ಶಿವಮೊಗ್ಗ ನಗರದಲ್ಲಿ ಫ್ಲೆಕ್ಸ್ ಅಳವಡಿಕೆ ನಿಷೇಧ
ಶಿವಮೊಗ್ಗ, ಮೇ 9: ನಗರದ ಪ್ರಮುಖ ರಸ್ತೆ, ವೃತ್ತ ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಫ್ಲ್ಲೆಕ್ಸ್ ಅಳವಡಿಕೆ ಮೇಲೆ ಸಂಪೂರ್ಣ ನಿಷೇಧ ಹೇರಿ ಮಹಾನಗರ ಪಾಲಿಕೆ ಆಡಳಿತ ಈ ಹಿಂದೆಯೇ ನಿರ್ಣಯ ಅಂಗೀ ಕರಿಸಿತ್ತು. ಆದರೆ ತಾನೇ ಕೈಗೊಂಡ ನಿರ್ಣಯ ಪಾಲನೆ ಮಾಡುವಲ್ಲಿ ಆಡಳಿತ ವಿಫಲವಾಗಿತ್ತು.
ಕಳೆದೊಂದು ವರ್ಷದಿಂದ ನಗರದಲ್ಲಿ ಫ್ಲ್ಲೆಕ್ಸ್-ಬಂಟಿಂಗ್ಸ್ ಭರಾಟೆ ಮಿತಿಮೀರಿತ್ತು. ಇದಕ್ಕೆ ಕಡಿವಾಣ ಹಾಕಲು ಪಾಲಿಕೆಯ ನೂತನ ಆಯುಕ್ತ ಮುಲ್ಲೈ ಮುಯಿಲನ್ ಮುಂದಾಗಿದ್ದಾರೆ. ಮಂಗಳವಾರದಿಂದ ಫ್ಲ್ಲೆಕ್ಸ್ ತೆರವು ಕಾರ್ಯಾಚರಣೆಗೆ ಚಾಲನೆ ನೀಡಿದ್ದು, ನಗರದ ವಿವಿಧೆಡೆ ನೂರಾರು ಫ್ಲೆಕ್ಸ್-ಬಂಟಿಂಗ್ಸ್ಗಳನ್ನು ಪಾಲಿಕೆಯ ಸಿಬ್ಬಂದಿ ತೆರವುಗೊಳಿಸಿದ್ದಾರೆ. ತಮ್ಮನ್ನು ಸಂಪರ್ಕಿಸಿದ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ‘ಕಾನೂನು-ಸುವ್ಯವಸ್ಥೆ ಸೇರಿದಂತೆ ಹಲವು ಕಾರಣಗಳ ಹಿನ್ನೆಲೆಯಲ್ಲಿ ಕೆಲ ವರ್ಷಗಳ ಹಿಂದೆಯೇ ನಗರದ ಸಾರ್ವಜನಿಕ ಸ್ಥಳಗಳಲ್ಲಿ ಫ್ಲ್ಲೆಕ್ಸ್- ಬಂಟಿಂಗ್ಸ್ ಅಳವಡಿಕೆ ಮಾಡುವುದನ್ನು ನಿರ್ಬಂಧಿಸಿ ನಿರ್ಣಯ ಅಂಗೀಕರಿಸಲಾಗಿದೆ.
ಅದರಂತೆ ನಿರ್ಣಯದ ಕಟ್ಟುನಿಟ್ಟಿನ ಅನುಷ್ಠಾನಕ್ಕೆ ತಾವು ಕ್ರಮ ಕೈಗೊಂಡಿದ್ದೆನೆ’ ಎಂದು ಸ್ಪಷ್ಟಪಡಿಸಿದ್ದಾರೆ. ‘ನಗರದ ವಿವಿಧೆಡೆ ಹಾಕಲಾಗಿದ್ದ ಫ್ಲ್ಲೆಕ್ಸ್ಗಳನ್ನು ತೆರವುಗೊಳಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೆನೆ. ಇನ್ನು ಮುಂದೆ ಸಾರ್ವಜನಿಕ ಸ್ಥಳಗಳಲ್ಲಿ ಫ್ಲೆಕ್ಸ್ ಅಳವಡಿಕೆಗೆ ಅವಕಾಶ ನೀಡುವುದಿಲ್ಲ. ನಿಯಮಾನುಸಾರ ಫ್ಲೆಕ್ಸ್ ಅಳವಡಿಕೆಗೆ ಅನುಮತಿ ನೀಡಲಾಗುವುದು. ನಿಯಮ ಉಲ್ಲಂಘಿಸುವವರ ವಿರುದ್ಧ ಕಾನೂನು ಕ್ರಮ ಜರಗಿಸಲಾಗುವುದು’ ಎಂದು ಸ್ಪಷ್ಟಪಡಿಸಿದ್ದಾರೆ.
