ಯಡಿಯೂರಪ್ಪ ಮಾತಿನಿಂದ ನೋವಾಗಿದೆ: ಈಶ್ವರಪ್ಪ
ದಾವಣಗೆರೆ, ಮೇ 3: ಸಂಘ ಪರಿವಾರದ ಹಿರಿಯ ಪ್ರಚಾರಕ ಬಿ.ಎಲ್. ಸಂತೋಷ್ ಕುರಿತು ಯಡಿಯೂರಪ್ಪಹಗುರವಾಗಿ ಮಾತನಾಡಿದ್ದು, ಕಾರ್ಯಕರ್ತರಿಗೆ ನೋವನ್ನುಂಟು ಮಾಡಿದೆ ಎಂದು ವಿಧಾನ ಪರಿಷತ್ ಪ್ರತಿಪಕ್ಷದ ನಾಯಕ ಕೆ.ಎಸ್. ಈಶ್ವರಪ್ಪತಿಳಿಸಿದ್ದಾರೆ.
ಹರಿಹರ ತಾಲೂಕು ಬೆಳ್ಳೂಡಿ ಗ್ರಾಮದ ಶ್ರೀ ಕನಕ ಗುರುಪೀಠದ ಶಾಖಾ ಮಠಕ್ಕೆ ಬುಧವಾರ ಭೇಟಿ ನೀಡಿ, ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಸಂತೋಷ್ ಸಮಾಜಕ್ಕಾಗಿ, ಸಂಘಟನೆಗಾಗಿ ದುಡಿಯುತ್ತಿರುವ ವ್ಯಕ್ತಿ. ಇದು ಎಲ್ಲ ಕಾರ್ಯಕರ್ತರಿಗೆ ತಿಳಿದಿರುವ ವಿಷಯವಾಗಿದೆ. ಕಾರ್ಯಕರ್ತರನ್ನು ಗಮನದಲ್ಲಿಟ್ಟುಕೊಂಡು ಯಡಿಯೂರಪ್ಪ ಮಾತನಾಡಬೇಕಿದೆ. ಅವರ ಬಗ್ಗೆ ಹೀಗೆಲ್ಲ ಮಾತನಾಡಬಾರದು ಎಂದರು. 2018ರ ಚುನಾವಣೆಗೆ 224 ಕ್ಷೇತ್ರದಲ್ಲೂ ರಾಜ್ಯ ನಾಯಕರು ಸಮೀಕ್ಷೆ ನಡೆಸಿ, ಸ್ಥಳೀಯ ಸಂಸ್ಥೆಗಳ ಕಾರ್ಯಕರ್ತರು, ಮುಖಂಡರ ಅಭಿಪ್ರಾಯ ಪಡೆದ ನಂತರವೇ ಬಿಜೆಪಿ ಟಿಕೆಟ್ ನೀಡಲಿದ್ದಾರೆ ಎಂದರು.
ರಾಜ್ಯದ ಎಲ್ಲರಿಗೂ ನ್ಯಾಯ ಕೊಡಿಸುವ ಸಂಘಟನೆಯಾಗಿ ರಾಯಣ್ಣ ಬ್ರಿಗೇಡ್ ಹೊರ ಹೊಮ್ಮುತ್ತಿದೆ. ಆದ್ದರಿಂದ ಬ್ರಿಗೇಡ್ ನಿಲ್ಲಿಸುವ ಮಾತೇ ಇಲ್ಲ. ಹಿಂದುಳಿದ ವರ್ಗ, ದಲಿತರು, ಲಿಂಗಾಯತ, ಬ್ರಾಹ್ಮಣ ಎಲ್ಲ ಬಡವರಿಗೂ ನ್ಯಾಯ ಕಲ್ಪಿಸುವ ಸಂಘಟನೆಯಾಗಿ ಬ್ರಿಗೇಡ್ ಕೆಲಸ ಮಾಡುತ್ತಿದ್ದು, ಯಾವುದೇ ಕಾರಣಕ್ಕೂ ಬ್ರಿಗೇಡ್ ಚಟುವಟಿಕೆಯನ್ನು ನಿಲ್ಲಿಸುವುದಿಲ್ಲ ಎಂದು ಹೇಳಿದರು.
