ಸ್ವಾತಂತ್ರ್ಯ ಹೋರಾಟಗಾರರು ನಿರ್ಮಿಸಿದ ಕೊಟ್ಟನಹಳ್ಳಿ ಗಾಂಧಿ ಭವನ ಲೋಕಾರ್ಪಣೆ
ತುಮಕೂರು.ಎ.30: ತಾಲೂಕಿನ ದೊಡ್ಡ ನಾರವಂಗಲ ಗ್ರಾಮ ಪಂಚಾಯಿತಿಯ ಕೊಟ್ಟನಹಳ್ಳಿ ಗ್ರಾಮದಲ್ಲಿ ಶ್ರೀಮತಿ ಸರೋಜಮ್ಮ ಮತ್ತು ಟಿ.ಆರ್.ರೇವಣ್ಣ ಚಾರಿಟಬಲ್ ಟ್ರಸ್ಟ್ ವತಿಯಿಂದ ಸ್ಥಾಪಿಸಿರುವ ಗಾಂಧಿ ಭವನದ ಉದ್ಘಾಟನೆ ನೆರವೇರಿತು.
ಜಿಲ್ಲಾ ಉಸ್ತುವಾರಿ ಸಚಿವ ಟಿ.ಬಿ.ಜಯಚಂದ್ರ ಅವರು ಯುವಜನತೆಗೆ ಗ್ರಾಮೀಣ ಜನರ ಬದುಕು ಬವಣೆಗಳ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ಹಿರಿಯ ಸ್ವಾತಂತ್ರ ಹೋರಾಟಗಾರರಾದ ಟಿ.ಆರ್.ರೇವಣ್ಣ ಅವರ ತಮ್ಮ ಸ್ವಂತ ಭೂಮಿಯನ್ನು ಮಾರಾಟ ಮಾಡಿ ಬಂದ ಹಣವನ್ನು ಭವನ ಕಟ್ಟಲು ಉಪಯೋಗಿಸಿದ್ದಾರೆ. ಇದರ ಲಾಭ ಯುವಜನರಿಗೆ ಸಿಗುವಂತಾಗಬೇಕು ಎಂದರು.
ಟಿ.ಆರ್. ರೇವಣ್ಣನವರು ಒಬ್ಬ ಶ್ರೇಷ್ಠ, ಪ್ರಾಮಾಣಿಕ, ಸ್ವಚ್ಚ ಸ್ವಾತಂತ್ರ್ಯ ಹೋರಾಟಗಾರ. ಗಾಂಧೀಜಿ ಹಾಗೂ ಕಾರ್ಲ್ಮಾರ್ಕ್ ತತ್ವಗಳಲ್ಲಿ ನಂಬಿಕೆ ಇಟ್ಟವರು. 1927ರಲ್ಲಿ ಗಾಂಧೀಜಿಯವರು ತುಮಕೂರಿಗೆ ಬಂದಾಗ ಅವರನ್ನು ಹತ್ತಿರದಿಂದ ನೋಡಿ ಅವರ ತತ್ವ ಸಿದ್ದಾಂತಗಳನ್ನು ಒಪ್ಪಿ ಸ್ವಾತಂತ್ರ್ಯ ಹೋರಾಟಕ್ಕೆ ಧುಮುಕಿ, ಜೈಲುವಾಸ ಅನುಭವಿಸಿದ್ದಾರೆ.
ನಿರಂತರವಾಗಿ ದುಡಿಯುವ ವರ್ಗದ ಹೋರಾಟಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವ ಮೂಲಕ ನ್ಯಾಯಾ ದೊರಕಿಸಿಕೊಡುವಲ್ಲಿ ಮುಂಚೂಣಿಯಲ್ಲಿದ್ದಾರೆ.ಇಂತಹವರ ಮಾರ್ಗದರ್ಶನ ನಮ್ಮ ಯುವಜನತೆಗೆ ದೊರೆಯಬೇಕು ಎಂದರು.
ಗಾಂಧೀಜಿಯವರು ಹೇಳಿದ ಹಾಗೆ ಈ ದೇಶದ ಜೀವಾಳ ಹಳ್ಳಿಗಳಾಗಿದ್ದು,ಹಳ್ಳಿಗಳ ಜೀವನ ಶೈಲಿಯನ್ನು ಮತ್ತು ಸಮಸ್ಯೆಯನ್ನು ಅಧ್ಯಯನ ಮಾಡಲು ಈ ಭವನ ಮಾದರಿಯಾಗಲಿ ಎಂಬ ಆಶಯ ವ್ಯಕ್ತಪಡಿಸಿದ ಅವರು ಸದರಿ ಭವನಕ್ಕೆ ಜಾಗ ಸಾಕಾಗುವುದಿಲ್ಲ.ಪಕ್ಕದಲ್ಲಿರುವ ಬೇರೆಯವರ ಜಮೀನನ್ನು ಕೊಂಡು ಈ ಭವನಕ್ಕೆ ಕೊಡಲಾಗುವುದು ಎಂದು ಭರವಸೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ತುಮಕೂರು ಗ್ರಾಮಾಂತರ ಕ್ಷೇತ್ರದ ಶಾಸಕ ಬಿ.ಸುರೇಶ್ಗೌಡ ಮಾತನಾಡಿ, ಈ ಭವನಕ್ಕೆ ಬೇಕಾಗುವ ಎಲ್ಲಾ ಮೂಲಭೂತ ಸೌಕರ್ಯಗಳನ್ನು ಶಾಸಕರ ಸ್ಥಳೀಯ ಪ್ರದೇಶಾಭಿವೃದ್ದಿ ಅನುದಾನದಲ್ಲಿ ಒದಗಿಸಲಾಗುವುದು ಎಂದು ಭರವಸೆ ನೀಡಿದರು.
ಜಿಲ್ಲಾಧಿಕಾರಿ ಕೆ.ಪಿ. ಮೊಹನ್ರಾಜ್,ಸಂಸದ ಎಸ್.ಪಿ.ಮುದ್ದಹನುಮೇಗೌಡ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಬಾಪೂಜಿ ವಿದ್ಯಾ ಸಂಸ್ಥೆಯ ಕಾರ್ಯದರ್ಶಿ ಎಂ.ಬಸವಚಿಯ್ಯ ಪ್ರಾಸ್ತಾವಿಕ ನುಡಿಗಳನ್ನಾಡಿದರು.ಟೂಡಾ ಮಾಜಿ ಅಧ್ಯಕ್ಷ ಸಿದ್ಧಲಿಂಗೇಗೌಡ,ರೈತ ಸಂಘದ ರಾಜ್ಯಉಪಾಧ್ಯಕ ಗೊಂವಿಂದರಾಜು,ಜಿಲ್ಲಾ ಕಸಾಪ ಅಧ್ಯಕ್ಷೆ ಬಾ.ಹ.ರಮಾಕುಮಾರಿ, ಪರಿಸರವಾದಿ ಯತಿರಾಜು,ಪ್ರಗತಿಪರ ಚಿಂತಕರು ಹಾಗೂ ಟ್ರಸ್ಟ್ ಅಧ್ಯಕ್ಷರಾದ ಕೆ.ದೊರೈರಾಜ್, ಕಾರ್ಮಿಕ ಮುಖಂಡ ಸೈಯದ್ ಮುಜೀಬ್ ಭಾಗವಹಿಸಿದ್ದರು.