×
Ad

ಕುಮಾರ್ ಬಂಗಾರಪ್ಪ ‘ಕೈ’ ಬಿಟ್ಟು ಕಮಲಕ್ಕೆ..?

Update: 2017-02-15 20:46 IST

► ಬಿಜೆಪಿ, ಪ್ರಧಾನಿ ಬಗ್ಗೆ ಪ್ರಶಂಸೆ

► ಕಾಂಗ್ರೆಸ್‌ನಿಂದ ಕಡೆಗಣನೆ

ಸೊರಬ, ಫೆ. 15: ಪಟ್ಟಣದಲ್ಲಿ ನಡೆದ ಸಭೆಯೊಂದರಲ್ಲಿ ಕಾಂಗ್ರೆಸ್ ಪಕ್ಷವನ್ನು ಹಿಯ್ಯೆಳಿಸಿರುವ ಮಾಜಿ ಸಚಿವ ಕುಮಾರ್ ಬಂಗಾರಪ್ಪ ಬಿಜೆಪಿ ಹಾಗೂ ಪ್ರಧಾನಿ ಮೋದಿಯವರನ್ನು ಪ್ರಶಂಶಿಸುವ ಮೂಲಕ ಕಾಂಗ್ರೆಸ್ ತೊರೆದು ಬಿಜೆಪಿ ಸೇರುವ ಮುನ್ಸೂಚನೆ ನೀಡಿದ್ದಾರೆ.

ಪಟ್ಟಣದ ಸಾಗರ ರಸ್ತೆಯಲ್ಲಿರುವ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ಮನೆ ಮುಂಭಾಗದಲ್ಲಿ ಆಯೋಜಿಸಲಾಗಿದ್ದ ಬೆಂಬಲಿಗರು ಮತ್ತು ಅಭಿಮಾನಿಗಳ ಸಭೆಯಲ್ಲಿ ಮಾತನಾಡಿದ ಮಾಜಿ ಸಚಿವ ಕುಮಾರ್ ಬಂಗಾರಪ್ಪ, ಸ್ವತಂತ್ರ ಪೂರ್ವದಿಂದ ಅಸ್ಥಿತ್ವದಲ್ಲಿರುವ ಅನೇಕ ದಶಕಗಳಕಾಲ ದೇಶವನ್ನಾಳಿದ ಕಾಂಗ್ರೆಸ್ ಕೇಂದ್ರದಲ್ಲಿ ಕೇವಲ 44 ಸ್ಥಾನಗಳನ್ನು ಪಡೆಯುವ ಮೂಲಕ ವಿರೋಧ ಪಕ್ಷದ ಅರ್ಹತೆಯನ್ನೂ ಕಳೆದುಕೊಂಡು ಹೀನಾಯ ಸ್ಥಿತಿಗೆ ತಲುಪಿದೆ. ಕಾಂಗ್ರೆಸ್‌ನ ಕುತಂತ್ರ ರಾಜಕಾರಣದಿಂದಾಗಿ ಬಿಜೆಪಿ ಬೆಳೆಯುತ್ತಿದೆ ಎಂದು ವ್ಯಂಗ್ಯವಾಡಿದ್ದಾರೆ.

