×
Ad

​ಶಿವಮೊಗ್ಗ ಬಿಜೆಪಿಯಲ್ಲಿ ಬಹಿರಂಗ ಬಣ ರಾಜಕಾರಣ!

Update: 2017-01-14 22:50 IST

ಸಂಧಾನಕ್ಕೆ ಸಂಘಪರಿವಾರ, ಹಿರಿಯ ಬಿಜೆಪಿಗರ ಯತ್ನ
ಬಿ. ರೇಣುಕೇಶ್
ಶಿವಮೊಗ್ಗ, ಜ. 14: ಸಂಗೊಳ್ಳಿ ರಾಯಣ್ಣ ಬ್ರಿಗೇಡ್‌ಗೆ ಸಂಬಂಧಿಸಿದಂತೆ ಬಿಜೆಪಿ ಪಕ್ಷದ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪಹಾಗೂ ವಿಧಾನಪರಿಷತ್ತಿನ ವಿರೋಧ ಪಕ್ಷದ ನಾಯಕ ಕೆ.ಎಸ್.ಈಶ್ವರಪ್ಪ ನಡುವಿನ ಕಲಹ ತಾರಕಕ್ಕೇರಿದ್ದು, ದಿನಕ್ಕೊಂದು ತಿರುವು ಪಡೆದು ಕೊಳ್ಳುತ್ತಿದೆ. ಅಲ್ಲದೆ, ಪಕ್ಷದ ಮುಖಂಡರ ನಡುವೆ ಆರೋಪ-ಪ್ರತ್ಯಾರೋಪಗಳ ಜೋರಾಗುತ್ತಿವೆ. ಮತ್ತೊಂದೆಡೆ ಈ ಇಬ್ಬರು ಮುಖಂಡರ ಕಲಹವು ಸಹಜವಾಗಿಯೇ ಅವರ ತವರೂರು ಶಿವಮೊಗ್ಗ ಬಿಜೆಪಿಯ ಮೇಲೂ ಪರಿಣಾಮ ಬೀರಿದ್ದು, ಇಷ್ಟು ದಿನ ಪಕ್ಷದಲ್ಲಿ ಗುಪ್ತವಾಗಿ ಹೊಗೆಯಾಡುತ್ತಿದ್ದ ‘ಬಣ ರಾಜಕಾರಣ’ವು ಬೆಂಕಿಯಾಗಿ ಉರಿಯಲಾರಂಭಿಸಿದೆ! ಇದೀಗ ಬಹಿರಂಗವಾಗಿಯೇ ತಮ್ಮ ಬಣದ ನಾಯಕರ ಪರ ಕೆಲ ಮುಖಂಡರು ವಕಲಾತ್ತು ವಹಿಸಲಾರಂಭಿಸಿದ್ದು, ಕಮಲ ಪಾಳೇಯದಲ್ಲಿ ಮತ್ತೊಮ್ಮೆ ದಾಯಾದಿ ಕಲಹ ಭುಗಿಲೇಳುವ ಲಕ್ಷಣಗಳು ಗೋಚರಿಸಲಾರಂಭಿಸಿದೆ.

ಹೌದು. ಇದಕ್ಕೆ ಸಾಕ್ಷಿ ಎಂಬಂತೆ ಶಿವಮೊಗ್ಗದವರೇ ಆಗಿರುವ ಬಿಜೆಪಿ ಪಕ್ಷದ ರಾಜ್ಯ ಉಪಾಧ್ಯಕ್ಷ ಎಂ.ಬಿ. ಭಾನುಪ್ರಕಾಶ್ ಹಾಗೂ ರಾಜ್ಯ ಕ್ರೀಡಾ ಪ್ರಾಧಿಕಾರದ ಮಾಜಿ ಉಪಾಧ್ಯಕ್ಷ ಗಿರೀಶ್ ಪಟೇಲ್ ಅವರು ಬಹಿರಂಗವಾಗಿಯೇ ಯಡಿಯೂರಪ್ಪವಿರುದ್ಧ ಗುಡುಗಲಾರಂಭಿಸಿದ್ದು, ಇದು ಜಿಲ್ಲಾ ಬಿಜೆಪಿ ಪಾಳೇಯದಲ್ಲಿ ತೀವ್ರ ಸಂಚಲನ ಸೃಷ್ಟಿಸಿದೆ.
ಜಿಲ್ಲಾ ಬಿಜೆಪಿಯಲ್ಲಿ ಯಡಿಯೂರಪ್ಪ ಹಾಗೂ ಈಶ್ವರಪ್ಪಬಣಗಳು ಈ ಮೊದಲಿನಿಂದಲೂ ಸಕ್ರಿಯವಾಗಿವೆ.

