ಶಿವಮೊಗ್ಗ ಮನಪಾ ಮೇಯರ್, ಉಪಮೇಯರ್ ಆಯ್ಕೆ ವಿಳಂಬ!
ಶಿವಮೊಗ್ಗ, ಫೆ.8: ಶಿವಮೊಗ್ಗ ಮಹಾನಗರ ಪಾಲಿಕೆಯ ಮೇಯರ್ ಹಾಗೂ ನಾಲ್ಕು ಸ್ಥಾಯಿ ಸಮಿತಿಗಳ ಅಧಿಕಾರ ಭಾಗ್ಯೞಯಾರ ಪಾಲಾ ಗಲಿದೆ? ಯಾವ ಪಕ್ಷಗಳ ನಡುವೆ ದೋಸ್ತಿ ಕುದರಲಿದೆ? ಈ ಹಿಂದಿನ ಮೂರು ಚುನಾವಣೆಗಳ ಅವಧಿಯಲ್ಲಿ ನಡೆದ ಹೈಡ್ರಾಮಗಳು ಈ ಬಾರಿಯೂ ಮುಂದುವರಿಯಲಿವೆಯಾ...?
ಇದು, ಇತ್ತೀಚೆಗೆ ಪಾಲಿಕೆ ವಲಯದಲ್ಲಿ ಕೇಳಿಬರುತ್ತಿರುವ ಕುತೂಹಲಕಾರಿ ಪ್ರಶ್ನೆಗಳ ಕೆಲ ಸ್ಯಾಂಪಲ್ಗಳು. ಪಾಲಿಕೆಯ ನಾಲ್ಕನೆ ಅವಧಿಯ ಮೇಯರ್, ಉಪ ಮೇಯರ್ ಹಾಗೂ ಸ್ಥಾಯಿ ಸಮಿತಿಗಳ ಅಧ್ಯಕ್ಷರ ಆಯ್ಕೆಗೆ ಈಗಾಗಲೇ ರಾಜ್ಯ ಸರಕಾರ ಮೀಸಲಾತಿ ಪ್ರಕಟಿಸಿದೆ. ಮೇಯರ್ ಸ್ಥಾನವನ್ನು ಪರಿಶಿಷ್ಟ ಜಾತಿಗೆ ಹಾಗೂ ಉಪ ಮೇಯರ್ ಸ್ಥಾನವನ್ನು ಪರಿಶಿಷ್ಟ ಪಂಗಡದ ಮಹಿಳೆಗೆ ಮೀಸಲಿಡಲಾಗಿದೆ. ಪೈಪೋಟಿ: ಮೀಸಲಾತಿ ಕಾರಣದಿಂದ ಉಪ ಮೇಯರ್ಗೆ ಅವಿರೋಧ ಆಯ್ಕೆ ನಡೆಯಲಿದ್ದು, ಬಿಜೆಪಿ ಪಾಲಾಗುವುದು ಖಚಿತವಾಗಿದೆ.
ಉಳಿದಂತೆ ಮೇಯರ್ ಹಾಗೂ ನಾಲ್ಕು ಸ್ಥಾಯಿ ಸಮಿತಿಗಳ ಅಧಿಕಾರ ತನ್ನದಾಗಿಸಿಕೊಳ್ಳಲು ಪ್ರಮುಖ ಪಕ್ಷಗಳಾದ ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ನಡುವೆ ತೀವ್ರ ಹಣಾಹಣಿ ಏರ್ಪಡುವುದು ನಿಶ್ಚಿತವಾಗಿದೆ. ಈಗಾಗಲೇ ಈ ನಿಟ್ಟಿನಲ್ಲಿ ಮೂರು ಪಕ್ಷಗಳು ಸದ್ದಿಲ್ಲದೆ ಕಾರ್ಯತಂತ್ರ ರೂಪಿಸಲಾರಂಭಿಸಿವೆ. ಪಾಲಿಕೆಯಲ್ಲಿ ಯಾವುದೇ ಪಕ್ಷಕ್ಕೂ ಸ್ಪಷ್ಟ ಬಹುಮತವಿಲ್ಲವಾಗಿದೆ. ಈ ಹಿನ್ನೆಲೆಯಲ್ಲಿ ಕಳೆದ ಮೂರು ಅವಧಿಯಿಂದಲೂ ಮೈತ್ರಿ ಆಳ್ವಿಕೆ ನಡೆದುಕೊಂಡು ಬರುತ್ತಿದೆ. ಸತತ ಮೂರು ಬಾರಿ ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟ ಇತರ ಸದಸ್ಯರ ಬೆಂಬಲದೊಂದಿಗೆ ಅಧಿಕಾರದ ಚುಕ್ಕಾಣಿ ಹಿಡಿದಿವೆ. ಬಿಜೆಪಿ ಪ್ರತಿಪಕ್ಷದ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳುವಂತಾಗಿದೆ.
ಸತತ ಮೂರು ಬಾರಿ ಮೇಯರ್ ಸ್ಥಾನವು ಕಾಂಗ್ರೆಸ್ಗೆ ಲಭಿಸಿದ್ದು, ಈ ಬಾರಿ ತನಗೆ ಮೇಯರ್ ಸ್ಥಾನ ಬಿಟ್ಟುಕೊಡಬೇಕು ಎಂದು ಜೆಡಿಎಸ್ ಸದಸ್ಯರು ಒತ್ತಾಯಿಸುತ್ತಿದ್ದಾರೆ. ಈ ಹಿಂದೆ ಮಾಡಿಕೊಂಡಿದ್ದ ಒಪ್ಪಂದದಂತೆ ಮೇಯರ್ ಗದ್ದುಗೆಯನ್ನು ಜೆಡಿಎಸ್ಗೆ ಕಾಂಗ್ರೆಸ್ ಬಿಟ್ಟು ಕೊಡಬೇಕಾಗಿದ್ದು, ಆದರೆ ಜೆಡಿಎಸ್ಗೆ ಮೇಯರ್ ಗದ್ದುಗೆ ಬಿಟ್ಟುಕೊಡಲು ಕಾಂಗ್ರೆಸ್ನ ಕೆಲ ಮುಖಂಡರಿಗೆ ಇಷ್ಟವಿಲ್ಲವೆಂಬ ಮಾತು ಕೇಳಿಬರುತ್ತಿದೆ.
ಇನ್ನೊಂದೆಡೆ ಮೀಸಲಾತಿ ಕಾರಣದಿಂದ ಅನಾಯಾಸವಾಗಿ ಉಪ ಮೇಯರ್ ಗದ್ದುಗೆ ತನ್ನದಾಗಿಸಿಕೊಂಡಿರುವ ಬಿಜೆಪಿಯು ಮೇಯರ್ ಹಾಗೂ ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನಗಳನ್ನು ತನ್ನದಾಗಿಸಿಕೊಳ್ಳಲು ಕಸರತ್ತು ನಡೆಸುತ್ತಿದೆ. ಒಟ್ಟಾರೆ ನಾಲ್ಕನೆ ಹಂತದ ಮೇಯರ್, ಸ್ಥಾಯಿಸಮಿತಿಗಳ ಅಧ್ಯಕ್ಷ ಸ್ಥಾನ ತನ್ನದಾಗಿಸಿಕೊಳ್ಳಲು ಪ್ರಮುಖ ಪಕ್ಷಗಳು ಸದ್ದಿಲ್ಲದೆ ಪೂರ್ವತಯಾರಿ ನಡೆಸಲಾರಂಭಿಸಿವೆ. ಪಕ್ಷದ ಮುಖಂಡರ ಹಂತದಲ್ಲಿ ಚರ್ಚೆಗಳು ನಡೆಯಲಾರಂಭಿಸಿವೆ. ಚುನಾವಣಾ ದಿನಾಂಕ ಘೋಷಣೆ ಯಾಗುತ್ತಿದ್ದಂತೆ ಮೈತ್ರಿಯ ಸ್ಪಷ್ಟ ಚಿತ್ರಣಗಳು ಲಭ್ಯವಾಗಲಿವೆ.