ಸಂಗೊಳ್ಳಿ ರಾಯಣ್ಣ ಬ್ರಿಗೇಡ್, ಸಂಗೊಳ್ಳಿ ರಾಯಣ್ಣ ಯುವ ಬ್ರಿಗೇಊಗೆಪದಾಧಿಕಾರಿ ನೇಮಿಸಿದ್ದೇವೆ. ರಾಜ್ಯದ ಪ್ರತೀ ವಿಧಾನಸಭಾ ಕ್ಷೇತ್ರದಲ್ಲೂ ಎರಡೂ ಕಕ್ಕೆಪದಾಧಿಕಾರಿನೇಮಿಸಲಾಗಿದೆ. ಮೇ 8ಕ್ಕೆ ರಾಯಚೂರಿನಲ್ಲಿ ಬ್ರಿಗೇಡ್ನ ಅಭ್ಯಾಸ ವರ್ಗ ಆಯೋಜಿಸಲಾಗಿದೆ. ಅಭ್ಯಾಸ ವರ್ಗಕ್ಕೆ ಉಭಯ ಘಟಕದಿಂದ ಅಧ್ಯಕ್ಷ, ಪ್ರಧಾನ ಕಾರ್ಯದರ್ಶಿ ಸೇರಿದಂತೆ ತಲಾ ಮೂವರು ಪದಾಧಿಕಾರಿಗಳಂತೆ ರಾಜ್ಯದ ವಿವಿಧ ಜಿಲ್ಲೆಯಿಂದ ಸುಮಾರು 1 ಸಾವಿರಕ್ಕೂ ಅಧಿಕ ಜನರು ಭಾಗವಹಿಸಲಿದ್ದಾರೆ. ಹಿಂದುಳಿದ ವರ್ಗ, ದಲಿತರಿಗೆ ಸಿಎಂ ಸಿದ್ದರಾಮಯ್ಯ ಸರಕಾರ ಏನು ಮಾಡಿದೆ? ಎಂಬ ಬಗ್ಗೆ ಚರ್ಚಿಸುವುದೇ ವರ್ಗದ ಮುಖ್ಯ ಅಜೆಂಡಾ ಎಂದು ಹೇಳಿದರು.
ಬಿಜೆಪಿ ಸರಕಾರ ನಿಶ್ಚಿತ: ಮುಂಬರುವ ಚುನಾವಣೆಯಲ್ಲಿ ರಾಜ್ಯದಲ್ಲಿ ಬಿಜೆಪಿ ಸರಕಾರ ಬರುವುದು ನಿಶ್ಚಿತ. ಪಕ್ಷ ಆಡಳಿತಕ್ಕೆ ಬರಬೇಕೆಂದೇ ಇಷ್ಟೆಲ್ಲಾ ಹೋರಾಟ ನಡೆಸಿದ್ದೇನೆ. ಬಿಜೆಪಿಯ 17 ಸಂಸದರು ರಾಜ್ಯವನ್ನು ಪ್ರತಿನಿಧಿಸಿದ್ದರೂ ಪಕ್ಷದಲ್ಲಿ ಗೊಂದಲವೇಕೆಂಬ ಪ್ರಶ್ನೆ ಸಹಜವಾಗಿಯೇ ಜನರಲ್ಲೂ ಇದೆ. ಈ ಗೊಂದಲಗಳೆಲ್ಲಾ ಕರಗಬೇಕು, ಮತ್ತೆ ನಮ್ಮ ಪಕ್ಷವು ಅಧಿಕಾರಕ್ಕೆ ಬರಬೇಕೆಂಬ ಸದುದ್ದೇಶ ನಮ್ಮದು ಎಂದು ತಿಳಿಸಿದರು.
