ಚಿರತೆ ದಾಳಿಗೆ ಕುರಿ ಬಲಿ: ಗ್ರಾಮಸ್ಥರಲ್ಲಿ ಆತಂಕ
Update: 2017-05-04 17:45 GMT
ನಾಗಮಂಗಲ, ಮೇ 4: ಗ್ರಾಮಕ್ಕೆ ನುಗ್ಗಿದ ಚಿರತೆಯೊಂದು ಕುರಿಯೊಂದನ್ನು ಹೊತ್ತೊಯ್ದು ತಿಂದುಹಾಕಿರುವ ಘಟನೆ ತಾಲೂಕಿನ ಹೊಣಕೆರೆ ಹೋಬಳಿ ಜುಟ್ಟನಹಳ್ಳಿ ಎಂಬಲ್ಲಿ ನಡೆದಿದ್ದು, ಗ್ರಾಮಸ್ಥರು ಆತಂಕಗೊಂಡಿದ್ದಾರೆ.
ರೈತ ರಾಮಕೃಷ್ಣ ಅವರ ಪುತ್ರ ದೊಡ್ಡದಾಸೇಗೌಡ ಎಂಬವರ ಕೊಟ್ಟಿಗೆಗೆ ನುಗ್ಗಿರುವ ಚಿರತೆ ಮಂದೆಯಲ್ಲಿದ್ದ ಕುರಿಗಳ ಪೈಕಿ ಒಂದನ್ನು ಗ್ರಾಮದ ಹೊರವಲಯಕ್ಕೆ ಹೊತ್ತೊಯ್ದು ಅರೆಬರೆ ತಿಂದು ಹಾಕಿದೆ. ಗುರುವಾರ ಬೆಳಗ್ಗೆ ಘಟನೆ ಬೆಳಕಿಗೆ ಬರುತ್ತಿದ್ದಂತೆ ಗ್ರಾಮಸ್ಥರು ಆತಂಕಗೊಂಡಿದ್ದಾರೆ. ಕಳೆದ ಶುಕ್ರವಾರ ಹೊಲದಲ್ಲಿ ಮೇಯುತ್ತಿದ್ದ ಕುರಿಯೊಂದನ್ನು ಹಾಡಹಗಲೇ ಚಿರತೆಯೊಂದು ಹೊತ್ತೊಯ್ದಿತ್ತು.
ಗ್ರಾಮದ ಹೊರವಲಯದ ಪೊದೆಯಲ್ಲಿ ಚಿರತೆ ಅಡಗಿಕೊಂಡಿರಬಹುದೆಂದು ಗ್ರಾಮಸ್ಥರು ಶಂಕೆ ವ್ಯಕ್ತಪಡಿಸಿದ್ದು, ಅರಣ್ಯ ಇಲಾಖೆ ಮತ್ತು ಸಂಬಂಧಿಸಿದವರು ಕೂಡಲೇ ಚಿರತೆ ಪತ್ತೆಹಚ್ಚಬೇಕೆಂದು ಒತ್ತಾಯಿಸಿದ್ದಾರೆ.