ಮಾರಣಾಂತಿಕ ಹಲ್ಲೆ: ಆರೋಪಿಗೆ ಜೈಲು ಶಿಕ್ಷೆ, ದಂಡ
ಚಿಕ್ಕಮಗಳೂರು, ಮಾ.13: ಕ್ಷುಲ್ಲಕ ಕಾರಣಕ್ಕಾಗಿ ವ್ಯಕ್ತಿ ಮೇಲೆ ಮಾರಣಾಂತಿಕ ಹಲ್ಲೆಗೈದ ಆರೋಪಿಗೆ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಿ ನಗರದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ತೀರ್ಪು ನೀಡಿದೆ.
12 ವರ್ಷಗಳ ಹಿಂದೆ ಆರೋಪಿ ಮಂಜು ಎಂಬವರು ಮೂಡಿಗೆರೆ ಪ್ರೇಮ ಎಂಬವರ ತಾಯಿ ಕಲ್ಯಾಣಮ್ಮ ಅವರನ್ನು ಮನೆಗೆ ಕರೆದೊಯ್ದು ಸಂಸಾರ ಮಾಡಿಕೊಂಡಿದ್ದನು. ಆಗಾಗ ಸಾಂಸಾರಿಕ ವಿಚಾರವಾಗಿ ಮಂಜು ಮತ್ತು ಕಲ್ಯಾಣಮ್ಮನ ನಡುವೆ ಗಲಾಟೆ ನಡೆಯುತ್ತಿತ್ತು. 2015ರ ಅ.30ರಂದು ಮಧ್ಯಾಹ್ನ 3:30ಕ್ಕೆ ಗಲಾಟೆ ವೇಳೆ ಕಲ್ಯಾಣಮ್ಮಳ ಕೈ, ಕಾಲು, ತಲೆ ಮತ್ತು ಮುಖಕ್ಕೆ ದೊಣ್ಣೆಯಿಂದ ಹೊಡೆದು ಕೊಲೆ ಮಾಡಿದ್ದನು. ಈ ಹಿನ್ನೆಲೆ ಮೂಡಿಗೆರೆ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಬಾ.ದಂ.ಸಂ. ಕಲಂ 302ರ ಅನ್ವಯ ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶೆ ಪ್ರಭಾವತಿ ಎಂ.ಹಿರೇಮಠ್ ಅವರು, ಆರೋಪಿ ಮಂಜುಗೆ ಜೀವಾವಧಿ ಶಿಕ್ಷೆ ಹಾಗೂ 5,000 ರೂ. ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ಸರಕಾರದ ಪರವಾಗಿ ಸರಕಾರಿ ಅಭಿಯೋಜಕ ಕೆ.ಕೆ.ಕುಲಕರ್ಣಿ ವಾದ ಮಂಡಿಸಿದ್ದರು.