ವಿದ್ಯುತ್ ತಂತಿ ಸ್ಪರ್ಶಿಸಿ ಗರ್ಭಿಣಿ ಜಿಂಕೆ ಬಲಿ: ಆರೋಪಿ ವಶಕ್ಕೆ
Update: 2017-02-24 17:34 GMT
ಮುಂಡಗೋಡ, ಫೆ.24: ಅನಧಿಕೃತ ವಿದ್ಯುತ್ ತಂತಿಗೆ ಗರ್ಭಿಣಿ ಜಿಂಕೆಯೊಂದು ಬಲಿಯಾದ ಘಟನೆ ತಾಲೂಕಿನ ಅತ್ತಿವೇರಿ ಗ್ರಾಮದ ಗೌಳಿದಡ್ಡಿ ಹತ್ತಿರ ಶುಕ್ರವಾರ ಬೆಳಗ್ಗೆ ಸಂಭವಿಸಿದೆ.
ಗೌಳಿ ದಡ್ಡಿಯ ಅಂಬೋಜಿ ಜನ್ನು ಬೋಡಕರೆ(72) ಎಂಬವರು ಅನಧಿಕೃತ ವಿದ್ಯುತ್ನ್ನು ತನ್ನ ಹೊಲದ ತಂತಿ ಬೇಲಿಗೆ ಹರಿಬಿಟ್ಟ ವ್ಯಕ್ತಿ.
ಅಂಬೋಜಿ ತನ್ನ ಹೊಲದ ಸರ್ವೇ ನಂ.62ರಲ್ಲಿ 2 ಎಕರೆ ಹೊಲದಲ್ಲಿ ಮೆಕ್ಕೆಜೋಳ ಬೆಳೆದಿದ್ದು, ಅದನ್ನು ರಕ್ಷಿಸಲು ಅನಧಿಕೃತವಾಗಿ ವಿದ್ಯುತನ್ನು ತನ್ನ ತಂತಿ ಬೇಲಿಗೆ ಹರಿಬಿಟ್ಟಿದ್ದರು ಎನ್ನಲಾಗಿದೆ. ಆಹಾರ ಅರಸಲು ಬಂದ ಸುಮಾರು 3 ವರ್ಷದ ಜಿಂಕೆ ಹೊಲದ ಒಳಗೆ ಪ್ರವೇಶಿಸಲು ಹೋಗಿ ವಿದ್ಯುತ್ ತಾಗಿಸಿಕೊಂಡು ಮೃತಪಟ್ಟಿದೆ ಎಂದು ಹೇಳಲಾಗಿದೆ.
ಈ ಕುರಿತು ಮುಂಡಗೋಡ ಅರಣ್ಯಾಧಿಕಾರಿಗಳು ಆರೋಪಿ ಅಂಬೋಜಿಯನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.