ಸಾಲಬಾಧೆ: ರೈತ ಆತ್ಮಹತ್ಯೆ
ಚಿಕ್ಕಮಗಳೂರು, ಮೇ 9: ಸಾಲಬಾಧೆ ತಾಳಲಾರದೇ ರೈತನೋರ್ವ ಮನೆಯ ಬಳಿ ಮಾವಿನಮರಕ್ಕೆ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿರುವ ಕುರಿತು ಸಖರಾಯಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆತ್ಮಹತ್ಯೆ ಮಾಡಿಕೊಂಡ ರೈತನನ್ನು ಹೊನ್ನೇಗೌಡ(58) ಎಂದು ಗುರುತಿಸಲಾಗಿದೆ. ಈತ ಜಮೀನು ಅಭಿವೃದ್ಧಿಗೆ ಅಜ್ಜೇಗೌಡ ಹೆಸರಿನಲ್ಲಿ ಸಖರಾಯಪಟ್ಟಣ ಡಿಸಿಸಿ ಬ್ಯಾಂಕಿನಲ್ಲಿ 54 ಸಾವಿರ ರೂ., ಕೆನರಾ ಬ್ಯಾಂಕಿನಲ್ಲಿ ಒಡವೆ ಸಾಲದ ರೂಪದಲ್ಲಿ 35 ಸಾವಿರ ರೂ., ಸಹೋದರ ಧರ್ಮೇಗೌಡ ಹೆಸರಿನಲ್ಲಿ 1 ಲಕ್ಷ ರೂ., ಡಿಸಿ ಬ್ಯಾಂಕ್ನಲ್ಲಿ ಒಡವೆ ಸಾಲದ ರೂಪದಲ್ಲಿ 40 ಸಾವಿರ ರೂ., ಇನ್ನೋರ್ವ ಸಹೋದರ ಬೀರೇಗೌಡ ಹೆಸರಿನಲ್ಲಿ ಹೈನುಗಾರಿಕೆಗಾಗಿ ಸಖರಾಯಪಟ್ಟಣದ ಕಾವೇರಿ ಬ್ಯಾಂಕಿನಲ್ಲಿ ಹಸು ಖರೀದಿಗೆ 45 ಸಾವಿರ ರೂ. ಸಹಿತ ಒಟ್ಟು ಸುಮಾರು 2 ಲಕ್ಷ ರೂ.ಸಾಲ ಮಾಡಿಕೊಂಡಿದ್ದರು ಎಂದು ತಿಳಿದುಬಂದಿದೆ.
ಕಳೆದ 3 ವರ್ಷಗಳಿಂದ ಮಳೆ ಸಕಾಲದಲ್ಲಿ ಬಾರದೆ ಕೃಷಿ ಭೂಮಿ ಬರಡಾಗಿತ್ತು. ಬೆಳೆದ ಬೆಳೆ ಸರಿಯಾಗಿ ಬಂದಿರಲಿಲ್ಲ. ಇದರಿಂದ ಸಕಾಲದಲ್ಲಿ ಸಾಲ ಮರುಪಾವತಿಗೆ ಸಾಧ್ಯವಾಗದೇ ಜೀವನದಲ್ಲಿ ಜಿಗುಪ್ಸೆಗೊಂಡು ಮನೆಯ ಪಕ್ಕದ ಮಾವಿನಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮೃತನ ಸಹೋದರ ಧರ್ಮೇಗೌಡ ಸಖರಾಯಪಟ್ಟಣದ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.