×
Ad

ಸಿನೆಮಾ ಹೀರೊಗೂ, ರಿಯಲ್ ಹೀರೊಗೂ ವ್ಯತ್ಯಾಸವಿದೆ: ಶೌರ್ಯ ಪ್ರಶಸ್ತಿ ವಿಜೇತೆ ಅಶ್ವಿನಿ ಅಂಗಡಿ

Update: 2017-02-09 19:53 IST

ಹಾಸನ, ಫೆ.9: ನಟನೆ ಮಾಡುವ ಚಲನಚಿತ್ರ ನಾಯಕನಿಗೂ ಸಾಧನೆ ಮಾಡಿ ರಿಯಲ್ ಹೀರೊ ಅನಿಸಿಕೊಂಡವರಿಗೂ ಬಹಳ ವ್ಯತ್ಯಾಸವಿದೆ ಎಂದು ಯುವ ಶೌರ್ಯ ಪ್ರಶಸ್ತಿ ವಿಜೇತೆ ಅಂಧರಾದ ಅಶ್ವಿನಿ ಅಂಗಡಿ ಅಭಿಪ್ರಾಯಪಟ್ಟರು.

ನಗರದ ದ ಸ್ಕಾಲರ್ಸ್‌ ವರ್ಲ್ಡ್ ಶಾಲೆಯ ಸಂಭ್ರಮಾಚರಣೆಯನ್ನು ಹಾಸನಾಂಬ ಕಲಾಕ್ಷೇತ್ರದಲ್ಲಿ ಬುಧವಾರ ಸಂಜೆ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮವನ್ನು ಜ್ಯೋತಿ ಬೆಳಗುವುದರ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ಇಂದಿನ ದಿವಸಗಳಲ್ಲಿ ಚಲನಚಿತ್ರದ ಕಡೆಗೆ ಒಲವು ತೋರುವ ಮೂಲಕ ನಿಜವಾದ ಸಾಧನೆ ಮಾಡಿದವರನ್ನು ಮರೆಯುತ್ತಿದ್ದಾರೆ. ಆದರೇ ಚಲನಚಿತ್ರದ ನಾಯಕನು ನಟನೆ ಮಾಡಿ ಎಲ್ಲರ  ಮನಸ್ಸನ್ನು ಗೆದ್ದಿರುತ್ತಾನೆ. ನಿಜವಾದ ನಾಯಕನು ಜೀವನದಲ್ಲಿ ಸಾಧನೆ ಮಾಡಿಯೇ ಎತ್ತರಕ್ಕೆ ಬೆಳೆದಿರುತ್ತಾನೆ ಎಂದು ಕಿವಿಮಾತು ಹೇಳಿದರು.

ಅನೇಕರು ಗುರಿಯನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವ ನಿರ್ಧಾರ ಮಾಡಿರುತ್ತಾರೆ. ಗುರಿಯನ್ನು ಹೇಳಿಕೊಂಡರೇ ಸಾಧನೆ ಮಾಡಲು ಆಗುವುದಿಲ್ಲ. ಅದಕ್ಕೆ ಪೂರಕವಾದ ವಾತವರಣ ನಿರ್ಮಿಸಿಕೊಂಡು ಸಾಧಿಸುವ ಛಲ ಹೊಂದಿದ್ದರೇ ಮಾತ್ರ ಗುರಿ ಮುಟ್ಟಲು ಸಾಧ್ಯ ಎಂದು ಸಲಹೆ ನೀಡಿದರು.

ಭಾರತದ ಸಂಸ್ಕೃತಿ ಕಾಪಾಡುವಲ್ಲಿ ಯುವಕರ ಪಾತ್ರ ಹೆಚ್ಚು ಇರುತ್ತದೆ. ತಮ್ಮ ಮಕ್ಕಳು ಐಎಎಸ್, ಇಂಜಿನಿಯರ್ ಡಾಕ್ಟರ್ ಆಗಬೇಕು ಎನ್ನುವ ಆಸಕ್ತಿ ಪೋಷಕರು ಹೊಂದಿರುತ್ತಾರೆ. ಅದಕ್ಕೆ ಪೂರಕವಾದ ಶಿಕ್ಷಣ ಕೊಡಿಸಲು ಮುಂದಾಗುತ್ತಾರೆ. ಅದಕ್ಕೂ ಮಿಗಿಲಾದ ಶಿಕ್ಷಣ ಒಂದಿದೆ,  ಸಂಸ್ಕೃತಿ. ಅದನ್ನು ಮೊದಲು ನೀಡಿದರೇ ಮಕ್ಕಳು ತಾವಾಗಿಯೇ ತಮ್ಮ ಭವಿಷ್ಯವನ್ನು ರೂಪಿಸಿಕೊಂಡು ಏನಾದರೂ ಸಾಧನೆ ಮಾಡಿ ಹೀರೊ ಅನಿಸಿಕೊಳ್ಳುವುದರಲ್ಲಿ ಯಾವ ಸಂಶಯವಿಲ್ಲ ಎಂದರು.