ಕ್ರಮ: ಕೇಂದ್ರ ಸರಕಾರದ ಸ್ವಚ್ಛತಾ ರ್ಯಾಂಕಿಂಗ್ ಪಟ್ಟಿಯಲ್ಲಿ ಶಿವಮೊಗ್ಗ ಪಾಲಿಕೆಯು 147ನೆ ಸ್ಥಾನ ಪಡೆದುಕೊಂಡಿರುವ ಬಗ್ಗೆ ಅವರು ಪ್ರತಿಕ್ರಿಯಿಸಿ, ‘ನಗರದಲ್ಲಿ ಘನತ್ಯಾಜ್ಯ ವಿಲೇವಾರಿ ಹಾಗೂ ಸ್ವಚ್ಛತೆಯಲ್ಲಿ ಮತ್ತಷ್ಟು ಸುಧಾರಣೆ ತರಲು ಕ್ರಮ ಕೈಗೊಳ್ಳುತ್ತೆನೆ. ಮನೆ ಮನೆಯಿಂದ ಕಸ ಸಂಗ್ರಹಿಸುವ ವ್ಯವಸ್ಥೆ ಅನುಷ್ಠಾನದಲ್ಲಿದ್ದರೂ ಸಾರ್ವಜನಿಕ ಸ್ಥಳಗಳಲ್ಲಿ ಕಸ ಬೀಳುತ್ತಿರುವುದು ಹೇಗೆಂಬುವುದರ ಪರಿಶೀಲನೆ ಕೂಡ ಮಾಡುತ್ತಿದ್ದೇನೆ. ಘನತ್ಯಾಜ್ಯ ವಿಲೇವಾರಿ ಹಾಗೂ ಸ್ವಚ್ಛತೆಯಲ್ಲಿ ಆಮೂಲಾಗ್ರ ಬದಲಾವಣೆ ತರಲು ಕ್ರಮ ಕೈಗೊಳ್ಳುತ್ತೇನೆ’ ಎಂದರು.
ಸಭೆ ನಡೆಸಲಾಗಿದೆ: ಶಿವಮೊಗ್ಗ ಸ್ಮಾರ್ಟ್ ಸಿಟಿ ಯೋಜನೆಯ ಕಾರ್ಯಕ್ರಮಗಳ ಅನುಷ್ಠಾನಕ್ಕೆ ಪೂರ್ವಭಾವಿಯಾಗಿ ವಿಶೇಷ ವಾಹಕ ಘಟಕ(ಎಸ್.ವಿ.ಪಿ.) ರಚಿಸಲಾಗಿದೆ. ಹಾಗೆಯೇ ಕನ್ಸಲೆಂಟ್ ಸಂಸ್ಥೆಯ ನೇಮಕ ಪ್ರಕ್ರಿಯೆ ಕೂಡ ಪೂರ್ಣಗೊಂಡಿದೆ. ಟಾಟಾ ಕನ್ಸಲೆಂಟ್ ಹಾಗೂ ಮತ್ತೊಂದು ಸಂಸ್ಥೆಯು ಶಿವಮೊಗ್ಗ ಸ್ಮಾರ್ಟ್ ಸಿಟಿ ಯೋಜನೆಯ ಅನುಷ್ಠಾನದ ಸಲಹೆ-ಸೂಚನೆ ನೀಡುವುದು ಸೇರಿದಂತೆ ಸಮಗ್ರ ಮೇಲುಸ್ತುವಾರಿ ನೋಡಿಕೊಳ್ಳಲಿದೆ.
ಕನ್ಸಲೆಂಟ್ ಸಂಸ್ಥೆಗಳೊಂದಿಗೆ ಸೋಮವಾರ ‘ಕಿಕ್ ಆಫ್ ಸ್ಟಾರ್ಟ್’ ಸಭೆ ಕೂಡ ನಡೆಸಲಾಗಿದೆ ಎಂದು ತಿಳಿಸಿದ್ದಾರೆ. ಆಡಳಿತ ವ್ಯವಸ್ಥೆಯಲ್ಲಿ ಆಮೂಲಾಗ್ರ ಸುಧಾರಣೆ ತರಲಾಗುವುದು. ಇದು ಆಡಳಿತಾತ್ಮಕ ವಿಚಾರವಾಗಿದ್ದು, ಈ ಬಗ್ಗೆ ಬಹಿರಂಗವಾಗಿ ಏನನ್ನೂ ಹೇಳುವುದಿಲ್ಲ. ಅಧಿಕಾರಿಗಳು, ನೌಕರರ ಕರ್ತವ್ಯ ನಿರ್ವಹಣೆಯ ಬಗ್ಗೆ ಮಾಹಿತಿ ಪಡೆಯುತ್ತಿದ್ದೇನೆ.
-ಮುಲ್ಲೈ ಮುಯಿಲನ್,
ಪಾಲಿಕೆಯ ಆಯುಕ್ತ