ಹುಕ್ಕಾ ಬಾರ್ ಮೇಲೆ ದಾಳಿ : ನಟ ಅರುಣ್‌ಗೌಡ ಸೇರಿ ಏಳು ಜನ ವಶಕ್ಕೆ

Update: 2017-05-09 17:21 GMT

ಬೆಂಗಳೂರು, ಮೇ 9: ಕಾನೂನು ಬಾಹಿರವಾಗಿ ಹುಕ್ಕಾ ಬಾರ್ ನಡೆಸುತ್ತಿದ್ದ ಆರೋಪದ ಮೇಲೆ ಹುಕ್ಕಾ ಬಾರ್ ಮಾಲಕ ಎನ್ನಲಾದ ಕನ್ನಡ ಚಿತ್ರರಂಗದ ಹೊಸ ನಾಯಕ ನಟ ಅರುಣ್‌ಗೌಡ ಸೇರಿ ಏಳು ಜನರನ್ನು ವಶಕ್ಕೆ ಪಡೆದಿರುವುದಾಗಿ ಸಿಸಿಬಿ ಪತ್ರಿಕಾ ಪ್ರಕಟನೆ ತಿಳಿಸಿದೆ.

 ಬಂಧಿತ ಆರೋಪಿಗಳನ್ನು ಮುದ್ದು ಮನಸೆ ಚಿತ್ರದ ನಾಯಕ ನಟ ಎನ್ನಲಾದ ಅರುಣ್‌ಗೌಡ, ಈತನ ಸಹಚರರಾದ ಸಂಗಪ್ಪ, ಮಂಜುನಾಥ್ ಹೋಡಲ್, ಮಹೇಶ್‌ಬಾಬು, ವೀರಶೆಟ್ಟಿ, ಮುನೀಶ್ ಹಾಗೂ ವಿಕೇಶ್ ಎಂದು ಸಿಸಿಬಿ ತಿಳಿಸಿದೆ.

ನಗರದ ಚಂದ್ರಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯ 1ನೆ ಮುಖ್ಯರಸ್ತೆಯ ಎಚ್‌ಪಿ ಪೆಟ್ರೋಲ್ ಬಂಕ್ ಬಳಿಯ ಚಾರ್ಕೊಲೆ ಕೆಫೆನಲ್ಲಿ ಕಾನೂನು ಬಾಹಿರವಾಗಿ ಹುಕ್ಕಾ ಬಾರ್ ನಡೆಸಲಾಗುತ್ತಿದೆ ಎನ್ನುವ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಸಿಸಿಬಿ ಪೊಲೀಸರು ದಾಳಿ ನಡೆಸಿ ಏಳು ಜನರನ್ನು ಬಂಧಿಸಿದ್ದಾರೆ.

ಪ್ರಕರಣ ಸಂಬಂಧ ಹುಕ್ಕಾ ಸೇದಲು ನೀಡಿದ್ದ ಪರಿಕರಗಳನ್ನು ವಶಕ್ಕೆ ಪಡೆದು, ಇಲ್ಲಿನ ಚಂದ್ರಲೇಔಟ್ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಿಸಿ ತನಿಖೆ ಮುಂದುವರೆಸಲಾಗಿದೆ ಎಂದು ಸಿಸಿಬಿ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News