ಸಿಡಿಮದ್ದು ಸ್ಫೋಟ: ತಂದೆ, ಮಗ ಸೇರಿ ಮೂವರು ಮೃತ್ಯು
ಹಾಸನ, ಮೇ 2: ಸಿಡಿಮದ್ದು ಸ್ಫೋಟಗೊಂಡು ತಂದೆ, ಮಗ ಸೇರಿ ಮೂವರು ಸಾವನಪ್ಪಿದ ಘಟನೆ ತಾಲೂಕಿನ ಕಟ್ಟಾಯ ಬಳಿ ನಡೆದಿದೆ.
ತಾಲೂಕಿನ ಕಟ್ಟಾಯ ಬಳಿ ಇರುವ ಮೂಡ್ಲೂಕೊಪ್ಪಲು ಗ್ರಾಮದ ಜಗದೀಶ್ (55), ಅವರ ಪುತ್ರ ಪುನೀತ್ ಕುಮಾರ್ (22) ಹಾಗೂ ಅರಕಲಗೂಡು ತಾಲೂಕಿನ ಬೆಟ್ಟದಹಳ್ಳಿ ನಿವಾಸಿ ನಾಗರಾಜು (40) ಎಂಬುವರೇ ಮೃತಪಟ್ಟವರು.
ಯಧುರಾಜು ಎನ್ನುವ ಗುತ್ತಿಗೆದಾರ ಕೂಲಿ ಕಾರ್ಮಿಕರನ್ನು ಬಂಡೆ ಸಿಡಿಸಲು ಕರೆದಿದ್ದ. ಸೋಮವಾರ ಸುಮಾರು 7 ಗಂಟೆಯ ಸಮಯದಲ್ಲಿ ಬಂಡೆ ಕೊರೆದು ಜಿಲೆಟಿನ್ ಕಡ್ಡಿ ಅಳವಡಿಸುವಾಗ ಈ ಅವಘಡ ಸಂಭವಿಸಿದೆ. ಬಂಡೆ ಸ್ಫೋಟಗೊಂಡಾಗ ಮೂವರು ಸ್ಥಳದಲ್ಲೆ ಮೃತಪಟ್ಟರೆ, ದೂರದಲ್ಲೆ ಇದ್ದ ಕೆಲವರಿಗೆ ಗಾಯಗಳಾಗಿವೆ.
ಪುನೀತ್ ಕುಮಾರ್ ನಗರದ ಎನ್.ಆಡಿ.ಆರ್.ಕೆ. ಕಾಲೇಜಿನಲ್ಲಿ ಅಂತಿಮ ವರ್ಷದ ಬಿಕಾಂ ಶಿಕ್ಷಣ ಪಡೆಯುತ್ತಿದ್ದರು. ಪರೀಕ್ಷೆ ಬರೆಯುತ್ತಿದ್ದ ಇವರು ಬಂಡೆ ಸಿಡಿಸುವುದನ್ನು ವೀಕ್ಷಣೆ ಮಾಡಲೆಂದು ತಂದೆಯ ಜೊತೆ ತೆರಳಿದ್ದ ಎನ್ನಲಾಗಿದೆ.
ಈ ಬಗ್ಗೆ ಗೊರೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.