ಕುಮಾರ್ ಬಂಗಾರಪ್ಪ ಇದ್ದಲ್ಲಿ ಸಂಕಷ್ಟ ತಪ್ಪಿದ್ದಲ್ಲ
ಶಿವಮೊಗ್ಗ, ಫೆ. 16: ಕುಮಾರ್ ಬಂಗಾರಪ್ಪಕಾಂಗ್ರೆಸ್ ತೊರೆಯುವುದರಿಂದ ಜಿಲ್ಲೆಯಲ್ಲಿ ಪಕ್ಷಕ್ಕೆ ಯಾವುದೇ ನಷ್ಟವಾಗದು. ಆದರೆ, ಅವರು ಸೇರ್ಪಡೆಯಾಗುವ ಪಕ್ಷಕ್ಕೆ ಸಂಕಷ್ಟ ಕಟ್ಟಿಟ್ಟ ಬುತ್ತಿ. ಅವರೊಬ್ಬ ವಿಫಲ ನಾಯಕ ಎಂದು ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಸದಸ್ಯ ಮಂಜುನಾಥ ಭಂಡಾರಿ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಗುರುವಾರ ತಮ್ಮನ್ನು ಸಂಪರ್ಕಿಸಿದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕುಮಾರ್ ಬಂಗಾರಪ್ಪ ಪಕ್ಷದಲ್ಲಿದ್ದುಕೊಂಡು ಪಕ್ಷಕ್ಕೆ ದ್ರೋಹ ಬಗೆಯುವ ಕೆಲಸ ಮಾಡಿದ್ದಾರೆ. ಕಳೆದ ಲೋಕಸಭೆ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಯ ಪರ ಕೆಲಸ ಮಾಡಲಿಲ್ಲ ಎಂದು ಅವರೇ ಬಹಿರಂಗವಾಗಿ ಹೇಳಿಕೊಂಡಿದ್ದಾರೆ.
ಪಕ್ಷಕ್ಕೆ ನಿಷ್ಠರಾಗಿ ಕೆಲಸ ಮಾಡದವರು ಕಾಂಗ್ರೆಸ್ಗೆ ಅಗತ್ಯವಿಲ್ಲ ಎಂದು ಕುಮಾರ್ ವಿರುದ್ಧ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ‘ವೈಯಕ್ತಿಕವಾಗಿ ಹೇಳುವುದಾದರೆ, ಯಾವುದೇ ಕಾರ್ಯಕರ್ತ ಹಾಗೂ ಮುಖಂಡರು ಪಕ್ಷ ಬಿಟ್ಟು ಹೋಗುವುದು ಪಕ್ಷದ ಬೆಳವಣಿಗೆಯ ದೃಷ್ಟಿಯಿಂದ ಒಳ್ಳೆಯದಲ್ಲ. ಆದರೆ, ಕುಮಾರ್ಬಂಗಾರಪ್ಪ ಅವರ ವಿಚಾರದಲ್ಲಿ ತಾವು ಈ ಅಭಿಪ್ರಾಯ ವ್ಯಕ್ತಪಡಿಸಲು ಹೋಗುವುದಿಲ್ಲ.
ಅವರಿಂದ ಪಕ್ಷಕ್ಕೆ ಆದ ಲಾಭಕ್ಕಿಂತ ನಷ್ಟವೇ ಹೆಚ್ಚಾಗಿದೆ. ಇತ್ತೀಚಿನ ಅವರ ವರ್ತನೆ ಗಮನಿಸಿದರೆ, ಪಕ್ಷದ ಸಂಘಟನೆಗೆ ಅವರಿಂದ ಸಾಕಷ್ಟು ಧಕ್ಕೆಯಾಗಿದೆ’ ಎಂದು ತಿಳಿಸಿದರು. ರಾಜಕಾರಣ ಮಾಡಲಿ: ಕುಮಾರ್ ಬಂಗಾರಪ್ಪ ಅವರು ತಂದೆ ಎಸ್.ಬಂಗಾರಪ್ಪಅವರ ಹೆಸರು ಮುಂದಿಟ್ಟುಕೊಂಡು ರಾಜಕಾರಣ ಮಾಡುತ್ತಿದ್ದಾರೆ. ಬಂಗಾರಪ್ಪಅವರ ಹೆಸರು ಬಿಟ್ಟು ಕೇವಲ ತಮ್ಮ ಹೆಸರು ಮುಂದಿಟ್ಟುಕೊಂಡು ರಾಜಕಾರಣ ಮಾಡಲಿ. ಆಗ ಅವರಿಗಿರುವ ವರ್ಚಸ್ಸು, ನೆಲೆ ಏನೆಂಬುವುದು ಗೊತ್ತಾಗಲಿದೆ ಎಂದು ಟೀಕಾಪ್ರಹಾರ ನಡೆಸಿದ್ದಾರೆ.
