ಮಡಿಕೇರಿ: ಪ್ರವಾಸಿ ಬಸ್ ಪಲ್ಟಿ; 15 ತಮಿಳುನಾಡು ವಿದ್ಯಾರ್ಥಿಗಳಿಗೆ ಗಾಯ

Update: 2017-02-24 15:21 GMT

ಮಡಿಕೇರಿ, ಫೆ.24: ತಮಿಳುನಾಡಿನಿಂದ ಪ್ರವಾಸಕ್ಕೆಂದು ಆಗಮಿಸಿದ್ದ ಇಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿಗಳಿದ್ದ ಖಾಸಗಿ ಬಸ್ಸೊಂದು ನಗರದ ಅರಣ್ಯ ಭವನದ ತಿರುವಿನಲ್ಲಿ ಪಲ್ಟಿಯಾಗಿ ಅಂದಾಜು 15 ವಿದ್ಯಾರ್ಥಿಗಳು ಸಣ್ಣ ಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ತಮಿಳುನಾಡಿನ ತಿರುಚ್ಚಿಯ ಸರಕಾರಿ ಇಂಜಿನಿಯರಿಂಗ್ ಕಾಲೇಜಿನ ಸುಮಾರು 50 ವಿದ್ಯಾರ್ಥಿಗಳು ಹಾಗೂ ನಾಲ್ವರು ಉಪನ್ಯಾಸಕರು ಕರ್ನಾಟಕ ಪ್ರವಾಸದ ಸಲುವಾಗಿ ಬೆಂಗಳೂರಿನ ಅತ್ತಿಬೆಲೆಯವರೆಗೆ ತಮಿಳುನಾಡು ಬಸ್‌ನಲ್ಲಿ ಆಗಮಿಸಿ, ನಂತರ ರಾಜ್ಯದ ಖಾಸಗಿ ಬಸ್‌ನಲ್ಲಿ ಮೈಸೂರನ್ನು ವೀಕ್ಷಿಸಿಕೊಂಡು ಶುಕ್ರವಾರ ಕೊಡಗಿನ ತಲಕಾವೇರಿ ಮತ್ತು ಭಾಗಮಂಡಲ ಕ್ಷೇತ್ರಗಳ ವೀಕ್ಷಣೆಗೆಂದು ಆಗಮಿಸುತ್ತಿದ್ದರು.

ಖಾಸಗಿ ಬಸ್ ನಗರದ ಅಂಚಿನ ಅರಣ್ಯ ಭವನದ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿ ಪಲ್ಟಿಯಾಗಿದೆ. ಇದರಿಂದ ಬಸ್‌ನಲ್ಲಿದ್ದ ಅಂದಾಜು 15 ವಿದ್ಯಾರ್ಥಿಗಳಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಇವರಿಗೆ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಯಿತು.

ಘಟನೆಗೆ ಸಂಬಂಧಿಸಿದಂತೆ ಮಡಿಕೇರಿ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಳ್ಳಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News