲ್ಲಿ ನೋಡಿಕೊಳ್ಳುವಂತೆಯೂ ಸಮಗ್ರ ಶಿಶು ಅಭಿವೃದ್ಧಿ ಯೋಜನಾಧಿಕಾರಿ ದಮಯಂತಿ ಅವರಿಗೆ ತಂಡದ ಸದಸ್ಯರು ಸೂಚಿಸಿದರು.

ನಿರಾಶ್ರಿತರ ಶಿಬಿರದಲ್ಲಿನ ಗರ್ಭಿಣಿ, ಬಾಣಂತಿಯರು, ಹಸುಕೂಸುಗಳ ಆರೋಗ್ಯವನ್ನೂ ತಂಡದ ಸದಸ್ಯರು ಪರಿಶೀಲಿಸಿದರು.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News