ಕಾಂಗ್ರೆಸ್ ಪಕ್ಷಕ್ಕೆ ತನ್ನದೇ ಆದ ಇತಿಹಾಸ, ಸಮರ್ಥ ಕಾರ್ಯಕರ್ತರ ಪಡೆಯಿದೆ. ಕಾಂಗ್ರೆಸ್ನಿಂದ ಎಲ್ಲ ರೀತಿಯ ಲಾಭ ಪಡೆದು ಇದೀಗ ಪಕ್ಷದ ವಿರುದ್ಧ ಮಾತನಾಡುವ ಯಾವುದೇ ನೈತಿಕತೆ, ಅರ್ಹತೆಯನ್ನು ಕುಮಾರ್ ಉಳಿಸಿಕೊಂಡಿಲ್ಲ. ಇದನ್ನು ಮತದಾರರು ಕೂಡ ಗಮನಿಸುತ್ತಿದ್ದು, ಮುಂದಿನ ಚುನಾವಣೆಯಲ್ಲಿ ಅವರಿಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದರು.
ಮತ್ತೊಂದು ಬಣ: ಸೊರಬ ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷ ಸಂಘಟಿಸುವ ಕನಿಷ್ಠ ಕೆಲಸವನ್ನು ಕುಮಾರ್ ಮಾಡಲಿಲ್ಲ. ಪಕ್ಷದ ನಿಷ್ಠಾವಂತ ಕಾರ್ಯಕರ್ತರನ್ನು ನಿರಂತರವಾಗಿ ಕಡೆಗಣಿಸುತ್ತಾ ಬಂದರು. ಇದರಿಂದ ಸೊರಬದಲ್ಲಿ ತಾಪಂ, ಜಿಪಂ ಸೇರಿದಂತೆ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಪಕ್ಷ ಹೀನಾಯ ಸಾಧನೆ ಮಾಡುವಂತಾಯಿತು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರಸ್ತುತ ಬಿಜೆಪಿಯಲ್ಲಿ ಹಲವು ಬಣಗಳು ಸೃಷ್ಟಿಯಾಗಿವೆ. ಇದೀಗ ಕುಮಾರ್ ಬಿಜೆಪಿಗೆ ಸೇರ್ಪಡೆಯಾದರೆ ಆ ಪಕ್ಷಕ್ಕೆಆಗುವ ಲಾಭಕ್ಕಿಂತ ನಷ್ಟವೇ ಹೆಚ್ಚು. ಇವರಿಂದಾಗಿಅಲ್ಲಿ ಮತ್ತೊಂದು ಬಣ ಸೃಷ್ಟಿಯಾಗಲಿದೆ ಎಂದು ವ್ಯಂಗ್ಯವಾಡಿದ್ದಾರೆ.
ಲಕ್ಷ್ಮೀ ಕಾಂತ್ ಚಿಮನೂರು ಸೊರಬ ಕಾಂಗ್ರೆಸ್ ಅಭ್ಯರ್ಥಿ?
ಈ ಬಾರಿ ಸೊರಬ ವಿಧಾನಸಭಾ ಕ್ಷೇತ್ರದಿಂದ ಶತಾಯಗತಾಯ ಕುಮಾರ್ ಬಂಗಾರಪ್ಪಅವರಿಗೆ ಟಿಕೆಟ್ ತಪ್ಪಿಸಲು ಕಾಂಗ್ರೆಸ್ನಲ್ಲಿರುವ ಅವರ ವಿರೋಧಿ ಪಾಳಯ ಸಿದ್ಧತೆ ನಡೆಸಿದೆ ಎಂದು ಮೂಲಗಳು ತಿಳಿಸಿವೆ.
ವಿಶೇಷವಾಗಿ ಎಐಸಿಸಿ ಸದಸ್ಯ ಮಂಜುನಾಥ ಭಂಡಾರಿಯವರು, ಕುಮಾರ್ ಬಂಗಾರಪ್ಪಗೆ ಟಾಂಗ್ ನೀಡುವ ಉದ್ದೇಶದಿಂದಲೇ ಸೊರಬ ಕ್ಷೇತ್ರದ ಮೇಲೆ ಹೆಚ್ಚಿನ ಗಮನ ಕೇಂದ್ರೀಕರಿಸಿ ಕಾರ್ಯ ಚಟುವಟಿಕೆ ನಡೆಸುತ್ತಿದ್ದರು ಎನ್ನಲಾಗಿದೆ.
ಸೊರಬ ಕ್ಷೇತ್ರದ ವಕೀಲ, ಈಡಿಗ ಸಮುದಾಯದ ಲಕ್ಷ್ಮೀ ಕಾಂತ್ ಚಿಮನೂರ್ಗೆ ಟಿಕೆಟ್ ಕೊಡಿಸುವ ಇರಾದೆ ಹೊಂದಿದ್ದರು. ಲಕ್ಷ್ಮೀ ಕಾಂತ್ ಚಿಮನೂರು ಕೂಡ ಕ್ಷೇತ್ರದಾದ್ಯಂತ ಈಗಾಗಲೇ ಓಡಾಡುತ್ತಿದ್ದಾರೆ. ಈ ನಡುವೆ ಕುಮಾರ್ ಬಂಗಾರಪ್ಪಕಾಂಗ್ರೆಸ್ ತೊರೆಯುವುದು ಖಚಿತವಾಗಿದೆ. ಇದರಿಂದ ಮಂಜುನಾಥ ಭಂಡಾರಿ ಕ್ಯಾಂಪ್ನಲ್ಲಿ ಕಾಣಿಸಿಕೊಂಡಿರುವ ಲಕ್ಷ್ಮೀ ಕಾಂತ್ಗೆ ಟಿಕೆಟ್ ಸಿಗುವ ಸಾಧ್ಯತೆ ಹೆಚ್ಚಿದೆ ಎಂದು ಹೇಳಲಾಗುತ್ತಿದೆ.
