ಯುವತಿಯನ್ನು ಮಾತನಾಡಿಸಿದ ದಲಿತ ಯುವಕನನ್ನು ಬೆತ್ತಲೆಗೊಳಿಸಿ ಥಳಿತ
ತುಮಕೂರು, ಜ.18: ಯುವತಿಯೊಬ್ಬಳನ್ನು ಮಾತನಾಡಿಸಿದ ಕಾರಣಕ್ಕೆ ದಲಿತ ಯುವಕನೊಬ್ಬನನ್ನು ಮನೆಯೊಂದರಲ್ಲಿ ಕೂಡಿ ಹಾಕಿ ನಗ್ನಗೊಳಿಸಿ ಅಮಾನವೀಯವಾಗಿ ಥಳಿಸಿದ ಘಟನೆ ತುಮಕೂರು ಜಿಲ್ಲೆ ಗುಬ್ಬಿ ಪಟ್ಟಣದಲ್ಲಿ ನಡೆದಿರುವುದು ಬೆಳಕಿಗೆ ಬಂದಿದೆ.
ಗುಬ್ಬಿ ಪಟ್ಟಣದ ಸುಭಾಷ್ ನಗರ ನಿವಾಸಿ ಅಭಿಷೇಕ್ ಹಲ್ಲೆಗೊಳಗಾದ ಯುವಕ. ಪೆಯ್ಟಿಂಗ್ ಕೆಲಸ ಮಾಡುತ್ತಿದ್ದ ಈತ ಪ್ರಕಾಶ್ ಎಂಬವರ ಮಗಳೊಂದಿಗೆ ಮಾತನಾಡುತ್ತಿದ್ದ ಎನ್ನಲಾಗಿದೆ. ಇದೇ ಕಾರಣಕ್ಕೆ ಯುವತಿಯ ತಂದೆ ಪ್ರಕಾಶ್ ಸೇರಿದಂತೆ ಸುಮಾರು 10 ಮಂದಿಯ ತಂಡ ಅಭಿಷೇಕ್ನನ್ನು ತೋಟದ ಮನೆಯೊಂದರಲ್ಲಿ ಕೂಡಿ ಹಾಕಿ ಥಳಿಸಿದೆ. ಈ ವೇಳೆ ಅಭಿಷೇಕ್ನ್ನು ಬೆತ್ತಲೆಗೊಳಿಸಿದ ದುಷ್ಕರ್ಮಿಗಳು ಆತನ ಕೊರಳಿಗೆ ಚಪ್ಪಲಿ ಹಾರ ಹಾಕಿದೆ. ಅಲ್ಲದೇ ಕೊರಳಿದೆ ಸ್ಲೇಟ್ ಒಂದನ್ನು ತೂಗು ಹಾಕಿ ಅದರಲ್ಲಿ ‘ಹುಡುಗಿಯರನ್ನು ಕೆಣಕಿದರೆ ಇದೇ ಗತಿ ಎಂದು ಬರೆಸಿ’ ಫೋಟೊ ತೆಗೆಸಲಾಗಿದೆ. ಬೆತ್ತದಿಂದ ಅಮಾನವೀಯವಾಗಿ ಥಳಿಸಲಾಗಿದೆ.
ಈ ಬಗ್ಗೆ ಯುವತಿಯ ತಂದೆ ಸಹಿತ 10 ಮಂದಿಯ ವಿರುದ್ಧ ಅಭಿಷೇಕ್ ತಂದೆ ಪೊಲೀಸ್ ದೂರು ನೀಡಿದ್ದಾರೆ. ಘಟನಾ ಸ್ಥಳಕ್ಕೆ ಡಿವೈಎಸ್ಪಿ ಚಿದಾನಂದ ಸ್ವಾಮಿ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.
ಹಲ್ಲೆ ಮಾಡಿದವರ ವಿರುದ್ದ ಕ್ರಮಕ್ಕೆ ಸೂಚಿಸಿದ್ದಾರೆ. ಈ ಅಮಾನವೀಯ ಕೃತ್ಯಕ್ಕೆ ದಲಿತ ಹಾಗೂ ಪ್ರಗತಿಪರ ಸಂಘಟನೆಗಳು ತೀವ್ರ ವಿರೋದ ವ್ಯಕ್ತಪಡಿಸಿದ್ದು, ಆರೋಪಿಗಳ ಬಂಧನಕ್ಕೆ ಆಗ್ರಹಿಸಿ ಗುಬ್ಬಿ ಠಾಣೆ ಎದುರು ಧರಣಿ ನಡೆಸುತ್ತಿದ್ದಾರೆ.