ಓ ಮೆಣಸೇ...

Update: 2017-04-10 05:25 GMT

ದೇಶಕ್ಕೆ ಮೋದಿ ಉತ್ತಮ ನಾಯಕ - ಎಸ್.ಎಂ.ಕೃಷ್ಣ, ಮಾಜಿ ಮುಖ್ಯಮಂತ್ರಿ

    ಭಾರತ ದೇಶಕ್ಕೆ ಹೊರತು ಪಡಿಸಿ.
---------------------
ಕಾಂಗ್ರೆಸ್‌ನಲ್ಲಿ ಯಾವುದೂ ಸರಿಯಿಲ್ಲ - ಆರ್.ಅಶೋಕ್, ಮಾಜಿ ಉಪ ಮುಖ್ಯಮಂತ್ರಿ

     ಆ ಸರಿಯಿಲ್ಲದ್ದನ್ನೆಲ್ಲ ಮತ್ತೇಕೆ ಬಿಜೆಪಿಗೆ ಆಮದು ಮಾಡಿಕೊಳ್ಳುತ್ತಿದ್ದೀರಿ?
---------------------
     ದೇಶದಾದ್ಯಂತ ಪರಿವರ್ತನೆಯ ಗಾಳಿ ಬೀಸುತ್ತಿದೆ - ನಳಿನ್ ಕುಮಾರ್ ಕಟೀಲು, ಸಂಸದ

     ಅದು ಗಾಳಿಯಲ್ಲ, ನೀವು ಬಿಟ್ಟ ವಿಷಭಾಷಣದ ಹೊಗೆ.
---------------------
     ಕಾಂಗ್ರೆಸ್ ಮೊದಲಿನಂತಿಲ್ಲ - ಎಚ್.ವಿಶ್ವನಾಥ್, ಮಾಜಿ ಸಂಸದ

     ಹೌದು. ಮೊದಲು ಕಾಂಗ್ರೆಸ್ ನಿಮಗೆ ಅಧಿಕಾರ ಕೊಟ್ಟಿತ್ತು.
---------------------
     ನಾನೀಗ ಭಾರತೀಯ ಸಂಸ್ಕೃತಿಯ ರಾಯಭಾರಿ - ದಲಾಯಿ ಲಾಮ, ಬೌದ್ಧ ಧರ್ಮಗುರು

     ರೋಹಿಂಗ್ಯಾದ ಬೌದ್ಧ ಬಿಕ್ಕುಗಳಿಗೂ ಆ ಸಂಸ್ಕೃತಿಯನ್ನು ಒಂದಿಷ್ಟು ವಿತರಿಸಬಾರದೇ?
---------------------
     ಅಧ್ಯಾತ್ಮದ ಮೂಲಕ ಇಡೀ ವಿಶ್ವಕ್ಕೆ ಶಾಂತಿ, ನೆಮ್ಮದಿ ಕೊಡುವ ಶಕ್ತಿ ಭಾರತೀಯರಿಗಿದೆ - ವಜುಭಾಯಿ ವಾಲಾ, ರಾಜ್ಯಪಾಲ

     ಮತ್ತೇಕೆ ಭಾರತೀಯರ ಶಾಂತಿ, ನೆಮ್ಮದಿ ಈ ಮಟ್ಟಿಗೆ ಕೆಟ್ಟಿರುವುದು?
---------------------
     ಭಯೋತ್ಪಾದನೆಯಿಂದ ಇಸ್ಲಾಂ ಧರ್ಮದ ಗೌರವಕ್ಕೆ ಚ್ಯುತಿ ತರಲಾಗುತ್ತಿದೆ - ರಾಜನಾಥ್ ಸಿಂಗ್, ಕೇಂದ್ರ ಸಚಿವ

    ಸಂಘ ಪರಿವಾರದ ಭಯೋತ್ಪಾದನೆ ಹಿಂದೂ ಧರ್ಮಕ್ಕೆ ಚ್ಯುತಿ ತಂದಂತೆ.
---------------------
     ಭಗವಾನ್ ಶ್ರೀಕೃಷ್ಣ ಕೂಡಾ ಮಹಿಳೆಯರನ್ನು ಚುಡಾಯಿಸುತ್ತಿದ್ದ ಒಬ್ಬ ಪೋಲಿ - ಪ್ರಶಾಂತ್ ಭೂಷಣ್, ಆಪ್ ಮಾಜಿ ಮುಖಂಡ

    ಮಹಿಳೆಯರೆಲ್ಲ ಕೃಷ್ಣ ತಮ್ಮನ್ನು ಚುಡಾಯಿಸಲಿ ಎಂದೇ ನದಿಗೆ ಸ್ನಾನಕ್ಕೆ ಹೋಗುತ್ತಿದ್ದರಂತೆ.

