ನಾಲ್ವರು ದರೋಡೆ ಆರೋಪಿಗಳ ಬಂಧನ

Update: 2017-02-22 17:28 GMT

ಶಿವಮೊಗ್ಗ, ಫೆ. 22: ಕಳೆದ ಏಳು ತಿಂಗಳ ಹಿಂದೆ ನಗರದ ಹೊರವಲಯ ಅಬ್ಬಲಗೆರೆ ಬಳಿ ಬೈಕ್ ಸವಾರರೊಬ್ಬರನ್ನು ಅಡ್ಡಗಟ್ಟಿ ಮಾರಕಾಸ್ತ್ರಗಳಿಂದ ಜೀವ ಬೆದರಿಕೆ ಹಾಕಿ ನಗನಾಣ್ಯ ದೋಚಿದ್ದ ನಾಲ್ವರು ಆರೋಪಿಗಳನ್ನು ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿದ್ದಾರೆ.


ಬಂಧಿತರನ್ನು ಭದ್ರಾವತಿ ರಸ್ತೆಯ ಮಾಚೇನಹಳ್ಳಿ ಹಾಲಿನ ಡೈರಿ ಬಳಿಯ ನಿವಾಸಿ ಬಿ. ಮಂಜು (29), ಗಾಂಧಿಬಝಾರ್ ಧರ್ಮರಾಯನ ಕೇರಿ ನಿವಾಸಿ ಭರತ್ (19), ವಿನೋಬನಗರ 60ನೆ ಅಡಿ ರಸ್ತೆಯ ತರಕಾರಿ ಮಾರುಕಟ್ಟೆ ಬಳಿಯ ನಿವಾಸಿ ಸುಮಂತ್ (19) ಮತ್ತು ಅಶೋಕನಗರ ಚಾನಲ್ ಏರಿಯಾ ನಿವಾಸಿ ಭಾಗ್ಯರಾಜು (19) ಎಂದು ಗುರುತಿಸಲಾಗಿದೆ. ಆರೋಪಿಗಳನ್ನು ಮಾಚೇನಹಳ್ಳಿ ಡೈರಿ ಸಮೀಪ ಬಂಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದು, ಆಪಾದಿತರು ದರೋಡೆ ಮಾಡಿದ್ದ 16 ಸಾವಿರ ರೂ. ವೌಲ್ಯದ ಮೊಬೈಲ್, ಕೃತ್ಯಕ್ಕೆ ಬಳಸಿದ್ದ ದ್ವಿಚಕ್ರ ವಾಹನವನ್ನು ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ.


ಕಾರ್ಯಾಚರಣೆಯಲ್ಲಿ ಇನ್‌ಸ್ಪೆಕ್ಟರ್ ಗಂಗಾಧರಪ್ಪ, ಸಬ್‌ಇನ್‌ಸ್ಪೆಕ್ಟರ್ ಉಮೇಶ್ ಕುಮಾರ್ ಮತ್ತು ಸಿಬ್ಬಂದಿ ಭಾಗವಹಿಸಿದ್ದರು.ಘಟನೆ ಹಿನ್ನೆಲೆ: ಕಳೆದ ವರ್ಷ ಜುಲೈಯಲ್ಲಿ ಸೊರಬ ತಾಲೂಕಿನ ಕೆರೆಹಳ್ಳಿ ಗ್ರಾಮದ ನಿವಾಸಿ ರಾಘವೇಂದ್ರ ಎಂಬವರು ದ್ವಿಚಕ್ರ ವಾಹನದಲ್ಲಿ ಸೊರಬದಿಂದ ಶಿವಮೊಗ್ಗಕ್ಕೆ ಆಗಮಿಸುತ್ತಿದ್ದ ವೇಳೆ, ಅಬ್ಬಲಗೆರೆಯ ಬಳಿ ಎರಡು ಬೈಕ್‌ಗಳಲ್ಲಿ ಬಂದ ಐವರು ಯುವಕರ ತಂಡ ಇವರನ್ನು ಅಡ್ಡಗಟ್ಟಿ ನಿಲ್ಲಿಸಿತ್ತು.

ಬಳಿಕ ಮಾರಕಾಸ್ತ್ರಗಳನ್ನು ತೋರಿಸಿ ರಾಘವೇಂದ್ರ ಅವರಿಗೆ ಜೀವ ಬೆದರಿಕೆ ಹಾಕಿ ಅವರ ಬಳಿಯಿದ್ದ 3, 400 ರೂ. ನಗದು ಹಾಗೂ 16 ಸಾವಿರ ರೂ. ವೌಲ್ಯದ ಮೊಬೈಲ್ ಫೋನ್ ಕಿತ್ತು ಪರಾರಿಯಾಗಿತ್ತು.

ಈ ಸಂಬಂಧ ರಾಘವೇಂದ್ರ ಅವರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಘಟನೆ ನಡೆದ ಏಳು ತಿಂಗಳ ಬಳಿಕ ಕೃತ್ಯದಲ್ಲಿ ಭಾಗಿಯಾಗಿದ್ದ ನಾಲ್ವರನ್ನು ಬಂಧಿಸುವಲ್ಲಿ ಸಫಲರಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News