ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ನೂತನ ಪ್ರಯೋಗಶಾಲೆ
ದಾವಣಗೆರೆ, ಮೇ 13: ಪರಿಸರ ಕಾಪಾಡುವ ನಿಟ್ಟಿನಲ್ಲಿ ಕಾರ್ಖಾನೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಪೂರಕ ವ್ಯವಸ್ಥೆ ಅತಿ ಮುಖ್ಯವಾಗಿದ್ದು, ದಾವಣಗೆರೆಯಲ್ಲಿ 5.33 ಕೋಟಿ ರೂ. ವೆಚ್ಚದಲ್ಲಿ ನೂತನ ಪ್ರಯೋಗಶಾಲೆಯನ್ನು ನಿರ್ಮಿಸಲಾಗುತ್ತಿದೆ ಎಂದು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಲಕ್ಷ್ಮಣ್ ಹೇಳಿದರು.
ನಗರದ ದೇವರಾಜ ಅರಸ್ ಬಡಾವಣೆಯಲ್ಲಿರುವ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಪ್ರಾದೇಶಿಕ ಕಚೇರಿಯಲ್ಲಿ ಏರ್ಪಡಿಸಲಾಗಿದ್ದ ನೂತನ ಪ್ರಯೋಗ ಶಾಲೆ ಕಟ್ಟಡದ ಶಂಕುಸ್ಥಾಪನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಜಿಲ್ಲೆಯಲ್ಲಿ ಅನೇಕ ಕಾರ್ಖಾನೆಗಳಿದ್ದು, ಅವುಗಳು ಪರಿಸರ ಕಾಪಾಡುವ ನಿಟ್ಟಿನಲ್ಲಿ ನಿಬಂಧನೆಗಳನ್ನು ಸಮರ್ಪಕವಾಗಿ ಪಾಲಿಸುತ್ತಿದ್ದಾವೋ ಇಲ್ಲವೋ ಎಂದು ಪರಿವೀಕ್ಷಿಸಲು ಪ್ರಯೋಗಾಲಯ ಅತ್ಯವಶ್ಯವಾಗಿದೆ. ಮಂಡಳಿಗೆ ಸುಪ್ರೀಂ ಕೋರ್ಟ್ನಿಂದ ಅನೇಕ ನಿರ್ದೇಶನಗಳು ಬಂದಿದ್ದು ಅದರಂತೆ ಎಲ್ಲ ಕಾರ್ಖಾನೆಗಳು ಮೂರು ತಿಂಗಳ ಒಳಗೆ ಪ್ರಿಲಿಮಿನರಿ ಟ್ರೀಟ್ಮೆಂಟ್ ಪ್ಲಾಂಟ್ ಅಳವಡಿಸಬೇಕು. ಈ ನಿರ್ದೇಶನ ಪಾಲಿಸದ ಕೈಗಾರಿಕೆಗಳ ವಿರುದ್ಧ ಕ್ರಿಮಿನಲ್ ಕೇಸ್ ಸೇರಿದಂತೆ ಕಠಿಣ ಕ್ರಮ ಕೈಗೊಳ್ಳಲು ನಿರ್ದೇಶನ ನೀಡಲಾಗಿದೆ. ಕೆರೆ-ನಾಲೆಗಳ ಸಂರಕ್ಷಣೆ ನಮ್ಮ ಕರ್ತವ್ಯವಾಗಿದ್ದು ಈ ಕುರಿತು ದೆಹಲಿ ಕ್ರಿಮಿನಲ್ ಬ್ರಾಂಚ್ ಇಂದ ಕೂಡ ಕಠಿಣ ಕ್ರಮ ಕೈಗೊಳ್ಳಲು ನಿರ್ದೇಶನ ನೀಡಲಾಗಿದೆ.
ಈಗಾಗಲೇ 500 ಕೈಗಾರಿಕೆಗಳನ್ನು ಸ್ಥಗಿತಗೊಳಿಸಲು ನಿರ್ದೇಶನ ಬಂದಿದ್ದು ಅದು ಪ್ರಗತಿಯಲ್ಲಿದೆ. ರಾಜ್ಯದ ಆರ್ಥಿಕ ಬೆಳವಣಿಗೆಗೆ ಕೈಗಾರಿಕೀಕರಣ ಮತ್ತು ನಗರೀಕರಣ ಅಗತ್ಯವಾದರೂ ಅದು ಪರಿಸರದ ವಿರುದ್ಧವಾಗಿರಬಾರದು. ಪರಿಸರವನ್ನು ನಾವೇ ಹಾಳು ಮಾಡುತ್ತಿದ್ದು, ಕಠಿಣ ಕ್ರಮ ಜರುಗಿಸುವುದು ಮಂಡಳಿಗೆ ಅನಿವಾರ್ಯವಾಗಿದೆ ಎಂದು ಹೇಳಿದರು.