---------------------
     2018ರ ಚುನಾವಣೆಯಲ್ಲಿ ಜೆಡಿಎಸ್ ಅಧಿಕಾರಕ್ಕೆ ಬರುವುದು ಖಚಿತ - ಕುಮಾರಸ್ವಾಮಿ, ಜೆಡಿಎಸ್ ಅಧ್ಯಕ್ಷ

    ಹಾಸನದ ನಗರ ಪಂಚಾಯತ್ ಬಗ್ಗೆ ಹೇಳುತ್ತಿರಬೇಕು.

---------------------
     ಸೋಲು ಎನ್ನುವುದು ಪ್ರಜಾಪ್ರಭುತ್ವದ ವ್ಯವಸ್ಥೆ - ಆಸ್ಕರ್ ಫೆರ್ನಾಂಡಿಸ್, ಕಾಂಗ್ರೆಸ್ ನಾಯಕ

     ಅದೀಗ ನಿಮ್ಮ ದುರವಸ್ಥೆ.
---------------------
     ನಾನು ಬಿಜೆಪಿ ಸೇರುವುದಿಲ್ಲ - ಜಾಫರ್ ಶರೀಫ್, ಕಾಂಗ್ರೆಸ್ ಮುಖಂಡ

   ಸುದ್ದಿ ಕೇಳಿ ಬಿಜೆಪಿ ಕಾರ್ಯಕರ್ತರು ಸಮಾಧಾನದ ನಿಟ್ಟುಸಿರು ಬಿಟ್ಟಿದ್ದಾರಂತೆ. ಕಾಂಗ್ರೆಸ್ ಕಂಗಾಲಾಗಿದೆಯಂತೆ.

  ---------------------

 ಕೆಪಿಸಿಸಿ ಅಧ್ಯಕ್ಷ ಸ್ಥಾನ ಮುಂದುವರಿಸಿದರೆ ಸಚಿವ ಸ್ಥಾನ ಬಿಡಲು ಸಿದ್ಧ - ಡಾ.ಜಿ.ಪರಮೇಶ್ವರ್, ಸಚಿವ

  ಅಂದರೆ, ಕಾಂಗ್ರೆಸ್‌ನ್ನು ಮುಳುಗಿಸಿಯೇ ಕೆಪಿಸಿಸಿ ಅಧ್ಯಕ್ಷ ಸ್ಥಾನ ತೊರೆಯುವ ಉದ್ದೇಶವೇ?
---------------------

ನಮ್ಮ ಕಾಲದ ರಾಜಕೀಯವೇ ಬೇರೆ. ಈಗಿನ ರಾಜಕೀಯವೇ ಬೇರೆ - ಬಿ.ಎಲ್.ಶಂಕರ್, ಮಾಜಿ ಸಚಿವ

 ಹೌದು. ಆಗ ಚುನಾವಣೆಯ ಸಂದರ್ಭದಲ್ಲಿ ಒಬ್ಬನಿಗೆ ನೂರು ರುಪಾಯಿ ಹಂಚಿದರೆ ಸಾಕಿತ್ತು.

---------------------
     ಮಾಜಿ ಸಂಸದೆ ರಮ್ಯಾ ಯಾವುದೇ ಕಾರಣಕ್ಕೂ ಕಾಂಗ್ರೆಸ್ ತೊರೆಯುವುದಿಲ್ಲ - ರಂಜಿತಾ, ರಮ್ಯಾ ತಾಯಿ

     ಬಹುಶಃ ಕಾಂಗ್ರೆಸ್ ರಮ್ಯಾನನ್ನು ತೊರೆಯುವ ಲಕ್ಷಣ ಕಾಣುತ್ತಿದೆ.
---------------------
     ಸೌಹಾರ್ದ ಕಾಪಾಡಲು ಜಾಫರ್ ಶರೀಫ್ ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್‌ರನ್ನು ರಾಷ್ಟ್ರಪತಿ ಹುದ್ದೆಗೆ ಬೆಂಬಲಿಸಿರಬಹುದು - ದೇವೇಗೌಡ,ಮಾಜಿ ಪ್ರಧಾನಿ

    ಸೌಹಾರ್ದ ಕಾಪಾಡಲು ನಿಮ್ಮಿಂದ ಇನ್ನೇನೇನು ಹೇಳಿಕೆಗಳು ಹೊರಬೀಳಬಹುದು ಎಂಬ ಆತಂಕ ಜನರದು.

---------------------
     ಚುನಾವಣಾ ಆಯೋಗ ಈಗ ಚುನಾವಣೆಗಳನ್ನು ಅಪಹಾಸ್ಯದ ವಸ್ತುವಾಗಿ ಮಾಡುತ್ತಿವೆ - ಅರವಿಂದ ಕೇಜ್ರಿವಾಲ್, ದಿಲ್ಲಿ ಮುಖ್ಯಮಂತ್ರಿ

     ಅಪಹಾಸ್ಯದ ವಸ್ತು ಅಲ್ಲ, ಯಂತ್ರ.
---------------------
     ಮೋದಿ ಹಾಗೂ ಆದಿತ್ಯನಾಥ್ ನಾಥೂರಾಮ್ ಗೋಡ್ಸೆಯ ವಂಶಸ್ಥರು - ತೇಜ್ ಪ್ರತಾಪ್ ಯಾದವ್, ಬಿಹಾರ ಸಚಿವ

     ಆ ಬಗ್ಗೆ ಅವರಿಗೆ ಹೆಮ್ಮೆಯಿದೆಯಂತೆ.
---------------------
     ರಕ್ತಪಾತದಿಂದ ಯಾರಿಗೂ ಅನುಕೂಲವಿಲ್ಲ - ನರೇಂದ್ರ ಮೋದಿ, ಪ್ರಧಾನಿ

     ತಮಗೆ ಯಾವ ರೀತಿಯಲ್ಲಿ ಅನುಕೂಲವಾಗಿದೆ ಎನ್ನುವುದು ದೇಶಕ್ಕೆ ಗೊತ್ತಿದೆ.

---------------------
     ನಮ್ಮ ಕೆಲಸದ ಬಗ್ಗೆ ಹೆಮ್ಮೆ ಇರಬೇಕು, ಅಹಂಕಾರ ಇರಬಾರದು - ಬಾಬಾ ರಾಮ್‌ದೇವ್, ಯೋಗಗುರು

     ಲಜ್ಜೆ, ನಾಚಿಕೆಯಿಲ್ಲದವರು ಕೆಲವೊಮ್ಮೆ ಎಂತಹ ಕೆಲಸ ಮಾಡಿದರೂ ಅದಕ್ಕೆ ಹೆಮ್ಮೆ ಪಟ್ಟುಕೊಳ್ಳುತ್ತಲೇ ಇರುತ್ತಾರೆ.

---------------------
     ಕಾಂಗ್ರೆಸ್ ಪಕ್ಷದ ಅಧ್ಯಕ್ಷನಾಗಲು ನಾನು ಸಿದ್ಧ - ಕೆ.ಎಚ್.ಮುನಿಯಪ್ಪ, ಸಂಸದ

     ಕಾಂಗ್ರೆಸ್ ಸಿದ್ಧವೇ ಎನ್ನುವುದು ಪ್ರಶ್ನೆ.
---------------------
     ದಲಿತರಿಗೆ ಉನ್ನತ ಸ್ಥಾನ ಕೊಟ್ಟ ಪಕ್ಷವೆಂದರೆ ಅದು ಕಾಂಗ್ರೆಸ್ ಮಾತ್ರ - ಎಚ್.ಆಂಜನೇಯ, ಸಚಿವ

     ನೀವು ಪ್ರತಿಯಾಗಿ ದಲಿತರಿಗೆ ಏನು ಕೊಟ್ಟಿರಿ ಎನ್ನುವುದು ಈಗ ಚರ್ಚೆಯಲ್ಲಿರುವ ವಿಷಯ.
---------------------
     ಗೂಂಡಾಗಿರಿ ಉಡುಪಿ ಜಿಲ್ಲೆಗೆ ಶೋಭೆಯಲ್ಲ - ವಿಶ್ವೇಶತೀರ್ಥ ಸ್ವಾಮೀಜಿ, ಪೇಜಾವರ ಮಠ

     ಅದನ್ನು ಗೂಂಡಾಗಿರಿ ಎಂದು ಕರೆಯದೇ, ಸಂಸ್ಕೃತಿ ರಕ್ಷಣೆ ಎಂದು ಕರೆದರಾಯಿತು.

---------------------
     ಎಸ್.ಎಂ.ಕೃಷ್ಣ ನಿರ್ಗಮನದ ಬಳಿಕ ನಾನು 15 ದಿನ ಡಿಪ್ರೆಶನ್‌ನಲ್ಲಿದ್ದೆ - ಡಿ.ಕೆ.ಶಿವಕುಮಾರ್, ಸಚಿವ

     ಸದ್ಯ ಈಗ ಡಿಪ್ರೆಶನ್ ಬಿಜೆಪಿಗೆ ವರ್ಗಾವಣೆಯಾಗಿದೆ.

---------------------
     ಈ ದೇಶಕ್ಕೋಸ್ಕರ ಕಾಶ್ಮೀರ ಯುವಕರು ಕಲ್ಲೆಸೆಯುತ್ತಿದ್ದಾರೆ - ಫಾರೂಕ್ ಅಬ್ದುಲ್ಲಾ, ನ್ಯಾಶನಲ್ ಕಾನ್ಫರೆನ್ಸ್ ನಾಯಕ

     ಅವರ ಕೈಗೆ ಕೆಲಸ ಕೊಡದೆ, ಕಲ್ಲು ಕೊಟ್ಟ ನೀವೇ ಮೊದಲ ಅಪರಾಧಿಗಳು.
---------------------
     ರಾಜ್ಯ ಸರಕಾರಕ್ಕೆ ಬರಕ್ಕಿಂತ ಚುನಾವಣೆಯೇ ಮುಖ್ಯ - ಜಗದೀಶ್ ಶೆಟ್ಟರ್, ಮಾಜಿ ಮುಖ್ಯಮಂತ್ರಿ

     ನಿಮಗೆ ಚುನಾವಣೆ ಮುಖ್ಯವಲ್ಲವೇ?
---------------------
     ನಾನು ಉ.ಪ್ರ.ದ ಬಡರೈತ. ಮುಖ್ಯಮಂತ್ರಿ ಆದಿತ್ಯನಾಥ್ ನನ್ನ ಸಾಲವನ್ನೂ ಮನ್ನಾ ಮಾಡಬೇಕು - ವಿಜಯ ಮಲ್ಯ, ಉದ್ಯಮಿ

     ಉತ್ತರ ಪ್ರದೇಶದ ಬಡರೈತರು ನೇಣುಹಾಕಿಕೊಳ್ಳುತ್ತಿದ್ದಾರೆ. ನಿಮ್ಮಿಂದ ಅಂತಹ ಕೊಡುಗೆಯೇನಾದರೂ ದೇಶಕ್ಕಿದೆಯೇ?
---------------------
     ಯಡಿಯೂರಪ್ಪ ಕೊಟ್ಟ ಕುದುರೆ ಏರದವರು - ಡಿ.ಕೆ ಶಿವಕುಮಾರ್, 

    ಸಚಿವ ಸದ್ಯಕ್ಕೆ ಕತ್ತೆಯಾದರೂ ಸರಿ, ಏರುತ್ತೇನೆ ಎಂಬ ಸ್ಥಿತಿಯಲ್ಲಿದ್ದಾರೆ.

Writer - ಪಿ.ಎ.ರೈ

contributor

Editor - ಪಿ.ಎ.ರೈ

contributor

Similar News

ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ…
ಓ ಮೆಣಸೇ
ಓ ಮೆಣಸೇ...!
ಓ ಮೆಣಸೇ...
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...
ಓ ಮೆಣಸೇ...