ಉಡುಗೆ-ತೊಡುಗೆ ವಿಚಾರದಲ್ಲಿ ಸಾಮರಸ್ಯ ಕದಡುವ ಕೃತ್ಯಕ್ಕೆ ಖಂಡನೆ
ಶಿವಮೊಗ್ಗ, ಫೆ. 8: ಇತ್ತೀಚೆಗೆ ನಗರದ ಸಹ್ಯಾದ್ರಿ ಕಾಲೇಜ್ನಲ್ಲಿ ಸಮವಸ್ತ್ರ ಧರಿಸುವುದಕ್ಕೆ ಸಂಬಂಧಿಸಿದಂತೆ ಉಂಟಾದ ವಿವಾದಕ್ಕೆ ಸಂಬಂಧಿಸಿದಂತೆ ಬುಧವಾರ ಸಂಜೆ ನಗರದ ಸರಕಾರಿ ನೌಕರರ ಸಂಘದ ಸಭಾಂಗಣದಲ್ಲಿ ಪ್ರಗತಿಪರ ಸಂಘಟನೆಗಳ ಒಕ್ಕೂಟದ ವತಿಯಿಂದ ಸಾಮರಸ್ಯ ಸಭೆ ನಡೆಸಲಾಯಿತು.
ಸಭೆಯಲ್ಲಿ ಪ್ರಗತಿಪರ ಮುಖಂಡರಾದ ಕೆ.ಎಲ್. ಅಶೋಕ್, ಕೆ.ಪಿ.ಶ್ರೀಪಾಲ್, ಪತ್ರಕರ್ತ ಎನ್.ರವಿಕುಮಾರ್, ಡಿ.ಎಸ್.ಎಸ್.ಮುಖಂಡ ಗುರುಮೂರ್ತಿ, ರೈತ ಸಂಘದ ಮುಖಂಡ ಕೆ.ಟಿ.ಗಂಗಾಧರ್ ಸೇರಿದಂತೆ ವಿವಿಧ ಧರ್ಮಗಳ ಧರ್ಮಗುರುಗಳು ಉಪಸ್ಥಿತರಿದ್ದರು.
ಸಭೆಯಲ್ಲಿ ಭಾಗವಹಿಸಿದ್ದ ಮುಖಂಡರು ಇತ್ತೀಚೆಗೆ ಕಾಲೇಜು ಆವರಣದಲ್ಲಿ ನಡೆದ ವಿದ್ಯಮಾನಗಳನ್ನು ತೀವ್ರವಾಗಿ ಖಂಡಿಸಿದರು. ಶಿಕ್ಷಣ ಕೇಂದ್ರಗಳಲ್ಲಿ ಈ ರೀತಿಯ ಘಟನೆಗಳು ನಡೆಯದಂತೆ ಸಂಬಂಧಿಸಿದ ಇಲಾಖೆಗಳು ಗಮನಹರಿಸಬೇಕು ಎಂದು ಆಗ್ರಹಿಸಿದರು. ಸಭೆಯಲ್ಲಿ ಹಲವು ನಿರ್ಣಯಗಳನ್ನು ಕೈಗೊಳ್ಳಲಾಯಿತು.
ನಿರ್ಣಯಗಳು: ಆಹಾರ, ಉಡುಗೆ-ತೊಡುಗೆ ವಿಚಾರದಲ್ಲಿ ಶಾಂತಿ-ಸಾಮರಸ್ಯ ಕದಡುವ ಯಾವುದೇ ಕೃತ್ಯವನ್ನು ಖಂಡಿಸುವುದು. ಸಮವಸ್ತ್ರ ಸಾರ್ವಜನಿಕ ಚರ್ಚೆಯ ವಿಷಯವಲ್ಲ. ಕಾಲೇಜು ಹಂತದಲ್ಲಿ ಸಮವಸ್ತ್ರ ಜಾರಿ ವ್ಯಕ್ತಿಗತ ಸ್ವಾತಂತ್ರ್ಯ ಹರಣವಾಗಿರುತ್ತದೆ. ಈ ದಿಕ್ಕಿನಲ್ಲಿ ಕಾಲೇಜು ಆಡಳಿತ ಮಂಡಳಿಗಳು ಸರಿಯಾದ ತೀರ್ಮಾನ ಕೈಗೊಳ್ಳಬೇಕು.
ಶಾಂತಿ ಮತ್ತು ಸಾಮರಸ್ಯ ಕಾಪಾಡುವಲ್ಲಿ ನಾಗರಿಕರು ಪ್ರಜ್ಞಾಪೂರ್ವಕವಾಗಿ ಶ್ರಮಿಸಬೇಕು. ಸಾಮರಸ್ಯ ಕೆಡಿಸುವ ಯಾವುದೇ ಶಕ್ತಿ - ವ್ಯಕ್ತಿಗಳ ವಿರುದ್ದ ಪೊಲೀಸ್ ಇಲಾಖೆಯು ನಿರ್ಧಾಕ್ಷಿಣ್ಯ ಕಠಿಣ ಕ್ರಮ ಜರಗಿಸಬೇಕು ಎಂಬ ನಿರ್ಣಯಗಳನ್ನು ಕೈಗೊಂಡಿದ್ದಾರೆ.