ಸಾಲಬಾಧೆ: ರೈತ ಆತ್ಮಹತ್ಯೆ
ಶಿವಮೊಗ್ಗ, ಜ. 21: ಸಾಲಬಾಧೆಯಿಂದ ಬೇಸತ್ತು ರೈತರೊಬ್ಬರು ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಜಿಲ್ಲೆಯ ಹೊಸನಗರ ತಾಲೂಕಿನ ಸುಳುಗೋಡು ಗ್ರಾಮದಲ್ಲಿ ವರದಿಯಾಗಿದೆ. ಎಸ್.ಟಿ. ಶ್ರೀನಿವಾಸಗೌಡ(70) ಆತ್ಮಹತ್ಯೆ ಮಾಡಿಕೊಂಡ ರೈತ ಎಂದು ಗುರುತಿಸಲಾಗಿದೆ. ಇವರು ಮನೆಯ ಬಳಿಯೇ ಆತ್ಮಹತ್ಯೆಗೆ ಶರಣಾಗಿದ್ದಾರೆ. ಎಸ್.ಟಿ. ಶಿ್ರೀನಿವಾಸಗೌಡರು ಮಾಸ್ತಿಕಟ್ಟೆಯ ಎಸ್ಬಿಎಂ ಶಾಖೆಯಲ್ಲಿ 9 ಲಕ್ಷ ರೂ., ಶಿವಮೊಗ್ಗ ಮ್ಯಾಮ್ಕೋಸ್ನಲ್ಲಿ 1 ಲಕ್ಷ ರೂ. ಹಾಗೂ ಯಡೂರಿನ ಕೆನರಾ ಬ್ಯಾಂಕ್ ಶಾಖೆಯಲ್ಲಿ 3 ಲಕ್ಷ ರೂ. ಸಾಲ ಮಾಡಿಕೊಂಡಿದ್ದರು ಎನ್ನಲಾಗಿದೆ.
ಸಾಲ ಪಾವತಿಸುವಂತೆ ಬ್ಯಾಂಕ್ವೊಂದರಿಂದ ನೋಟಿಸ್ ಬಂದಿತ್ತು. ಆದರೆ ಸಾಲ ಮರು ಪಾವತಿ ಸಾಧ್ಯವಾಗಿರಲಿಲ್ಲ ಎಂದು ತಿಳಿದುಬಂದಿದೆ. ಇದರಿಂದ ಜೀವನದಲ್ಲಿ ಜಿಗುಪ್ಸೆಗೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಲಾಗಿದೆ. ಈ ಸಂಬಂಧ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.