ಶವ ಸಂಸ್ಕಾರಕ್ಕೆಂದು ಸ್ಮಶಾನಕ್ಕೆ ತೆಗೆದುಕೊಂಡು ಹೋದಾಗ ಎಚ್ಚೆತ್ತ ಹಸುಗೂಸು
ಹುಬ್ಬಳ್ಳಿ, ಜ.20: ಹಸುಗೂಸೊಂದನ್ನು ಶವ ಸಂಸ್ಕಾರಕ್ಕೆಂದು ಸ್ಮಶಾನಕ್ಕೆ ತೆಗೆದುಕೊಂಡು ಹೋದಾಗ ಮಗು ಎಚ್ಚೆತ್ತ ಘಟನೆ ಕಲಘಟಗಿ ತಾಲೂಕಿನ ದೇವಿಕೊಪ್ಪ ಗ್ರಾಮದಲ್ಲಿ ನಡೆದಿದೆ.
ಫಕೀರಪ್ಪ ಆಲದಮರದ ಹಾಗೂ ನೇತ್ರಾವತಿ ದಂಪತಿಯ 8 ದಿನಗಳ ಹಸುಳೆ.
ಜನವರಿ 12ರಂದು ಕಿಮ್ಸ್ ಆಸ್ಪತ್ರೆಯಲ್ಲಿ ಹೆಣ್ಣು ಮಗುವಿಗೆ ನೇತ್ರಾವತಿ ಜನ್ಮ ನೀಡಿದ್ದಳು. ಫಿಡ್ಸ್ ಖಾಯಿಲೆ ಇದ್ದ ಕಾರಣ ಹಸುಳೆಯನ್ನು ಹೆಚ್ಚಿನ ಚಿಕಿತ್ಸೆಗೆ ಧಾರವಾಡದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮಗುವಿನ ಚಿಕಿತ್ಸೆ ಫಲಕಾರಿಯಾಗದ ಕಾರಣ ಮನೆಗೆ ತೆಗೆದುಕೊಂಡು ಹೋಗಲು ವೈದ್ಯರು ಸೂಚಿಸಿದ್ದರು. ಮಗುವನ್ನು ಮನೆಗೆ ಕರೆದೊಯ್ಯುತ್ತಿದ್ದಾಗ ಮಗುವಿನ ಉಸಿರಾಟ ನಿಂತಿತ್ತು ಎನ್ನಲಾಗಿದೆ. ಹೀಗಾಗಿ ಪೋಷಕರು ಅಂತ್ಯ ಸಂಸ್ಕಾರಕ್ಕೆ ಸಿದ್ದತೆ ಮಾಡಿಕೊಂಡಿದ್ದರು.
ಸ್ಮಶಾನಕ್ಕೆ ತಗೆದುಕೊಂಡು ಹೋದಾಗ ಮಗು ಉಸಿರಾಡಲು ಆರಂಭಿಸಿತೆನ್ನಲಾಗಿದೆ. ನಂತರ ಮಗುವನ್ನು ಹೆಚ್ಚಿನ ಚಿಕಿತ್ಸೆಗೆಂದು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿ, ಚಿಕ್ಕಮಕ್ಕಳ ತೀವ್ರ ನಿಗಾ ಘಟಕದಲ್ಲಿ ಮಗುವಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದು ಬಂದಿದೆ.