ಸಾಲಭಾದೆ: ರೈತ ಆತ್ಮಹತ್ಯೆ
ಚಿಕ್ಕಮಗಳೂರು, ಮೇ.9: ಸಾಲದ ಬಾಧೆ ತಾಳಲಾರದೆ ರೈತನೋರ್ವ ಮಾವಿನ ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿರುವ ಬಗ್ಗೆ ಸಖರಾಯಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಆತ್ಮಹತ್ಯೆ ಮಾಡಿಕೊಂಡ ರೈತನನ್ನು ಹೊನ್ನೇಗೌಡ(58) ಎಂದು ಗುರುತಿಸಲಾಗಿದೆ.
ಜಮೀನು ಅಭಿವೃದ್ಧಿಗೆ ಹೊನ್ನೇಗೌಡರು ಅಜ್ಜೇಗೌಡ ಹೆಸರಿನಲ್ಲಿ ಸಖರಾಯಪಟ್ಟಣ ಡಿಸಿಸಿ ಬ್ಯಾಂಕಿನಲ್ಲಿ 54 ಸಾವಿರ ರೂ., ಕೆನರಾ ಬ್ಯಾಂಕಿನಲ್ಲಿ ಒಡವೆ ಸಾಲದ ರೂಪದಲ್ಲಿ 35 ಸಾವಿರ ರೂ. ಹಾಗೂ ಸಹೋದರ ಧರ್ಮೇಗೌಡ ಹೆಸರಿನಲ್ಲಿ 1 ಲಕ್ಷ ರೂ., ಡಿಸಿ ಬ್ಯಾಂಕ್ನಲ್ಲಿ ಒಡವೆ ಸಾಲದ ರೂಪದಲ್ಲಿ 40 ಸಾವಿರ, ಇನ್ನೋರ್ವ ಸಹೋದರ ಬೀರೇಗೌಡ ಹೆಸರಿನಲ್ಲಿ ಹೈನುಗಾರಿಕೆಗಾಗಿ ಸಖರಾಯಪಟ್ಟಣದ ಕಾವೇರಿ ಬ್ಯಾಂಕಿನಲ್ಲಿ ಹಸು ಖರೀದಿಗೆ 45 ಸಾವಿರ ರೂ. ಸಹಿತ ಒಟ್ಟು ಸುಮಾರು 2 ಲಕ್ಷ ರೂ.ಗಳ ಸಾಲ ಮಾಡಿಕೊಂಡಿದ್ದರು.
3 ವರ್ಷಗಳಿಂದ ಸಕಾಲದಲ್ಲಿ ಮಳೆ ಬಾರದೆ ಕೃಷಿ ಭೂಮಿ ಬರಡಾಗಿತ್ತು. ಇದರಿಂದ ಸಾಲ ಮರುಪಾವತಿಗೆ ಸಾಧ್ಯವಾಗದೆ ಜೀವನದಲ್ಲಿ ಜಿಗುಪ್ಸೆಗೊಂಡು ಮಾವಿನ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮೃತರ ಸಹೋದರ ಧರ್ಮೇಗೌಡ ಸಖರಾಯಪಟ್ಟಣದ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.