ಬುಡಕಟ್ಟು ಸಂಸ್ಕೃತಿ ಅರಣ್ಯ ರಕ್ಷಣೆಗೆ ಪೂರಕ: ಡಿಸಿ
ಮಡಿಕೇರಿ, ಮಾ.17: ಬುಡಕಟ್ಟು ಸಂಸ್ಕೃತಿ ಅರಣ್ಯ ರಕ್ಷಣೆಗೆ ಪೂರಕವಾಗಿದ್ದು, ಈ ಅದ್ವಿತೀಯ ಸಂಸ್ಕೃತಿಯನ್ನು ಉಳಿಸಿ ಬೆಳೆಸಲು ಪ್ರತಿಯೊಬ್ಬರ ಪ್ರೋತ್ಸಾಹ ಅಗತ್ಯವಿದೆ ಎಂದು ಜಿಲ್ಲಾಧಿಕಾರಿ ಡಾ. ರಿಚರ್ಡ್ ವಿನ್ಸೆಂಟ್ ಡಿಸೋಜ ತಿಳಿಸಿದ್ದಾರೆ.
ತಂಜಾವೂರಿನ ದಕ್ಷಿಣ ವಲಯ ಸಾಂಸ್ಕೃತಿಕ ಕೇಂದ್ರ ಹಾಗೂ ಮಡಿಕೇರಿ ಆಕಾಶವಾಣಿ ವತಿಯಿಂದ ರಾಷ್ಟ್ರಿಯ ಬುಡಕಟ್ಟು ಸಮುದಾಯಗಳ ಹಾಡು ಮತ್ತು ನೃತ್ಯದ ಸಮ್ಮಿಲನ ‘ಕಾಡಿನ ಮಕ್ಕಳ ಹಬ್ಬ-2017’ಕ್ಕೆ ನಗರದ ಗಾಂಧಿ ಮೈದಾನದಲ್ಲಿ ಚಾಲನೆ ನೀಡಿ ಅವರು ಮಾತನಾಡಿದರು.
ಕಾಡಿನಲ್ಲೇ ವಾಸಿಸುತ್ತಾ ಹಸಿರ ಪರಿಸರಕ್ಕೆ ಒಗ್ಗಿಕೊಂಡಿರುವ ಬುಡಕಟ್ಟು ಜನರು ತಮ್ಮ ವಿಶಿಷ್ಟ ಸಂಸ್ಕೃತಿಯನ್ನು ಇಂದಿಗೂ ಉಳಿಸಿಕೊಂಡು ಬಂದಿರುವುದು ಶ್ಲಾಘನೀಯ ಎಂದ ಜಿಲ್ಲಾಧಿಕಾರಿ, ಕಾಡಿದ್ದರೆ ನಾಡು ಎನ್ನುವ ಸಂದೇಶದೊಂದಿಗೆ ಕಾಡಿನ ಮಕ್ಕಳ ಹಬ್ಬ ನಡೆಯುತ್ತಿದೆ. ಇದು ಅರ್ಥಪೂರ್ಣವಾಗಲಿ ಎಂದು ಶುಭಹಾರೈಸಿದರು.
ತಂಜಾವೂರಿನ ದಕ್ಷಿಣ ವಲಯ ಸಾಂಸ್ಕೃತಿಕ ಕೇಂದ್ರದ ನಿರ್ದೇಶಕ ಡಾ.ಇ.ಎನ್. ಸಜಿಲ್ ಮಾತನಾಡಿ, ಕಳೆದ ನಾಲ್ಕು ವರ್ಷಗಳಿಂದ ಮಡಿಕೇರಿಯಲ್ಲಿ ಕಾಡಿನ ಮಕ್ಕಳ ಹಬ್ಬವನ್ನು ಯಶಸ್ವಿಯಾಗಿ ನಡೆಸಿಕೊಂಡು ಬರಲಾಗುತ್ತಿದ್ದು, ಸ್ಥಳೀಯರ ಸಹಕಾರದೊಂದಿಗೆ ನಿರಂತರವಾಗಿ ಕಾರ್ಯಕ್ರಮ ನಡೆಸಲು ಪ್ರಯತ್ನ ನಡೆಸಲಾಗುವುದು ಎಂದು ಭರವಸೆ ನೀಡಿದರು. ಕಾಡಿನ ಮಕ್ಕಳ ಹಬ್ಬದಲ್ಲಿ ಬುಡಕಟ್ಟು ಜನರ ಸಂಸ್ಕೃತಿಯ ಅನಾವರಣ ಮಾತ್ರವಲ್ಲದೆ ಕಾಡಿನ ಮಕ್ಕಳು ತಯಾರಿಸಿದ ಕರಕುಶಲ ವಸ್ತುಗಳನ್ನು ನೋಡಬಹುದಾಗಿದೆ ಎಂದು ಅವರು ತಿಳಿಸಿದರು.