ಈ ಎರಡೂ ಬಣಗಳ ನಡುವೆ ಮುಖಂಡರು ಹರಿದು ಹಂಚಿ ಹೋಗಿದ್ದಾರೆ. ಪಕ್ಷದ ಪದಾಧಿಕಾರಿಗಳ ನೇಮಕ ಮತ್ತಿತರ ಸಂದರ್ಭಗಳಲ್ಲಿ ವಿರೋಧಿ ಬಣದವರನ್ನು ದೂರವಿಡುವ ಮೂಲಕ ಅವರ ಪ್ರಾಬಲ್ಯ ಕುಗ್ಗಿಸುವ ಪ್ರಯತ್ನಗಳು ನಡೆದುಕೊಂಡು ಬಂದಿರುವುದು ಸುಳ್ಳಲ್ಲ. ಬಿಎಸ್‌ವೈ ಕೆಜೆಪಿಯಿಂದ ಮತ್ತೆ ಬಿಜೆಪಿಗೆ ಪುನಾರಾಗಮನ ಮಾಡಿದಾಗ, ಅವರ ಬೆಂಬಲಿಗರಿಗೆ ಪಕ್ಷದ ಪ್ರಮುಖ ಹುದ್ದೆಗಳಿಂದ ದೂರವಿಡುವ ಕೆಲಸ ನಡೆಯಿತು. ಸ್ವತಃ ಬಿಎಸ್‌ವೈ ಸೂಚಿಸಿದರೂ ಅವರ ಬೆಂಬಲಿಗರಿಗೆ ಸೂಕ್ತ ಸ್ಥಾನಮಾನ, ಪ್ರಾತಿನಿಧ್ಯ ದೊರಕಲಿಲ್ಲ. ಜಿಲ್ಲೆಯಲ್ಲಿಯೂ ಇದೇ ಪರಿಸ್ಥಿತಿ ಕಂಡುಬಂದಿತು.

ಇದು ಬಿಎಸ್‌ವೈ ಅವರಲ್ಲಿ ತೀವ್ರ ಅಸಮಾಧಾನ ಉಂಟು ಮಾಡಿತ್ತು. ಆನಂತರದ ಬೆಳವಣಿಗೆಯಲ್ಲಿ ಬಿಎಸ್‌ವೈ ಪಕ್ಷದ ರಾಜ್ಯಾಧ್ಯಕ್ಷ ಪದವಿಗೇರಿದರೋ ಈ ಹಿಂದೆ ತಮ್ಮನ್ನು ಕಡೇಗಣಿಸಿದ್ದ ಮುಖಂಡರಿಗೆ ತಿರುಗೇಟು ನೀಡುವ ಕೆಲಸ ಆರಂಭಿಸಿದರು.

ಅದರಲ್ಲಿಯೂ ತವರೂರು ಶಿವಮೊಗ್ಗ ಬಿಜೆಪಿಯಲ್ಲಿ ಹಿಂದಿದ್ದ ಹಿಡಿತ ಮರು ಸಾಧಿಸಲು ಮುಂದಾದರು. ಈಶ್ವರಪ್ಪ ಅವರ ಆಕ್ಷೇಪದ ನಡುವೆಯೂ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ತಮ್ಮ ಕಟ್ಟಾ ಬೆಂಬಲಿಗ ಎಸ್. ರುದ್ರೇಗೌಡರನ್ನು ನಿಯೋಜಿಸಿದರು. ಸ್ಪೋಟಗೊಂಡಿದೆ: ಇದು ಈಶ್ವರಪ್ಪ ಮತ್ತವರ ಬೆಂಬಲಿಗರಲ್ಲಿ ತೀವ್ರ ಅಸಮಾಧಾನ ಉಂಟು ಮಾಡಿದ್ದರೂ, ಬಹಿರಂಗವಾಗಿ ತೋಡಿಕೊಳ್ಳದ ಸ್ಥಿತಿ ಅವರದ್ದಾಗಿತ್ತು.

