ಏನೇ ಆದ್ರೂ ಬ್ರಿಗೇಡ್ ಬಿಡಲ್ಲ: ಮತ್ತೆ ಗುಡುಗಿದ ಈಶ್ವರಪ್ಪ
ದಾವಣಗೆರೆ, ಮೇ 3: ಏನೇ ಆದರೂ ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಬಿಡಲ್ಲ ಎಂದು ಮೇಲ್ಮನೆ ವಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪಮತ್ತೆ ಗುಡುಗಿದ್ದಾರೆ.
ಹರಿಹರ ತಾಲೂಕಿನ ಬೆಳ್ಳೋಡಿ ಗ್ರಾಮದ ಕನಕ ಗುರುಪೀಠ ಶಾಖಾ ಮಠಕ್ಕೆ ಇಂದು ಭೇಟಿ ನೀಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಂದುಳಿದ ವರ್ಗ, ಅಲ್ಪಸಂಖ್ಯಾತರು ಮತ್ತು ಶೋಷಿತ ವರ್ಗದವರ ಪರವಾಗಿ ರಾಯಣ್ಣ ಬ್ರಿಗೇಡ್ ಹೋರಾಟ ಮುಂದುವರೆಸಲಿದೆ. ಈ ಸಂಬಂಧ ಇದೇ 8 ರಂದು ಸಭೆ ನಡೆಯಲಿದೆ. ಇಲ್ಲಿ ಮಹತ್ವದ ನಿರ್ಧಾರವನ್ನು ಕೈಗೊಳ್ಳಲಾಗುವುದು ಎಂದು ಹೇಳುವ ಮೂಲಕ ಬಿಜೆಪಿ ರಾಜ್ಯ ನಾಯಕರಿಗೆ ತಿರುಗೇಟು ನೀಡಿದ್ದಾರೆ.
ಈಗಾಗಲೇ ಮೈಸೂರಿನಲ್ಲಿ ರಾಜ್ಯ ಕಾರ್ಯಕಾರಿಣಿ ಇದೇ 7 ರಿಂದ ಆರಂಭಗೊಳ್ಳಲಿದೆ ಎಂದು ಪಕ್ಷದ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿ ಇನ್ನೂ 24 ಗಂಟೆ ಕಳೆಯುವುದರೊಳಗೆ ಅದಕ್ಕೆ ಸಡ್ಡು ಹೊಡೆಯುವಂತೆ ಈಗ ಈಶ್ವರಪ್ಪ ರಾಯಣ್ಣ ಬ್ರಿಗೇಡ್ ಪರ ಮತ್ತೆ ಗುಡುಗಿದ್ದಾರೆ.
ಯೋಗ್ಯತೆ ಇಲ್ಲದವರನ್ನೆಲ್ಲಾ ಪದಾಧಿಕಾರಿಗಳನ್ನಾಗಿ ಮಾಡಿ ಯಡಿಯೂರಪ್ಪನವರು ಸರ್ವಾಧಿಕಾರಿಯಂತೆ ವರ್ತಿಸುತ್ತಿದ್ದಾರೆ. ಇದನ್ನೆಲ್ಲಾ ರಾಷ್ಟ್ರೀಯ ನಾಯಕರು ಗಮನಿಸುತ್ತಿದ್ದಾರೆ. ಇದೇ ವೇಳೆ ಕೆಲವರು ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಸಂತೋಷ್ ವಿರುದ್ಧ ಟೀಕೆ ಮಾಡುತ್ತಿರುವುದು ಸರಿಯಲ್ಲ ಎಂದು ಹೇಳಿದ್ದಾರೆ.