ಚುನಾವಣೆ ವಿಳಂಬ: ಬೆಂಗಳೂರಿನ ಪ್ರಾದೇಶಿಕ ಆಯುಕ್ತರು ಮೇಯರ್-ಉಪ ಮೇಯರ್, ಸ್ಥಾಯಿ ಸಮಿತಿಗಳ ಅಧ್ಯಕ್ಷರ ಚುನಾವಣಾ ಪ್ರಕ್ರಿಯೆ ನಡೆಸುತ್ತಾರೆ. ಅವರೇ ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಣೆ ಮಾಡುತ್ತಾರೆ. ಫೆ.4ರ ಅಸುಪಾಸಿನಲ್ಲಿ ಚುನಾವಣೆ ನಡೆಯುವ ನಿರೀಕ್ಷೆ ಪಾಲಿಕೆ ಸದಸ್ಯರಲ್ಲಿತ್ತು. ಆದರೆ ವಿಧಾನಪರಿಷತ್ನ ಆಗ್ನೇಯ ಶಿಕ್ಷಕರ ಕ್ಷೇತ್ರದ ಚುನಾವಣಾ ನೀತಿ-ಸಂಹಿತೆಯ ಹಿನ್ನೆಲೆಯಲ್ಲಿ ಶಿವಮೊಗ್ಗ ಮಹಾನಗರ ಪಾಲಿಕೆ ಚುನಾವಣಾ ಪ್ರಕ್ರಿಯೆ ವಿಳಂಬವಾಗಿದೆ ಎಂಬ ಮಾಹಿತಿಗಳು ಕೇಳಿಬರುತ್ತಿವೆ. ವಿಧಾನಪರಿಷತ್ ಚುನಾವಣಾ ನೀತಿ - ಸಂಹಿತೆ ಪೂರ್ಣಗೊಳ್ಳುತ್ತಿದ್ದಂತೆ ಶಿವಮೊಗ್ಗ ಪಾಲಿಕೆಯ ಮೇಯರ್ - ಉಪ ಮೇಯರ್ ಆಯ್ಕೆ ಪ್ರಕ್ರಿಯೆ ಆರಂಭಿಸಲು ಪ್ರಾದೇಶಿಕ ಆಯುಕ್ತರು ಮುಂದಾಗಿದ್ದಾರೆನ್ನಲಾಗಿದೆ.
ಕಾಂಗ್ರೆಸ್-ಬಿಜೆಪಿ-ಜೆಡಿಎಸ್ನಲ್ಲಿ ತಲಾ ಓರ್ವ ಸದಸ್ಯರು
ಮೇಯರ್ ಸ್ಥಾನಕ್ಕೆ ಮೀಸಲಿರಿಸಿರುವ ಪರಿಶಿಷ್ಟ ಜಾತಿ ವರ್ಗಕ್ಕೆ ಸೇರಿದ ಸದಸ್ಯರು ಮೂರು ಪಕ್ಷಗಳಲ್ಲಿಯೂ ತಲಾ ಓರ್ವರಿರುವುದು ವಿಶೇಷವಾಗಿದೆ. ಕಾಂಗ್ರೆಸ್ನಲ್ಲಿ ಲಕ್ಷ್ಮಣ್, ಬಿಜೆಪಿಯಲ್ಲಿ ವೆಂಕ್ಯಾನಾಯ್ಕಾ ಹಾಗೂ ಜೆಡಿಎಸ್ನಲ್ಲಿ ಕೇಬಲ್ ಬಾಬು ಅವರಿದ್ದಾರೆ. ಈ ಮೂವರಲ್ಲಿ ಓರ್ವರು ಮೇಯರ್ ಗದ್ದುಗೆ ಅಲಂಕರಿಸುವುದು ಖಚಿತವಾಗಿದ್ದು, ಯಾರಿಗೆ ಅಧಿಕಾರ ಭಾಗ್ಯ ಒಲಿಯಲಿದೆ ಎಂಬುದು ಕುತೂಹಲ ಮೂಡಿಸಿದೆ.
ಉಪ ಮೇಯರ್ಗೆ ಅವಿರೋಧ ಆಯ್ಕೆ ಖಚಿತ!
