ವಿಧಾನ ಸೌಧ, ಲೋಕಸಭೆಯ ಎದುರು ಬಸವೇಶ್ವರ ಮೂರ್ತಿ ಪ್ರತಿಷ್ಠಾಪಿಸಬೇಕಿತ್ತು: ಸಾಹಿತಿ ರಂಜಾನ್ ದರ್ಗಾ

Update: 2017-02-09 15:12 GMT

ಹರಪನಹಳ್ಳಿ, ಫೆ.9: ನಾನು ಮೂರ್ತಿ ಪ್ರಿಯನಲ್ಲ. ಆದರೂ, ಜಗತ್ತಿಗೆ ಒಳಿತನ್ನು ತಿಳಿಸಿದ ಜಗಜ್ಯೋತಿ ಬಸವೇಶ್ವರರ ಮೂರ್ತಿಯನ್ನು ವಿಧಾನ ಸೌಧ, ಲೋಕಸಭೆಯ ಎದುರು ಪ್ರತಿಷ್ಠಾಪಿಸಬೇಕಿತ್ತು ಎಂದು ಬೀದರನ ಬಸವ ಅಧ್ಯಯನ ಪೀಠದ ಆಡಳಿತಾಧಿಕಾರಿ, ಸಾಹಿತಿ ರಂಜಾನ್ ದರ್ಗಾ ಅಭಿಪ್ರಾಯಪಟ್ಟರು.

ಅವರು ತಾಲೂಕಿನ ನೀಲಗುಂದ ಗ್ರಾಮದಲ್ಲಿ ನಡೆಯುತ್ತಿರುವ ತಾಲೂಕು ಮಟ್ಟದ 5ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಸಮಾರೋಪ ಭಾಷಣ ಮಾಡಿದರು.

ಜಗಜ್ಯೋತಿ ಬಸವಣ್ಣನ ಅವರ ಮೂರ್ತಿ ಎಲ್ಲೆಲ್ಲೊ ಇರುವುದಕ್ಕಿಂತ ಪಾರ್ಲಿಮೆಂಟ್ ಮುಂದೆ ಇರಬೇಕು. ವಚನಗಳನ್ನು ಬಸವಾದಿ ಶರಣರು ಎಲ್ಲೆಡೆ ವಿಜೃಂಭಿಸಿದ್ದು, ಬಸವಾದಿ ಪ್ರಮುಖರಿಂದಾಗಿ ಕನ್ನಡ ಧರ್ಮದ ಭಾಷೆಯಾಗಿ ಮಾರ್ಪಟ್ಟಿತು. ಜಗತ್ತಿನ ಕೇವಲ 15 ಧರ್ಮದ ಭಾಷೆಗಳಲ್ಲಿ ಕನ್ನಡವೂ ಒಂದು ಎಂದು ಅವರು ನುಡಿದರು.

ಧರ್ಮ ದೇವರಿಗಿಂತ ದೊಡ್ಡದಾದಾಗ ಸಮಾಜದಲ್ಲಿ ಕೋಮು ಗಲಭೆಗಳು ಆಗುತ್ತವೆ. ಆದ್ದರಿಂದ ದೇವರಿಗಿಂತ ಧರ್ಮ ದೊಡ್ಡದಲ್ಲ ಎಂದು ಎಲ್ಲರೂ ಅರಿಯಬೇಕಿದೆ ಎಂದು ಹೇಳಿದರು.

ತೆಗ್ಗಿನಮಠದ ವರಸದ್ಯೋಜಾತ ಶ್ರೀ ಸಾನ್ನಿದ್ಯ ವಹಿಸಿ ಮಾತನಾಡಿ, ಕನ್ನಡ ಭಾಷೆ ಅತ್ಯಂತ ಪ್ರಾಚೀನ ಹಾಗೂ ಸುಂದರ ಭಾಷೆಯಾಗಿದ್ದು, ಇಂತಹ ಅನೇಕ ಕಾರ್ಯಕ್ರಮ ಮಾಡುವ ಹಾಗೂ ದಿನನಿತ್ಯ ಜೀವನದಲ್ಲಿ ತಪ್ಪದೆ ಅಳವಡಿಸಿಕೊಳ್ಳುವ ಮೂಲಕ ಕನ್ನಡ ಭಾಷೆಯ ಉಳುವಿಗೆ ಎಲ್ಲರೂ ಶ್ರಮಿಸಬೇಕು ಎಂದು ಅವರು ನುಡಿದರು.