ಪಕ್ಷದ ಮುಖಂಡರಾದ ಎಸ್.ಎಂ. ವೀರೇಶ ಹನಗವಾಡಿ, ಬ್ರಿಗೇಡ್ನ ಪ್ರಧಾನ ಕಾರ್ಯದರ್ಶಿ ಎಚ್.ಸಿ. ಕೀರ್ತಿಕುಮಾರ, ಬೆಳ್ಳೂಡಿ ರಾಮಚಂದ್ರಪ, ಪರಶುರಾಂ ಕಾಟ್ವೆ, ಅಜಿತ್ ಸಾವಂತ್, ವೆಂಕಟೇಶ ಶೆಟ್ಟಿ, ಮೋತ್ಯಾನಾಯ್ಕ, ವಡ್ನಾಳ್ ಪ್ರಕಾಶ, ಮಂಜುನಾಯ್ಕ, ಸುರೇಶ ತೇರದಾಳ, ರಾಜೇಶ ವರ್ಣೇಕರ್ ಮತ್ತಿತರರು ಉಪಸ್ಥಿತರಿದ್ದರು.
ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲಿದ್ದು, ಪಕ್ಷದ ತತ್ವ, ಸಿದ್ಧಾಂತ ಗೊತ್ತಿರುವ ಶಾಸಕರು, ಸಚಿವರಾಗಬೇಕು. ಪಕ್ಷದ ಬಗ್ಗೆ ಏನೂ ಗೊತ್ತಿಲ್ಲದವರಿಂದ ಪಕ್ಷಕ್ಕೆ ಯಾವ ಲಾಭವೂ ಆಗದು. ಕೆ.ಎಸ್. ಈಶ್ವರಪ್ಪ
ದೃಷ್ಟಿ ಬೊಟ್ಟು ತೆಗೆಯುವ ಕೆಲಸ ನಡೆಯುತ್ತಿದೆ: ಬಿ.ವೈ.ರಾಘವೇಂದ್ರ
ಶಿವಮೊಗ್ಗ: ಹುಟ್ಟಿದ ಮಗುವಿಗೆ ದೃಷ್ಟಿಯಾಗಬಾರದೆಂಬ ಉದ್ದೇಶದಿಂದ ದೃಷ್ಟಿ ತೆಗೆಯುವ, ದೃಷ್ಟಿ ಬೊಟ್ಟು ಇಡುವ ಸಂಪ್ರದಾಯವಿದೆ. ಅದರಂತೆ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬರುವುದು ನಿಶ್ಚಿತವಾಗಿದೆ. ಕೆಟ್ಟ ದೃಷ್ಟಿಗಳು ಸರಕಾರದ ಮೇಲೆ ಬೀಳಬಾರದೆಂಬ ಉದ್ದೇಶದಿಂದ, ಈಗಿನಿಂದಲೇ ದೃಷ್ಟಿ ತೆಗೆಯುವ ಕೆಲಸವಾಗುತ್ತಿದೆ ಕೆಲವೆ ದಿನಗಳಲ್ಲಿ ಎಲ್ಲವೂ ಸರಿಯಾಗಲಿದೆ.
ಇದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪರ ಪುತ್ರ, ಶಾಸಕರೂ ಆದ ಬಿ.ವೈ.ರಾಘವೇಂದ್ರರ ಸೂಚ್ಯ ಮಾತುಗಳು. ಇತ್ತೀಚೆಗೆ ಬಿಜೆಪಿಯಲ್ಲಿ ನಡೆಯುತ್ತಿರುವ ವಿದ್ಯಮಾನಗಳ ಬಗ್ಗೆ ಬುಧವಾರ ತಮ್ಮನ್ನು ಸಂಪರ್ಕಿಸಿದ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಒಂದು ಕುಟುಂಬ ಎಂದ ಮೇಲೆ ಭಿನ್ನಾಭಿಪ್ರಾಯ, ವ್ಯತ್ಯಾಸಗಳಿರುತ್ತವೆ. ಹಾಗೆಯೇ ಬಿಜೆಪಿ ಪಕ್ಷವು ಒಂದು ದೊಡ್ಡ ಕುಟುಂಬವಿದ್ದಂತೆ. ಪಕ್ಷದಲ್ಲಿ ಸಣ್ಣಪುಟ್ಟ ಅಭಿಪ್ರಾಯ ಭೇದಗಳಿವೆ.