 ಈ ಹಿಂದೆ ಮೊಸರನ್ನ, ಚಿತ್ರನ್ನ, ಅಕ್ಷತೆ ಕಾಳಿನ ಪಕ್ಷ ಎನ್ನುತ್ತಿದ್ದ ಬಿಜೆಪಿ ಈಗ ಕೇಂದ್ರದಲ್ಲಿ ಸ್ಪಷ್ಟ ಬಹುಮತದೊಂದಿಗೆ ದೇಶವನ್ನಾಳುತ್ತಿದೆ. ದೇಶದ ಆರ್ಥಿಕ ಸಮಸ್ಯೆ ನೀಗಿಸಲು ಭ್ರಷ್ಟಚಾರಕ್ಕೆ ಕಡಿವಾಣ ಹಾಕಲು ಕಠಿಣ ತೀರ್ಮಾನಗಳು ಅನಿವಾರ್ಯವಾಗಿದ್ದು, ಈ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಕೇಂದ್ರ ಸರಕಾರ 500-1000 ರೂ. ಮುಖ ಬೆಲೆಯ ನೋಟುಗಳನ್ನು ಅಮಾನ್ಯ ಮಾಡುವ ಮೂಲಕ ಒಳ್ಳೆಯ ತಿರ್ಮಾನಗಳನ್ನು ತೆಗೆದುಕೊಂಡಿದ್ದಾರೆ ಎಂದು ಬಿಜೆಪಿ ಹಾಗೂ ಪ್ರಧಾನಿ ಮೋದಿಯವರನ್ನು ಹೊಗಳಿ ಅಟ್ಟಕ್ಕೇರಿಸಿದ ಕುಮಾರ್ ಬಂಗಾರಪ್ಪ ‘ಕೈ’ ಬಿಟ್ಟು ‘ಕಮಲ’ ಸೇರುವ ಬಗ್ಗೆ ಒಲವು ವ್ಯಕ್ತ ಪಡಿಸಿದ್ದಾರೆ.

ರಾಜಕೀಯವಾಗಿ ತೆಗೆದುಕೊಳ್ಳುವ ತೀರ್ಮಾನಗಳು ಸಾಮೂಹಿಕವಾಗಿರಬೇಕೇ ವಿನಃ ವೈಯಕ್ತಿಕವಾಗಿರಬಾರದು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರ ಹಾಗೂ ಅಭಿಮಾನಿಗಳ ತೀರ್ಮಾನಕ್ಕೆ ಬದ್ಧರಾಗಿರಬೇಕಾಗುತ್ತದೆ ಎನ್ನುವ ಮೂಲಕ ತನ್ನನ್ನು ಕಾಂಗ್ರೆಸ್ ಕಡೆಗಣಿಸುತ್ತಿದೆ ಎಂದು ಅಭಿಪ್ರಾಯಿಸಿದ್ದಾರೆ.

ತಾಲೂಕಿನ ಅಭಿವೃದ್ಧಿ ಹಾಗೂ ಜನರ ಸೇವೆಯೆ ಮುಖ್ಯ ಉದ್ದೇಶವಾಗಿದ್ದು, 2004ರ ಚುನಾವಣೆಯಲ್ಲೂ ರಾಜಕೀಯ ಬದಲವಣೆ ಅನಿವಾರ್ಯವಾಗಿತ್ತು. ಪುನಃ ತಾಲೂಕಿನ ಅಭಿವೃದ್ಧಿ ಹಾಗೂ ಬೆಂಬಲಿಗರ ಹಿತ ದೃಷ್ಟಿಯಿಂದ ಅಭಿಮಾನಿಗಳು ಮತ್ತು ಕ್ಷೇತ್ರದ ಜನರ ಆಪೇಕ್ಷೆಯಂತೆ 2018ರ ಚುನಾವಣೆಯಲ್ಲೂ ರಾಜಕೀಯ ಬದಲಾವಣೆ ಅನಿವಾರ್ಯವಾಗಬಹುದು. ರಾಜ್ಯದಲ್ಲಿಯೂ 2018ರ ಪೂರ್ವದಲ್ಲಿಯೇ ವಿಧಾನ ಸಭಾ ಚುನಾವಣೆ ನಡೆಯಬಹುದು ಎಂದು ಭವಿಷ್ಯ ನುಡಿದ ಅವರು, ಬಜೆಟ್ ಮಂಡನೆಯ ನಂತರ ರಾಜ್ಯ ಸರಕಾರದ ಹಣೆಬರಹ ಬಹಿರಂಗವಾಗಲಿದೆ ಎಂದು ಸಿದ್ದು ಸರಕಾರವನ್ನು ತರಾಟೆಗೆ ತೆಗೆದು ಕೊಂಡರು.