‘ಬಿಜೆಪಿಗೆ ಸೇರ್ಪಡೆಯಾದರೆ ಕುಮಾರ್ ಭವಿಷ್ಯ ಸಂಕಷ್ಟಕ್ಕೆ ’
ಶಿವಮೊಗ್ಗ, ಫೆ. 16: ಯಾವುದೇ ಕಾರಣಕ್ಕೂ ಕುಮಾರ್ ಬಂಗಾರಪ್ಪಅವರು ಕಾಂಗ್ರೆಸ್ ತೊರೆಯಬಾರದು. ಏನಾದರೂ ಗೊಂದಲ ಗಳಿದ್ದರೆ ಪಕ್ಷದ ವೇದಿಕೆಯಲ್ಲಿ ಕುಳಿತು ಪರಿಹರಿಸಿಕೊಳ್ಳಬೇಕು ಎಂದು ಕುಮಾರ್ ಬಂಗಾರಪ್ಪಬಣದಲ್ಲಿ ಗುರುತಿಸಿಕೊಂಡಿರುವ ಕಾಂಗ್ರೆಸ್ ಅಲ್ಪಸಂಖ್ಯಾತ ಮುಖಂಡ ಇಮ್ತಿ ಯಾಝ್ ಖಾನ್ ಅಭಿಪ್ರಾಯಪಟ್ಟಿದ್ದಾರೆ.
ಗುರುವಾರ ತಮ್ಮನ್ನು ಸಂಪರ್ಕಿಸಿದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಹಿಂದೆ ಎಸ್. ಬಂಗಾರಪ್ಪಕೂಡ ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಯಾಗಿದ್ದರು. ಆದರೆ, ಆ ಪಕ್ಷಕ್ಕೆ ಸೇರ್ಪಡೆಯಾದ ನಂತರ ಅವರ ರಾಜಕೀಯ ಜನಪ್ರಿಯತೆ ಕುಸಿಯಿತು. ತದನಂತರ ಅವರು ರಾಜಕೀಯ ಮುನ್ನಲೆಗೆ ಬರಲು ಸಾಧ್ಯವಾಗಿಲ್ಲ ಎಂದರು.
ಇದೀಗ ಅಪ್ಪಮಾಡಿದ ತಪ್ಪನ್ನೇ ಕುಮಾರ್ ಬಂಗಾರಪ್ಪಅವರು ಮಾಡಲು ಮುಂದಾಗುತ್ತಿದ್ದಾರೆ. ಒಂದು ವೇಳೆ ಅವರು ಬಿಜೆಪಿ ಸೇರಿದರೆ ಅವರಿಗೆ ಆಗುವ ಲಾಭಕ್ಕಿಂತ ನಷ್ಟವೇ ಅಧಿಕವಾಗಿದೆ. ಇದನ್ನು ಅವರು ಅರಿತುಕೊಳ್ಳಬೇಕು. ಯಾವುದೇ ಕಾರಣಕ್ಕೂ ಕಾಂಗ್ರೆಸ್ ತೊರೆಯುವ ನಿರ್ಧಾರ ಮಾಡಬಾರದು. ಪ್ರಸ್ತುತ ನಿರ್ಧಾರ ಬದಲಾಯಿಸಿಕೊಳ್ಳಬೇಕು ಎಂಬುದು ತಮ್ಮ ವೈಯಕ್ತಿಕ ಅಭಿಪ್ರಾಯ ಎಂದು ತಿಳಿಸಿದ್ದಾರೆ.
ಬಿಜೆಪಿ ಕೋಮುವಾದಿ ಪಕ್ಷ. ಜಾತ್ಯತೀತ ಮನಸ್ಥಿತಿಯ ವ್ಯಕ್ತಿಗಳು ಆ ಪಕ್ಷದಲ್ಲಿ ಶಾಶ್ವತವಾಗಿ ನೆಲೆಯೂರಲು ಸಾಧ್ಯವಿಲ್ಲ. ಇದನ್ನು ಕುಮಾರ್ ಬಂಗಾರಪ್ಪನವರು ಅರಿತುಕೊಳ್ಳಬೇಕಾಗಿದೆ. ಈ ಬಗ್ಗೆ ಅವರ ಜೊತೆ ಮಾತನಾಡುವುದಾಗಿ ಇಮ್ತಿಯಾಝ್ಖಾನ್ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.