ಇವುಗಳನ್ನು ಕುಳಿತು ಬಗೆಹರಿಸಿಕೊಳ್ಳುತ್ತೇವೆ. ಎಲ್ಲ ಗೊಂದಲಗಳು ಮುಗಿದ ಅಧ್ಯಾಯವಾಗಿದೆ ಎಂದು ತಿಳಿಸಿದರು. ಬಿ.ಎಸ್.ಯಡಿಯೂರಪ್ಪ ವಿರುದ್ಧ ಪಕ್ಷದ ಕೆಲ ಜಿಲ್ಲಾ ಮುಖಂಡರು ಮಾಡುತ್ತಿರುವ ಟೀಕೆಯ ಬಗ್ಗೆ ಸ್ಪಷ್ಟ ಪ್ರತಿಕ್ರಿಯೆ ನೀಡದ ಅವರು, ಈ ಎಲ್ಲ ಘಟನೆಗಳು ಮುಗಿದ ವಿಷಯವಾಗಿದೆ. ಪ್ರತಿಕ್ರಿಯೆ ನೀಡುವ ಅಗತ್ಯವಿಲ್ಲ ಎಂದು ಉತ್ತರಿಸಿದ್ದಾರೆ. ಉತ್ತಮ ಸಾಧನೆ: ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಪಕ್ಷ ಅತ್ಯಧಿಕ ಸ್ಥಾನಗಳಲ್ಲಿ ಜಯ ಸಾಧಿಸಲಿದ್ದು, ಮತ್ತೊಮ್ಮೆ ರಾಜ್ಯದ ಅಧಿಕಾರ ಚುಕ್ಕಾಣಿ ಹಿಡಿಯುವುದು ಖಚಿತವಾಗಿದ್ದು, ಇದರಲ್ಲಿ ಯಾವುದೇ ಅನುಮಾನವಿಲ್ಲವಾಗಿದೆ.
ಹಾಗೆಯೇ ಶಿವಮೊಗ್ಗ ಜಿಲ್ಲೆಯಲ್ಲಿಯೂ ಬಿಜೆಪಿ ಅಭೂತಪೂರ್ವ ಸಾಧನೆ ಮಾಡಲಿದೆ. ಎಲ್ಲ ಕ್ಷೇತ್ರಗಳಲ್ಲಿಯೂ ಪಕ್ಷದ ಅಭ್ಯರ್ಥಿಗಳು ಜಯ ಸಾಧಿಸಲಿದ್ದಾರೆ ಎಂದು ಆತ್ಮವಿಶ್ವಾಸ ವ್ಯಕ್ತಪಡಿಸಿದರು. ಮುಂಬರು ವಿಧಾನಸಭೆ ಚುನಾವಣೆಯಲ್ಲಿ ಯಾವ ಕ್ಷೇತ್ರದಿಂದ ಕಣಕ್ಕಿಳಿಯುತ್ತೀರಾ? ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಪಕ್ಷದ ಸೂಚನೆಯಂತೆ ಲೋಕಸಭೆ, ವಿಧಾನಸಭೆ ಚುನಾವಣೆಗಳಿಗೆ ಸ್ಪರ್ಧಿಸಿದ್ದೇನೆ. ಮುಂದಿನ ದಿನಗಳಲ್ಲಿಯೂ ಪಕ್ಷದ ಸೂಚನೆ ಪಾಲನೆ ಮಾಡುತ್ತೇನೆ. ಪಕ್ಷದ ವರಿಷ್ಠರು ಕೈಗೊಳ್ಳುವ ತೀರ್ಮಾನಕ್ಕೆ ಬದ್ಧ್ದವಾಗಿರುತ್ತೇನೆ ಎಂದರು.