 ಕಸಾಪ ತಾಲೂಕು ಅಧ್ಯಕ್ಷ ಡಿ. ರಾಮನಮಲಿ ಅಧ್ಯಕ್ಷತೆ ವಹಿಸಿದ್ದರು. ಜಿಪಂ ಸದಸ್ಯೆ ಕೆ.ಆರ್. ಜಯಶೀಲ, ರಶ್ಮಿ ರಾಜಪ್ಪ, ತಾಪಂ ಉಪಾಧ್ಯಕ್ಷ ಮಂಜನಾಯ್ಕ, ಪಿಕಾಡ್‌ರ್ ಬ್ಯಾಂಕ್ ಅಧ್ಯಕ್ಷ ಬೇಲೂರು ಸಿದ್ದೇಶ, ಎಂ. ವಾಗೀಶ, ತೆಗ್ಗಿನಮಠ ಸಂಸ್ಥೆಯ ವ್ಯವಸ್ಥಾಪಕ ಟಿ.ಎಂ. ಚಂದ್ರಶೇಕರಯ್ಯ, ಎಸ್. ಮಡಿವಾಳಪ್ಪ, ಐ.ಜಿ. ಹಾಲನಗೌಡ, ಎ. ವಿಜಯಪ್ಪ, ಪುಣಭಗಟ್ಟಿ ನಿಂಗಪ್ಪ, ಕಸಾಪ ಕಾರ್ಯದರ್ಶಿಗಳಾದ ಸಿ. ಗಂಗಾಧರ, ಹೇಮಣ್ಣ ಮೋರಗೇರಿ, ಖಜಾಂಚಿ ಕೆ. ಉಚ್ಚೆಂಗೆಪ್ಪ, ಮಾಲತೇಶ ಮರಿಗೌಡರು, ಇಸ್ಮಾಯಿಲ್ ಎಲಿಗಾರ ಉಪಸ್ಥಿತರಿದ್ದರು.

ಸಾಹಿತಿ ಇಸ್ಮಾಯಿಲ್ ಎಲಿಗಾರ ಆಶಯ ನುಡಿಗಳನ್ನಾಡಿದರು. ಉಪನ್ಯಾಸಕ ಎಚ್. ಮಲ್ಲಿಕಾರ್ಜುನ ಅವರು ಮಾತನಾಡಿದರು. 20ಕ್ಕೂ ಹೆಚ್ಚು ಕವಿಗಳು ಕವನ ವಾಚನ ಮಾಡಿದರು.

ಕಾವ್ಯ ಸಂಕಷ್ಟದಲ್ಲಿದೆ...
ಇಂದಿನ ಕಾವ್ಯ ಸಂಪೂರ್ಣ ಸಂಕಷ್ಟದಲ್ಲಿದೆ. ಕಾವ್ಯ ಬರೆಯುವವರಿದ್ದರೂ ಕೇಳಿಸಿಕೊಳ್ಳುವಂತವರು ಯಾರೂ ಇಲ್ಲ ಎಂದು ಸಾಹಿತಿ ಬಿ.ಎನ್. ಮಲ್ಲೇಶ ವಿಷಾಧಿಸಿದರು.

ಕವಿ ಗೋಷ್ಠಿಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕವಿತೆಗಳ ಪುಸ್ತಕಗಳು ಖರೀದಿ ಯಾಗಲ್ಲ, ಒಂದೆರಡು ಮುದ್ರಣ ಮಾದ್ಯಮಗಳು ಹೊರತು ಪಡಿಸಿದರೆ ಉಳಿದ ಪತ್ರಿಕೆಗಳು ಕವನಗಳನ್ನು ಪ್ರಕಟ ಮಾಡುವುದಿಲ್ಲ ಎಂದ ಅವರು, ಕವನ ರಚನೆ ಆತ್ಮ ವೇದನೆಯಾಗಿ ಪರಿಣಮಿಸುತ್ತದೆ. ಪ್ರತಿಯೊಬ್ಬರೂ ಓದುವಂತಹ ಕವಿತೆ ಬರೆಯಬೇಕು ಎಂದು ಅವರು ಕವಿಗಳಿಗೆ ಸಲಹೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News