ಮೀಸಲಾತಿ ಕಾರಣದಿಂದ ಕಳೆದ ಬಾರಿ ಉಪಮೇಯರ್ ಸ್ಥಾನಕ್ಕೆ ಅವಿರೋಧ ಆಯ್ಕೆ ನಡೆದಿತ್ತು. ಪರಿಶಿಷ್ಟ ಜಾತಿ ಮಹಿಳೆಗೆ ಮೀಸಲಾಗಿದ್ದ ಉಪ ಮೇಯರ್ ಸ್ಥಾನಕ್ಕೆ ಕಾಂಗ್ರೆಸ್ನ ಮಂಗಳಾ ಅಣ್ಣಪ್ಪ ಹೊರತುಪಡಿಸಿ, ಇತರ ಪಕ್ಷಗಳಲ್ಲಿ ಆ ವರ್ಗಕ್ಕೆ ಸೇರಿದ ಸದಸ್ಯೆಯರಿರಲಿಲ್ಲ. ಈ ಹಿನ್ನೆಲೆಯಲ್ಲಿ ಮಂಗಳಾ ಅಣ್ಣಪ್ಪ ಅವಿರೋಧವಾಗಿ ಆಯ್ಕೆಯಾಗಿದ್ದರು. ಈ ಬಾರಿಯೂ ಕೂಡ ಮೀಸಲಾತಿ ಕಾರಣದಿಂದಲೇ ಉಪ ಮೇಯರ್ ಸ್ಥಾನಕ್ಕೆ ಅವಿರೋಧ ಆಯ್ಕೆ ನಡೆಯುವುದು ಬಹುತೇಕ ಖಚಿತವಾಗಿದೆ. ಪರಿಶಿಷ್ಟ ಪಂಗಡದ ಮಹಿಳಾ ವರ್ಗಕ್ಕೆ ಉಪ ಮೇಯರ್ ಸ್ಥಾನ ನಿಗದಿಯಾಗಿದ್ದು, ಬಿಜೆಪಿಯಲ್ಲಿ ಮಾತ್ರ ಈ ವರ್ಗಕ್ಕೆ ಸೇರಿದ ಸದಸ್ಯೆಯಿದ್ದಾರೆ. ಆ ಪಕ್ಷದ ರೂಪಾ ಲಕ್ಷ್ಮಣ್ ಉಪ ಮೇಯರ್ ಆಗುವುದು ನಿಶ್ಚಿತವಾಗಿದೆ.
21 ಸದಸ್ಯರ ಬೆಂಬಲ ಬೇಕು
ಮೇಯರ್-ಉಪ ಮೇಯರ್ ಚುನಾವಣೆಯಲ್ಲಿ ಸಂಸದರು, ನಗರ ವ್ಯಾಪ್ತಿಯ ಶಾಸಕರು, ವಿಧಾನಪರಿಷತ್ ಸದಸ್ಯರಿಗೂ ಮತದಾನ ಮಾಡುವ ಹಕ್ಕಿದೆ. ಕಾಂಗ್ರೆಸ್ನಲ್ಲಿ 12 ಸದಸ್ಯರಿದ್ದು, ತಲಾ ಓರ್ವ ಶಾಸಕ - ವಿಧಾನಪರಿಷತ್ ಸದಸ್ಯರಿದ್ದಾರೆ. ಆದರೆ ಶಾಸಕ ಪ್ರಸನ್ನಕುಡಮಾ ಪಾಲಿಕೆಯ ಸದಸ್ಯರೂ ಆಗಿರುವುದರಿಂದ ಒಂದೇ ಮತದ ಪರಿಗಣನೆ ಬರಲಿದೆ.
ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ನ ಬಲ 13 ಆಗಲಿದೆ. ಉಳಿದಂತೆ ಬಿಜೆಪಿಯಲ್ಲಿ 11 ಸದಸ್ಯರಿದ್ದಾರೆ. ಓರ್ವ ಸಂಸದ, ಮೂವರು ವಿಧಾನಪರಿಷತ್ ಸದಸ್ಯರಿದ್ದಾರೆ. ಒಟ್ಟಾರೆ ಆ ಪಕ್ಷದ ಬಲ 15 ಆಗಲಿದೆ. ಜೆಡಿಎಸ್ನಲ್ಲಿ 5 ಸದಸ್ಯರಿದ್ದು, ಓರ್ವ ಶಾಸಕರಿದ್ದು, ಆ ಪಕ್ಷದ ಬಲಾಬಲ 6 ಆಗಲಿದೆ. ಉಳಿದಂತೆ ಇತರ ಸದಸ್ಯರು 7 ಜನರಿದ್ದಾರೆ. ಒಟ್ಟಾರೆ ಸದಸ್ಯರ ಬಲಾಬಲ 41 ಆಗಲಿದ್ದು, ಮೇಯರ್ ಹಾಗೂ ಸ್ಥಾಯಿ ಸಮಿತಿಗಳ ಗದ್ದುಗೆಯೇರಲು ಯಾವುದೇ ಪಕ್ಷದ ಮೈತ್ರಿಕೂಟಕ್ಕೆ 21 ಸದಸ್ಯರ ಬಹುಮತ ಬೇಕಾಗುತ್ತದೆ.