ಜೆಡಿಎಸ್ ಅಧಿಕಾರಕ್ಕೆ ಬಂದರೆ ರೈತರ ಸಾಲ ಮನ್ನಾ: ಎಚ್.ಡಿ.ಕುಮಾರಸ್ವಾಮಿ
ಹರಿಹರ,ಜ.30: ಜೆಡಿಎಸ್ ಅಧಿಕಾರಕ್ಕೆ ಬಂದರೆ, ಬಂದ 24 ತಾಸುಗಳಲ್ಲಿಯೇ ರೈತರ ಸಂಪೂರ್ಣ ಸಾಲ ಮನ್ನಾ ಮಾಡಲಾಗುವುದು ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಭರವಸೆ ನೀಡಿದರು. ರವಿವಾರ ಇಲ್ಲಿನ ಎಸ್ಜೆವಿಪಿ ತಾಂತ್ರಿಕ ಕಾಲೇಜು ಆವರಣದಲ್ಲಿ ಎಚ್.ಶಿವಪ್ಪ ಅಭಿಮಾನಿಗಳ ಸಾಂಸ್ಕೃತಿಕ ಬಳಗದ ವತಿಯಿಂದ ಏರ್ಪಡಿಸಿದ್ದ ‘ಉಚಿತ ಸಾಮೂಹಿಕ ವಿವಾಹ’ ಕಾರ್ಯಕ್ರಮ ಉದ್ಘಾಟಿಸಿ ಹಾಗೂ ನೂತನ ವಧು-ವರರನ್ನು ಆಶೀರ್ವದಿಸಿ ಅವರು ಮಾತನಾಡಿದರು.
ದೇಶಕ್ಕೆ ಅನ್ನ ನೀಡುವ ಅನ್ನದಾತನ ಪರಿಸ್ಥಿತಿ ತುಂಬ ಸಂಕಷ್ಟ ಸ್ಥಿತಿಯಲ್ಲಿದೆ.ರೈತರ ಸಾಲ ಮನ್ನಾ ಆಗಬೇಕೆಂದು ಕಳೆದ ಮೂರು ವರ್ಷಗಳಿಂದಲೂ ರೈತರ ಪರ ಬೇಡಿಕೆ ಸಲ್ಲಿಸುತ್ತಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಈಗಲಾದರೂ ರೈತರ ಸಂಪೂರ್ಣ ಸಾಲ ಮನ್ನಾ ಮಾಡಬೇಕೆಂದು ಒತ್ತಾಯಿಸಿದರು. ಾಜ್ಯ ಸರಕಾರ ರೈತರ ಸಾಲ ಮನ್ನಾ ಮಾಡುವ ಉದ್ದೇಶ ಹೊಂದಿದ್ದರೆ, ಮೊದಲು ಸಹಕಾರಿ ಬ್ಯಾಂಕ್ಗಳ ಸಾಲ ಮನ್ನಾ ಮಾಡಿ, ನಂತರ ರಾಷ್ಟ್ರೀಕೃತ ಬ್ಯಾಂಕ್ಗಳ ಸಾಲ ವ ುನ್ನಾ ಮಾಡುವಂತೆ ಕೇಂದ್ರ ಸರಕಾರವನ್ನು ಒತ್ತಾಯಿಸುವ ಮೂಲಕ ನೈತಿಕತೆ ತೋರಿಸಲಿ ಎಂದು ಸವಾಲು ಹಾಕಿದರು. ನನ್ನ ಅಡಳಿತದ ಅವಧಿಯಲ್ಲಿ ವಿಧವೆಯರಿಗೆ, ಅಂಗವಿಕಲರಿಗೆ 100ರಿಂದ 400ರವರೆಗೆ ಮಾಸಿಕ ವೇತನ ಹೆಚ್ಚಿಸಿದ್ದೇನೆ.
ಅದೇ ರೀತಿ ನಮ್ಮ ಸರಕಾರ ಅಧಿಕಾರಕ್ಕೆ ಬಂದರೆ ಪ್ರತೀ ತಿಂಗಳು 2,500 ರೂ. ಮಾಸಾಶನ, ಗರ್ಭಿಣಿಯರಿಗೆ ಒಟ್ಟು ಆರು ತಿಂಗಳ ಕಾಲ ಪ್ರತೀ ತಿಂಗಳು 6 ಸಾವಿರ, 70 ವರ್ಷದ ಹಿರಿಯ ನಾಗರಿಕರಿಗೆ ಜೀವನ ಪೂರ್ತಿ ಪ್ರತೀ ತಿಂಗಳು 5 ಸಾವಿರ ರೂ.ಜಮಾ ಮಾಡಲಾಗುವುದು ಎಂದರು. ಶಾಸಕ ಡಾ.ಶಾಮನೂರು ಶಿವಶಂಕರಪ್ಪ ಮಾತನಾಡಿ, ಸಾಮೂಹಿಕ ವಿವಾಹಗಳಿಂದ ದುಂದುವೆಚ್ಚಕ್ಕೆ ಕಡಿವಾಣ ಹಾಕಬಹುದು. ಪತಿ, ಪತ್ನಿ ಎತ್ತಿನ ಗಾಡಿಯ ಎರಡು ಚಕ್ರವಿದ್ದಂತೆ. ಅದರಲ್ಲಿ ಒಂದು ಚಕ್ರ ಹೆಚ್ಚು ಕಡಿಮೆಯಾದರೂ ಗಾಡಿ ಉರುಳುತ್ತದೆ. ಆದ್ದರಿಂದ ದಂಪತಿ ಪರಸ್ಪರ ಅರಿತು, ಅನುಸರಿಸಿಕೊಂಡು ಸಂಸಾರ ನಡೆಸಿಕೊಂಡು ಹೋಗಬೇಕು ಎಂದು ಹೇಳಿದರು. ಕಾಂಗ್ರೆಸ್ ಪಕ್ಷದ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಮಾತನಾಡಿದರು.
ಈ ಸಂದರ್ಭದಲ್ಲಿ ಶಾಸಕರಾದ ಚಿಕ್ಕಮಾದು, ಮಧು ಬಂಗಾರಪ್ಪ, ಪಿಳ್ಳಮುನಿಶಾಮಪ್ಪ, ಮಾಜಿ ಶಾಸಕ ಮಹಿಮಾ ಪಟೇಲ್, ಬಿ. ಚಿದಾನಂದಪ್ಪ, ವಕೀಲ ಜಗದೀಶ್, ಕೈಗಾರಿಕಾ ಸಹಕಾರಿ ಬ್ಯಾಂಕ್ನ ಎಚ್.ಐ. ಪಾಟೀಲ್, ಕಾಡಾ ಅಧ್ಯಕ್ಷ ಸುಂದ್ರೇಶ್, ವನಮಾಲಾ ಶಿವಪ್ಪ,ಎಚ್.ಎಸ್. ನಾಗರಾಜ್, ಎಚ್.ಎಸ್. ಅರವಿಂದ್, ಬಿ.ಆರ್.ಎಮ್. ಮಂಜಣ್ಣ, ಕೆ.ಸುರೇಶ್, ಜಿಪಂ ಸದಸ್ಯೆ ಹೇಮಾವತಿ ಭೀಮಣ್ಣ, ಪುರಸಭೆ ಅಧ್ಯಕ್ಷೆ ಅಂಜಮ್ಮ ವಿಜಯಕುಮಾರ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು.