ಆಳುವವರು ಬಂಡವಾಳಶಾಹಿಗಳ ಎಂಜಲುನಾಯಿಗಳಂತಾಗಿದ್ದಾರೆ: ದೇವನೂರ ಮಹದೇವ ಕಿಡಿ

Update: 2017-04-17 14:47 GMT

ಮಂಡ್ಯ, ಎ.17: ಬಣ್ಣದ ಬಣ್ಣದ ಮಾತುಗಳಿಂದ ಜನಸಾಮಾನ್ಯರ ಓಟು ಪಡೆದು ಅಧಿಕಾರ ಪಡೆದವರು ಬಂಡವಾಳಶಾಹಿಗಳ ಎಂಜಲು ನಾಯಿಗಳಂತಾಗಿದ್ದಾರೆ ಎಂದು ಖ್ಯಾತ ಸಾಹಿತಿ ದೇವನೂರ ಮಹದೇವ ಕಿಡಿಕಾರಿದ್ದಾರೆ.

ಜೆಸಿಬಿ (ಜಾತ್ಯತೀತ ಜನತಾ ದಳ, ಕಾಂಗ್ರೆಸ್, ಬಿಜೆಪಿ) ಪಕ್ಷಗಳ ವಿರುದ್ಧ ಜನಾಂದೋಲನಗಳ ಮಹಾಮೈತ್ರಿ ವತಿಯಿಂದ ನಗರದ ಸಿಲ್ವರ್ ಜ್ಯೂಬಿಲಿ ಪಾರ್ಕ್‌ನಲ್ಲಿ ನಡೆದ ಜನ ಪರ್ಯಾಯ ಕಟ್ಟೋಣ ಜಾಥಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಅಧಿಕಾರ ಮುನ್ನಡೆಸುವ ಪ್ರಧಾನಿ, ಮುಖ್ಯಮಂತ್ರಿ, ಸಚಿವರು ಬಡವರ, ರೈತರ, ದುಡಿಯುವವರ ಹಿತ ಕಾಯುವ ಬದಲು ಬಂಡವಾಳಶಾಹಿಗಳ ಆಸ್ಥಾನದಲ್ಲಿನ ಎಂಜಲು ನಾಯಿಗಳಂತಾಗಿದ್ದಾರೆ. ಇನ್ನೂ ಸ್ವಲ್ಪ ಗೌರವಕೊಟ್ಟು ಹೇಳುವುದಾದರೆ ಅವರೆಲ್ಲಾ ಬಂಡವಾಳಶಾಹಿಗಳ ಮೇಸ್ತ್ರಿಗಳಾಗಿದ್ದಾರೆ ಎಂದು ಅವರು ವಿಶ್ಲೇಷಿಸಿದರು.

ಸಿದ್ದಲಿಂಗಯ್ಯ ಅವರ "ಯಾರಿಗೆ ಬಂತು 47ರ ಸ್ವಾತಂತ್ರ್ಯ" ಎಂಬ ಗೀತೆಯನ್ನು ಉಲ್ಲೇಖಿಸಿದ ಅವರು, ಇಂದು ಅಂಬಾನಿ, ಅದಾನಿಗಳಂತಹ ಬಂಡವಾಳಶಾಹಿಗಳ ಜೇಬಿಗೆ ಸ್ವಾತಂತ್ರ್ಯ ಬಂದಿದೆ. ಈ ಬಂಡವಾಳಶಾಹಿಗಳು ಹೇಳಿದಂತೆ ಸರಕಾರಗಳು ಕಾನೂನು ರೂಪಿಸುತ್ತಿವೆ. ಕುರಿಕಾಯಲು ತೋಳನ ನೇಮಿಸಿದಂತೆ, ರಾಜಕಾರಣಿಗಳು ತಮಗೆ ನೀಡಿದ ಅಧಿಕಾರವನ್ನು ಬಂಡವಾಳಶಾಹಿಗಳ ಕೈಗೆ ಕೊಟ್ಟುಬಿಟ್ಟಿದ್ದಾರೆ. ಪರಿಣಾಮ ಜನರ ಹಿತಕಾಯುವ ಬದಲು ಅಭಿವೃದ್ಧಿ ಹೆಸರಿನಲ್ಲಿ ಪ್ರಾಕೃತಿಕ ಸಂಪತ್ತಿನ ಲೂಟಿಯಾಗುತ್ತಿದೆ. ಪರಿಸರ ಕಲುಷಿತಗೊಂಡಿದೆ ಎಂದು ಅವರು ಹೇಳಿದರು.

ಜಾಥಾಗೆ ಚಾಲನೆ ನೀಡಿ ಮಾತನಾಡಿದ ಸಮಾಜ ಪರಿವರ್ತನ ಟ್ರಸ್ಟ್ ಅಧ್ಯಕ್ಷ ಎಸ್.ಆರ್.ಹಿರೇಮಠ್, ಜನವಿರೋಧಿ ಸರಕಾರಗಳ ನೀತಿಗಳಿಂದ ದೇಶದಲ್ಲಿನ ಕೃಷಿಕರು, ಕಾರ್ಮಿಕರು, ಬಡವರ ಪರಿಸ್ಥಿತಿ ಶೋಚನೀಯವಾಗಿದೆ. ರೈತರ ಆತ್ಮಹತ್ಯೆ ಹೆಚ್ಚುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.

ಜನವಿರೋಧಿ ಆಡಳಿತ, ಭ್ರಷ್ಟಾಚಾರ, ಸ್ವಜನ ಪಕ್ಷಪಾತ, ಸಂವಿಧಾನ ವಿರೋಧಿ ಚಟುವಟಿಕೆಗಳ ಬಗ್ಗೆ ಜನಾಂದೋಲನವಾಗಬೇಕಾಗಿದೆ. ಪರಿಸರ, ಪ್ರಾಕೃತಿ ಸಂಪತ್ತು, ಸರ್ವಜನರ ಹಿತ ಕಾಯುವ ಪರ್ಯಾಯ ರಾಜಕೀಯದ ಅಗತ್ಯದೆಡೆಗೆ ಜನರನ್ನು ಅಣಿಗೊಳಿಸಬೇಕಾಗಿದೆ ಎಂದು ಹೇಳಿದರು.

ಶಾಸಕ, ರೈತಸಂಘದ ವರಿಷ್ಠ ಕೆ.ಎಸ್.ಪುಟ್ಟಣ್ಣಯ್ಯ, ಭ್ರಷ್ಟಾಚಾರ ಮುಕ್ತ ಕರ್ನಾಟಕದ ರವಿಕೃಷ್ಣರೆಡ್ಡಿ, ರೈತಸಂಘದ ಮುಖಂಡರಾದ ನಂದಿನಿ ಜಯರಾಂ, ಬಡಗಲಪುರ ನಾಗೇಂದ್ರ, ಕೆ.ಟಿ.ಗಂಗಾಧರ್, ಸುರೇಶ್, ರಾಘವೇಂದ್ರ ಕುಷ್ಟಗಿ, ಕರ್ನಾಟಕ ಜನಶಕ್ತಿಯ ಡಾ.ವಾಸು, ಮಹಿಳಾ ಮುನ್ನಡೆಯ ಮಲ್ಲಿಗೆ, ನ.ಲಿ.ಕೃಷ್ಣ, ದೊಡ್ಡಿಪಾಳ್ಯ ನರಸಿಂಹಮೂರ್ತಿ, ಚಂದ್ರಶೇಖರ ಮೇಟಿ ಸೇರಿದಂತೆ ಹಲವು ಪ್ರಗತಿಪರ ಸಂಘಟನೆಗಳ ಮುಖಂಡರು ಜಾಥಾದಲ್ಲಿ ಪಾಲ್ಗೊಂಡಿದ್ದರು.

ಜಾಥಾವು ರಾಮನಗರ, ಚಿಕ್ಕಬಳ್ಳಾಪುರ, ತುಮಕೂರು, ಚಿಕ್ಕಮಗಳೂರು, ಶಿವಮೊಗ್ಗ, ದಾವಣಗೆರೆ, ಹುಬ್ಬಳ್ಳಿ, ಗದಗ, ಬಳ್ಳಾರಿ ಮೂಲಕ ಸಾಗಿ ಎ.27 ರಂದು ರಾಯಚೂರಿನಲ್ಲಿ ಸಮಾಪ್ತಿಗೊಳ್ಳಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News