ಕರಡಿ ದಾಳಿ: ರೈತನಿಗೆ ಗಂಭೀರ ಗಾಯ
Update: 2017-01-27 12:32 IST
ಮುಂಡಗೋಡ, ಜ.27: ಕರಡಿ ದಾಳಿಗೆ ಸಿಲುಕಿ ರೈತನೋರ್ವ ಗಂಭೀರವಾಗಿ ಗಾಯಗೊಂಡ ಘಟನೆ ತಾಲೂಕಿನ ಕೊಡಂಬಿ ಗ್ರಾಮದಲ್ಲಿ ಇಂದು ಬೆಳಗ್ಗೆ ನಡೆದಿದೆ.
ಗಂಭೀರವಾಗಿ ಗಾಯಗೊಂಡ ರೈತ ಕೊಡಂಬಿ ಗ್ರಾಮದ ಚನ್ನವೀರಯ್ಯ ಸಂಗಯ್ಯ ವೆಂಕಟಾಪುರಮಠ(48) ಎಂದು ತಿಳಿದು ಬಂದಿದೆ.
ನಝೀರ್ ಸಾಬ ಬೇಗ ಎಂಬವರ ಹೊಲವನ್ನು ಸುಮಾರು ವರ್ಷಗಳಿಂದ ಗೇಣಿ ಮಾಡಿಕೊಂಡು ಬಂದಿದ್ದ ಚನ್ನವೀರಯ್ಯ ಇಂದು ಬೆಳಗ್ಗೆ ಹೊಲದ ಕೆಲಸದಲ್ಲಿ ನಿರತನಾಗಿದ್ದ ವೇಳೆ ಈ ಘಟನೆ ನಡೆದಿದೆ. ಅವರ ಮೇಲೆ ಕರಡಿ ಏಕಾಏಕಿ ದಾಳಿ ನಡೆಸಿದೆ. ಕರಡಿಯು ಚೆನ್ನವೀರಯ್ಯರ ಕೈ, ತಲೆ, ಬೆನ್ನಿಗೆ ತೀವ್ರ ಗಾಯಗೊಳಿಸಿದೆ. ಎಡಗೈ ಕಿರುಬೆರಳನ್ನು ಕಚ್ಚಿ ತುಂಡರಿಸಿದೆ ಎಂದು ತಿಳಿದುಬಂದಿದೆ.
ಚನ್ನವೀರಯ್ಯ ಅವರ ಬೊಬ್ಬೆ ಕೇಳಿ ಪಕ್ಕದ ಹೊಲದಲ್ಲಿ ಕೆಲಸ ಮಾಡುತ್ತಿದ್ದ ರೈತ ಹನಮಂತ ಶಿವಲಿಂಗ ಅಂಗಡಿ ಧಾವಿಸಿ ಬಂದು ಕರಡಿಯನ್ನು ಓಡಿಸಿದ್ದಾರೆ.