ಆದರೆ, ಯಾವಾಗ ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಶಿವಮೊಗ್ಗ ನಗರ ಕ್ಷೇತ್ರದಿಂದ ತಮಗೆ ಟಿಕೆಟ್ ಕೈ ತಪ್ಪುವ ಪರಿಸ್ಥಿತಿ ಸೃಷ್ಟಿಯಾಗಲಾರಂಭಿಸಿತೋ, ಎಚ್ಚೆತ್ತ ಈಶ್ವರಪ್ಪ ಬಹಿರಂಗವಾಗಿಯೇ ಯಡಿಯೂರಪ್ಪ ವಿರುದ್ಧ ಸೆಡ್ಡು ಹೊಡೆಯಲಾರಂಭಿಸಿದರು. ಇದೀಗ ಈಶ್ವರಪ್ಪ ಅವರಿಗೆ ಬೆಂಬಲವಾಗಿ ತವರೂರಿನ ಇಬ್ಬರು ಮುಖಂಡರು ನಿಂತು ಕೊಂಡಿದ್ದಾರೆ. ಮುಂದೆ ಜಿಲ್ಲಾ ಬಿಜೆಪಿಯಲ್ಲಿ ‘ಬಣ ರಾಜಕಾರಣ’ ಇನ್ಯಾವ ತಿರುವು ಪಡೆದುಕೊಳ್ಳಲಿದೆ ಎಂಬುದನ್ನು ಕಾದು ನೋಡಬೇಕಾಗಿದೆ.


ಈ ಬಾರಿ ತಲೆಬಾಗದಿರುವ ಕಠಿಣ ನಿರ್ಧಾರ..!
ಈ ಹಿಂದೆ ಯಡಿಯೂರಪ್ಪರೊಂದಿಗೆ ವೈಮನಸ್ಸು ಉಂಟಾದಾಗ ಎಷ್ಟೋ ಬಾರಿ ಈಶ್ವರಪ್ಪರವರೇ ವೈಮನಸ್ಸು ಶಮನಕ್ಕೆ ಮುಂದಾಗಿದ್ದರು. ಆದರೆ, ಈ ಬಾರಿ ಯಾವುದೇ ಕಾರಣಕ್ಕೂ ಯಡಿಯೂರಪ್ಪ ಅವರಿಗೆ ತಲೆ ಬಾಗದಿರುವ ಕಠಿಣ ನಿರ್ಧಾರವನ್ನು ಈಶ್ವರಪ್ಪ ತಳೆದಿದ್ದಾರೆ. ತಮ್ಮಿಬ್ಬರ ನಡುವಿನ ವೈಮ ನಸ್ಸಿಗೆ ತಾರ್ಕಿಕ ಅಂತ್ಯ ಕಾಣಿಸಲು ನಿರ್ಧರಿಸಿದ್ದಾರೆ. ಶತಾಯಗತಾಯ ಈ ಬಾರಿ ಯಡಿಯೂರಪ್ಪಅವರಿಗೆ ತಕ್ಕ ತಿರುಗೇಟು ನೀಡಲು ನಿರ್ಧರಿಸಿರುವ ಹಿನ್ನೆಲೆಯಲ್ಲಿಯೇ, ಈಶ್ವರಪ್ಪಅವರು ಬ್ರಿಗೇಡ್‌ನಿಂದ ಹೊರಬರದಿರುವ ನಿರ್ಧಾರ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.


ಶಿವಮೊಗ್ಗದಲ್ಲಿ ಸಂಧಾನಕ್ಕೆ ಮುಂದುವರಿದ ಪ್ರಯತ್ನ...!
ಬಿಜೆಪಿಗೆ ವಿರುದ್ಧ ದಿಕ್ಕುಗಳಾಗಿ ಪರಿಣಮಿಸಿರುವ ಯಡಿಯೂರಪ್ಪಹಾಗೂ ಈಶ್ವರಪ್ಪ ನಡುವೆ ಸಂಧಾನ ನಡೆಸಲು ಶಿವಮೊಗ್ಗದ ಕೆಲ ಬಿಜೆಪಿ ಹಿರಿಯ ನಾಯಕರು ಹಾಗೂ ಸಂಘಪರಿವಾರದ ಮುಖಂಡರು ಪ್ರಯತ್ನಿಸುತ್ತಿರುವ ಮಾಹಿತಿಗಳು ಕೇಳಿಬರುತ್ತಿವೆ. ಆದರೆ, ಯಡಿಯೂರಪ್ಪ ಮತ್ತು ಈಶ್ವರಪ್ಪ ತಮ್ಮ ನಿಲುವುಗಳಿಗೆ ಬಿಗಿಯಾಗಿ ಅಂಟಿಕೊಂಡಿರುವುದರಿಂದ ಒಂದೇ ವೇದಿಕೆಯಲ್ಲಿ ಇವರಿಬ್ಬರನ್ನು ಕೆರೆತರಲು ಸಂಧಾನಕಾರರಿಗೆ ಸಾಧ್ಯವಾಗುತ್ತಿಲ್ಲ ಎಂದು ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News