ಬಿಜೆಪಿ ಸೇರುವವರಿಗೆ ಉನ್ನತ ಸ್ಥಾನಮಾನ: ಯಡಿಯೂರಪ್ಪ ಆಹ್ವಾನ
ಬೆಂಗಳೂರು, ಫೆ. 18: ಬಿಜೆಪಿಗೆ ಸೇರಲು ಬಯಸುವವರಿಗೆ ಪಕ್ಷದ ಬಾಗಿಲು ತೆರದಿದೆ. ಪಕ್ಷ ಸೇರುವ ನಾಯಕರಿಗೆ ಉನ್ನತ ಸ್ಥಾನಮಾನ ನೀಡಲಾಗುವುದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷದಲ್ಲಿನ ಭಿನ್ನಮತೀಯರಿಗೆ ಮುಕ್ತ ಆಹ್ವಾನ ನೀಡಿದ್ದಾರೆ.
ಶನಿವಾರ ಬಿಜೆಪಿ ಪಕ್ಷದ ಕಚೇರಿಯಲ್ಲಿ ಹಿಂದುಳಿದ ಮೋರ್ಚಾಗಳ ರಾಜ್ಯ ಕಾರ್ಯಕಾರಿಣಿ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಬಿಜೆಪಿಗೆ ಸೇರ ಬಯಸುವವರಿಗೆ ಪಕ್ಷ ಸ್ವಾಗತ ಬಯಸಲಿದೆ. ಇಂತಹವರಿಗೆ ಪಕ್ಷದಲ್ಲಿ ಉನ್ನತ ಸ್ಥಾನಮಾನಗಳನ್ನು ನೀಡಲಾಗುವುದು ಎಂದು ತಿಳಿಸಿದರು.
ರಾಜ್ಯದಲ್ಲಿ ಬಿಜೆಪಿ ಗಟ್ಟಿಯಾಗಿ ಬೇರೂರಲು ಹಿಂದುಳಿದ ವರ್ಗಗಳ ಮತಗಳು ಅಗತ್ಯ. ಸರ್ವರಿಗೂ ಸಮಪಾಲು. ಸರ್ವರಿಗೂ ಸಮಬಾಳು ಘೋಷಣೆಯಲ್ಲಿ ಎಲ್ಲ ಸಮುದಾಯಗಳನ್ನು ಅಭಿವೃದ್ಧಿಪಡಿಸಲು ಪಕ್ಷ ಬದ್ಧವಾಗಿದೆ. ಹಿಂದುಳಿದ ಮತ್ತು ದೀನ ದಲಿತರ ಆಶೋತ್ತರಗಳನ್ನು ಈಡೇರಿಸಲು ಪಕ್ಷದ ಮುಖಂಡರು ಮುಂದಾಗಬೇಕು ಎಂದು ಕರೆ ಕೊಟ್ಟರು.
ರಾಜ್ಯ ಬಿಜೆಪಿಯ ಹಿಂದುಳಿದ ವರ್ಗಗಳ ಮೋರ್ಚಾದ ಪ್ರಭಾರಿಯಾಗಿ ಈಶ್ವರಪ್ಪ ಅವರನ್ನು ನೇಮಕ ಮಾಡಿದ ನಂತರ ದೊಡ್ಡಶಕ್ತಿ ಬಂದಂತಾಗಿದೆ ಎಂದು ಈಶ್ವರಪ್ಪ ಅವರನ್ನು ಕೊಂಡಾಡಿದರು. ಚುನಾವಣೆ ಹತ್ತಿರವಾಗುತ್ತಿದ್ದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಲ್ಲಸಲ್ಲದ ಆಶ್ವಾಸನೆ ಕೊಡುತ್ತಿದ್ದಾರೆ. ನಾಲ್ಕು ವರ್ಷಗಳಲ್ಲಿ ಮಾಡಲು ಸಾಧ್ಯವಾಗದ್ದನ್ನು ಇನ್ನೊಂದು ವರ್ಷದಲ್ಲಿ ಸಾಧಿಸಲು ಸಾಧ್ಯವಿಲ್ಲ. ಕಾಂಗ್ರೆಸ್ ಸರಕಾರ ನಾಲ್ಕು ವರ್ಷಗಳಲ್ಲಿ ಸಂಪೂರ್ಣ ವಿಫಲವಾಗಿದೆ ಟೀಕಿಸಿದರು.