ಪೋಷಕರಾದವರು ಶಾಲೆಗೆ ಕಳುಹಿಸಿದರೇ ಸಾಲದು. ಪ್ರತಿ ದಿನ ಕೆಲ ಸಮಯ ಬಿಡುವು ಮಾಡಿಕೊಂಡು ಅವರೊಂದಿಗೆ ಕಳೆಯಬೇಕು. ಮಕ್ಕಳ ಆಸೆಗೆ ಪೂರಕವಾಗಿ ಅವರ ಪ್ರತಿಭೆಯನ್ನರಿತು ಪೋಷಕರು ಪ್ರೋತ್ಸಹಿಸಬೇಕು. ಪೋಷಕರ ಕಲಿಕೆಯನ್ನೇ ಆಧಾರವಾಗಿಟ್ಟುಕೊಂಡು ಮಕ್ಕಳ ಮೇಲೆ ಗದಪ್ರಯೋಗ ಮಾಡಬಾರದು ಎಂದು ಕರೆ ನೀಡಿದರು.

ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಹೆಚ್.ಎಲ್. ಜನಾರ್ಧನ್ ಮಾತನಾಡಿ, ಚಿಕ್ಕ ವಯಸ್ಸಿನಲ್ಲಿಯೇ ದೊಡ್ಡ ಸಾಧನೆ ಮಾಡಿರುವ ಅಂಧರಾದ ಅಶ್ವಿನಿ ಅಂಗಡಿ ಅವರ ಮುಂದೆ ನಾವೇಲ್ಲಾ ಶೂನ್ಯವಾಗಿದ್ದೇವೆ. ಎಲ್ಲಾ ಸರಿಯಾಗಿ ಇರುವ ನಮ್ಮಗಳಲ್ಲಿ ದ್ವೇಷ, ಅಸೂಹೆ, ಕ್ರೂರತನ ಎಲ್ಲಾ ತುಂಬಿ ತುಳುಕುತ್ತಿದೆ. ಸಮಾಜ ಸೇವೆಯಂತಹ ಕಡ ನಾವುಗಳು ಹೋಗುವ ಮೂಲಕ ಸಮಾಜದಲ್ಲಿ ಏನಾದರೂ ಕೊಡುಗೆ ಕೊಡುವ ಉದ್ದೇಶವನ್ನು ಮೈಗೂಡಿಸಿಕೊಳ್ಳಲು ಅಶ್ವಿನಿ ಅಂಗಡಿ ನಮಗೆ ಸ್ಪೂರ್ತಿ ಆಗಬೇಕು ಎಂದು ಸಲಹೆ ನೀಡಿದರು.

ಅಂಧರಿಗಾಗಿ ವಿಶೇಷ ಸಾಪ್ಟ್‌ವೇರ್‌ನ್ನು ಅಭಿವೃದ್ಧಿಪಡಿಸಿ ವಿಕಲಚೇತನರ ಪರವಾಗಿ ನಿಲ್ಲುವ ಮೂಲಕ ಜೀವನ ಸ್ಪೂರ್ತಿ ತುಂಬಿ ಧೈರ್ಯದಿಂದ ಮುನ್ನೆಡೆಯಲು ಅವಕಾಶ ಕಲ್ಪಿಸಿದರು ಎಂದು ಇದೆ ವೇಳೆ ಅವರ ಸಾಧನೆಯನ್ನು ನೆನಪಿಸಿಕೊಂಡರು.

ಕಾರ್ಯಕ್ರಮಕ್ಕೂ ಮೊದಲು ಕಾಶ್ಮೀರದ ಗುರೇಜ್ ಸೇನಾ ಶಿಬಿರದ ಮೇಲೆ ಹಿಮಪಾತ ಕುಸಿದು ವೀರ ಮರಣ ಹೊಂದಿದ ಸಂದೀಪ್ ಅವರಿಗ ಗೌರವ ಸಲ್ಲಿಸಲು ಎರಡು ನಿಮಿಷ ಮೌನ ಆಚರಿಸಿದರು. ನಂತರ ಹೆಚ್ಚಿನ ಅಂಕಗಳಿಸಿದ ಮಕ್ಕಳಿಗೆ ಹಾಗೂ ಕ್ರಿಡೇಯಲ್ಲಿ ವಿಜೇತರಾದ ಮಕ್ಕಳನ್ನು ಸನ್ಮಾನಿಸಿ ಗೌರವಿಸಿದರು. ನಂತರ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಯುವ ಶೌರ್ಯ ಪ್ರಶಸ್ತಿ ವಿಜೇತೆ ಅಂಧರಾದ ಅಶ್ವಿನಿ ಅಂಗಡಿ ಅವರನ್ನು ದ ಸ್ಕಾಲರ್ಸ್‌ ವರ್ಲ್ಡ್ ಶಾಲೆಯ ಲಕ್ಷ್ಮೀ ಅವರು ಸನ್ಮಾನಿಸಿ ಗೌರವಿಸಿದರು.

ಇದೆ ವೇಳೆ ದ ಸ್ಕಾಲರ್ಸ್‌ ವರ್ಲ್ಡ್ ಶಾಲೆಯ ಕಾರ್ಯದರ್ಶಿ ಚಂದ್ರಶೇಖರ್ ಇತರರು ಪಾಲ್ಗೊಂಡಿದ್ದರು. ಪ್ರಾಂಶುಪಾಲರಾದ ರವೀಶ್, ಮಮತಾ ಚಂದ್ರಶೇಖರ್, ಆಶಾರಾಣಿ, ಸುಮಂಗಲಿ ಇತರರು ವರದಿ ಮಂಡಿಸಿದರು. ಶಾಲಾ ಮಕ್ಕಳು ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News