ಮಡಿಕೇರಿ ಆಕಾಶವಾಣಿಯ ಸಹಾಯಕ ನಿರ್ದೇಶಕ ಎಂ.ರಾಘವೇಂದ್ರ ಮಾತನಾಡಿ, ಜನಪದೀಯ ಅನುಪಮ ಕಲೆಗಳು ಬುಡಕಟ್ಟು ಸಂಸ್ಕೃತಿಯಲ್ಲಿ ಮಿಳಿತವಾಗಿದ್ದು, ಇದನ್ನು ಪ್ರೋತ್ಸಾಹಿಸುವ ಪ್ರಯತ್ನವನ್ನು ಮಾಡಲಾಗುತ್ತಿದೆ ಎಂದರು. ನಗರಸಭಾ ಅಧ್ಯಕ್ಷರಾದ ಕಾವೇರಮ್ಮ ಸೋಮಣ್ಣ, ಕೊಡವ ಸಾಹಿತ್ಯ ಅಕಾಡಮಿ ಅಧ್ಯಕ್ಷ ಬಿ.ಎಸ್.ತಮ್ಮಯ್ಯ ಹಾಗೂ ಆಕಾಶವಾ ಣಿಯ ನಿವೃತ್ತ ನಿರ್ದೇಶಕಿ ಇಂದಿರಾ ಯೇಸುಪ್ರಿಯ ಗಜರಾಜ್ ಉಪಸ್ಥಿತರಿದ್ದು, ಕಾಡಿನ ಮಕ್ಕಳ ಹಬ್ಬಕ್ಕೆ ಶುಭ ಹಾರೈಸಿದರು.
ರಾಜ್ಯದ ವಿವಿಧ ಜಿಲ್ಲೆಗಳ ತಂಡಗಳು ಆಯಾ ಜಿಲ್ಲೆಗಳ ವಿಶಿಷ್ಟ ನೃತ್ಯಗಳನ್ನು ಪ್ರದರ್ಶಿಸಲಿದ್ದು, ಹೊರ ರಾಜ್ಯಗಳ ಕಲಾ ತಂಡಗಳಾದ ತಮಿಳುನಾಡಿನ ತೋಡ, ಆಂಧ್ರಪ್ರದೇಶದ ದಿಂಸಾ ನೃತ್ಯ, ತೆಲಂಗಾಣದ ಲಂಬಾಣಿ, ಕೇರಳದ ಮಂಗಳಂ ಕಳಿ, ಲಕ್ಷ ದ್ವೀಪದ ಪರಿಚರ ಕಳಿ ಸೇರಿದಂತೆ 28ಕಲಾ ತಂಡಗಳು ಕಾಡಿನ ಮಕ್ಕಳ ಹಬ್ಬದಲ್ಲಿ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಲಿದ್ದಾರೆ.
ಪಿ.ಬಾಲನ್ ‘ಕಾಡಿನ ಮಕ್ಕಳ ಹಬ್ಬ 2017’ ಕಾರ್ಯಕ್ರಮ ಸಂಯೋಜಕ 400 ಕಲಾವಿದರಿಂದ ಕಾರ್ಯಕ್ರಮ
ಕೊಡಗು ಜಿಲ್ಲೆ ಹಾಗೂ ರಾಜ್ಯದ ಜಾನಪದ ಕಲಾ ತಂಡಗಳು ಸೇರಿದಂತೆ ದೇಶದ ಸುಮಾರು 28ಕಲಾ ತಂಡಗಳ 400 ಕಲಾವಿ ದರು ತಮ್ಮ ವಿಶಿಷ್ಟ ಸಂಸ್ಕೃತಿಯನ್ನು ಮೂರು ದಿನಗಳ ಕಾಲ ಪ್ರದರ್ಶಿಸಲಿದ್ದಾರೆ.