ರಾಜ್ಯ ಬಿಜೆಪಿಯ ಹಿಂದುಳಿದ ಮೋರ್ಚಾ ವತಿಯಿಂದ ಬೀದರ್ನಲ್ಲಿ ಫೆ.22ರಂದು ಮತ್ತು ಯಾದಗಿರಿಯಲ್ಲಿ 24 ರಂದು ಈಶ್ವರಪ್ಪನವರ ನೇತೃತ್ವದಲ್ಲಿ ಹಿಂದುಳಿದ ವರ್ಗಗಳ ಸಮಾವೇಶವನ್ನು ನಡೆಸುವುದಾಗಿ ತಿಳಿಸಿದರು.
ಯಡಿಯೂರಪ್ಪ ಮತ್ತು ತಮ್ಮಡನೆ ಇದ್ದ ಸಣ್ಣ ಪುಟ್ಟ ಗೊಂದಲಗಳನ್ನು ಬಗೆಹರಿಸಿಕೊಂಡು ಒಂದಾಗಿದ್ದೇವೆ. ರಾಜ್ಯದಲ್ಲಿ ಪುನಃ ಬಿಜೆಪಿ ಸರಕಾರ ಅಧಿಕಾರಕ್ಕೆ ತರಲು ಶ್ರಮಿಸಲು ಹೈಕಮಾಂಡ್ ಆದೇಶ ನೀಡಿದೆ. ಹೈಕಮಾಂಡ್ ಆಶಯದಂತೆ ಪಕ್ಷವನ್ನು ಅಧಿಕಾರಕ್ಕೆ ತರುತ್ತೇವೆ ಎಂದು ವಿರೋಧ ಪಕ್ಷದ ನಾಯಕ ಕೆ.ಎಸ್.ಈಶ್ವರಪ್ಪ ವಿಶ್ವಾಸ ವ್ಯಕ್ತಪಡಿಸಿದರು.
ಬಡತನ,ನಿರುದ್ಯೋಗ ಸೇರಿದಂತೆ ಎಲ್ಲ ಸಮಸ್ಯೆಗಳಿಗೂ ಕಾಂಗ್ರೆಸ್ ಪಕ್ಷವೇ ಕಾರಣ. ರಾಜ್ಯದಲ್ಲಿ ಪುನಃ ಬಿಜೆಪಿಯನ್ನು ಅಧಿಕಾರಕ್ಕೆ ತರಬೇಕು ಎಂಬುದು ಹಿಂದುಳಿದ ವರ್ಗಗಳ ಮಠಾಧೀಶರ ಬಯಕೆ. ಯಡಿಯೂರಪ್ಪನವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಲು ಹಿಂದುಳಿದ ವರ್ಗದ ಮುಖಂಡರು ಬಿಜೆಪಿ ಪರವಾಗಿ ಕೆಲಸ ಮಾಡಬೇಕು ಎಂದು ಅವರು ಕರೆ ನೀಡಿದರು.
ಸಭೆಯಲ್ಲಿ ರಾಜ್ಯ ಹಿಂದುಳಿದ ವರ್ಗಗಳ ಬಿಜೆಪಿ ಮೋರ್ಚಾದ ಅಧ್ಯಕ್ಷ ಬಿ.ಜೆ.ಪುಟ್ಟಸ್ವಾಮಿ, ಮಾಜಿ ಸಚಿವ ಅರವಿಂದ ಲಿಂಬಾವಳಿ ಸೇರಿದಂತೆ ಇತರರು ಇದ್ದರು.
ಸಿದ್ದರಾಮಯ್ಯ ಸರಕಾರ ಇನ್ನು ಒಂದು ವರ್ಷ ಪೂರೈಸುವ ವಿಶ್ವಾಸವಿಲ್ಲ. ದಿನಕ್ಕೊಂದು ಭ್ರಷ್ಟಾಚಾರಗಳು ಹೊರ ಬರುತ್ತಿವೆ. ಚುನಾವಣೆಗೂ ಮುನ್ನ ಅಧಿಕಾರದಿಂದ ಕಾಂಗ್ರೆಸ್ ಪಕ್ಷ ಕೆಳಗಿಳಿಯಲಿದೆ.
-ಕೆ.ಎಸ್.ಈಶ್ವರಪ್ಪ, ವಿರೋಧ ಪಕ್ಷದ ನಾಯಕ