 ನಾನು ಬೂಟಾಟಿಕೆ ರಾಜಕಾರಣ ಎಂದೂ ಮಾಡಿಲ್ಲ. ಮುಂದೆಯೂ ಮಾಡಲ್ಲ. ತತ್ವ ಸಿದ್ಧಾಂತದ ಮೇಲೆ ರಾಜಕಾರಣ ಮಾಡಿಕೊಂಡುಬಂದವನು ಎಂದ ಕುಮಾರ್ ಬಂಗಾರಪ್ಪ, ಚಿತ್ರರಂಗದಲ್ಲಿ ಕೆಲಸ ಮಾಡಿದ ನನಗೆ ರಾಜಕಾರಣಕ್ಕೆ ತಂದರು. ಪಿತೃವಾಕ್ಯ ಪರಿಪಾಲನೆ ಪ್ರತಿಯೊಬ್ಬ ಮಗನ ಕರ್ತವ್ಯವಾಗಿದ್ದು, ತಂದೆ ಮಾತನ್ನು ಚಾಚುತಪ್ಪದೆ ಪಾಲಿಸಿದ್ದೇನೆ. ಮಾಜಿ ಮುಖ್ಯಮಂತ್ರಿ ಬಂಗಾರಪ್ಪನವರು ಕಟ್ಟಿದ ರಾಜಕಾರಣ ಉಳಿಸಿಕೊಂಡು ಬಂದಿದ್ದೇನೆ. ಜಾತಿ, ಮತ, ಧರ್ಮ ಎನ್ನದೆ ಎಲ್ಲರನ್ನು ಪ್ರೀತಿ ವಿಶ್ವಾಸದಿಂದ ಕಂಡಿದ್ದೇನೆ ಎಂದರು.

ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಡಿ. ಉಮೇಶ್, ಮಲ್ಲಿಕಾರ್ಜುನ್ ವೃತ್ತಿಕೊಪ್ಪ, ಪ್ರಮುಖರಾದ ತಬಲಿ ಬಂಗಾರಪ್ಪ, ರಮೇಶ್ ಇಕ್ಕೇರಿ, ಶಿವಾನಂದ ಭಟ್, ಪಕ್ಕಿರಪ್ಪ ಮಾಕೊಪ್ಪ, ಯೂಸೂಫ್ ಸಾಬ್, ಶಬ್ಬಿರ್ ಅಹ್ಮದ್ ಕಿಲ್ಲೆದಾರ್, ಮಂಜುಳಾ, ಹಿರಿಯಣ್ಣ ಕಲ್ಲಂಬಿ, ನಾಗರಾಜ್ ಚಿಕ್ಕಸವಿ, ಹನುಮಂತಪ್ಪ, ಬಂದಗಿ ಬಸವರಾಜ್, ಪಯಾಝ್ ಅಹ್ಮದ್ ಉಳವಿ, ಅಕ್ಬರ್ ಸಾಬ್ ಹಾಯ, ಬೋಗೇಶ್ ಮಾವಲಿ, ಕಲ್ಲಪ್ಪ ಚಿತ್ರಟ್ಟೆಹಳ್ಳಿ ಮತ್ತಿತರರು ಉಪಸ್ಥಿತರಿದ್ದರು.

ಮಾಜಿ ಮುಖ್ಯ ಮಂತ್ರಿಗಳಾದ ನಿಜಲಿಂಗಪ್ಪ, ದೇವರಾಜ್ ಅರಸು, ಗುಂಡೂರಾವ್ ಸೇರಿದಂತೆ ಅನೇಕ ಮುಖಂಡರು ಕಾಂಗ್ರೆಸ್ ಬಿಟ್ಟು ಹೋದ ಉದಾಹರಣೆಗಳು ನಮ್ಮ ಕಣ್ಣಮುಂದಿದೆ. ಒಂದು ಪಕ್ಷ ನಡೆಸಿಕೊಳ್ಳುವ ರೀತಿ ಸರಿ ಇಲ್ಲದಿದ್ದರೆ ರಾಜಕಾರಣದಲ್ಲಿ ತೀರ್ಮಾನ ಅನಿವಾರ್ಯ. 2018ರ ಚುನಾವಣೆಯಲ್ಲಿ ಗೆಲ್ಲುವುದಕ್ಕೆ ಯಾವುದೇ ತೀರ್ಮಾನಕ್ಕೂ ಸಿದ್ಧನಾಗಿದ್ದೇನೆ.

ಕುಮಾರ್ ಬಂಗಾರಪ್ಪ, ಮಾಜಿ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News