ನಗರ ಪಾಲಿಕೆ ತ್ಯಾಜ್ಯ ವಸ್ತು ನಿರ್ವಹಣೆ ದೊಡ್ಡ ಜವಾಬ್ದಾರಿಯಾಗಿದ್ದು, ಸಾರ್ವಜನಿಕರು ತಮ್ಮ ಮನೆಯಿಂದಲೇ ತ್ಯಾಜ್ಯಗಳನ್ನು ವಿಂಗಡಣೆ ಮಾಡಿ ಕೊಡಬೇಕು. ಆಗ ಪರಿಸ್ಥಿತಿ ಸುಧಾರಿಸುತ್ತದೆ. ವೈಜ್ಞಾನಿಕ ಕಸ ವಿಲೇವಾರಿಗೆ ಅವಕಾಶವಿದ್ದು, ಹಣ, ತಂತ್ರಜ್ಞಾನ ಮತ್ತು ಉತ್ತಮವಾಗಿ ಕರ್ತವ್ಯ ನಿರ್ವಹಿಸಬೇಕೆಂಬ ಇಚ್ಛಾಶಕ್ತಿಯಿಂದ ಇದನ್ನು ಸಾಕಾರಗೊಳಿಸಬಹುದು.
ಮಂಡಳಿ ವತಿಯಿಂದ ರಾಜ್ಯದ ಎಲ್ಲ ಜಿಲ್ಲೆಗಳ ಕೇಂದ್ರ ಸ್ಥಾನದಲ್ಲಿ ವಾಯು ಮಾಲಿನ್ಯ ನಿಯಂತ್ರಣಕ್ಕೆ ತಲಾ 1.35 ಕೋಟಿ ರೂ. ವೆಚ್ಚದಲ್ಲಿ ವಾಯು ಕೇಂದ್ರ (ಏರ್ ಸ್ಟೇಷನ್) ಸ್ಥಾಪಿಸಲಾಗುವುದು. ಈಗಾಗಲೇ ಗುಲ್ಬರ್ಗ, ಮಂಗಳೂರು ಮತ್ತು ಹುಬ್ಬಳ್ಳಿ-ಧಾರವಾಡ ಜಿಲ್ಲಾ ಕೇಂದ್ರಗಳು ಹಾಗೂ ಬೆಂಗಳೂರಿನಲ್ಲಿ 5 ಸ್ಟೇಷನ್ಗಳನ್ನು ಸ್ಥಾಪಿಸಲಾಗಿದೆ. ಈ ಸ್ಟೇಷನ್ಗಳ ಸಂಖ್ಯೆ ಹೆಚ್ಚಾದಷ್ಟು ವಾಯು ಮಾಲಿನ್ಯ ತಡೆಗಟ್ಟುವಲ್ಲಿ ಸಹಕಾರಿಯಾಗುತ್ತದೆ. ಒಟ್ಟಾರೆ ಪರಿಸರ ಕಾಪಾಡುವ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲ ಪ್ರಯೋಗ ಶಾಲೆಗಳನ್ನು ಬಲಪಡಿಸಬೇಕಿದೆ. ಪ್ರತಿ ಜಿಲ್ಲೆಯಲ್ಲಿ ಸುಸಜ್ಜಿತ ಪ್ರಯೋಗಶಾಲೆ ನಿರ್ಮಿಸಿದಲ್ಲಿ ಕೈಗಾರಿಕೆಗಳ ಮಾನದಂಡಗಳನ್ನು ಪರಿವೀಕ್ಷಿಸಿ ಕಠಿಣ ಕ್ರಮ ಕೈಗೊಳ್ಳಲು ಅವಕಾಶ ಸಿಗುತ್ತದೆ ಎಂದ ಅವರು ಇನ್ನು 10-12 ತಿಂಗಳಲ್ಲಿ ಕಟ್ಟಡ ನಿರ್ಮಾಣ ಪೂರ್ಣಗೊಳ್ಳಲಿದ್ದು, ಆದಷ್ಟು ಬೇಗ ಕಾರ್ಯಾರಂಭ ಮಾಡಲಿ ಎಂದು ಆಶಿಸಿದರು.
ಮಹಾನಗರ ಪಾಲಿಕೆ ಮಹಾಪೌರರಾದ ಅನಿತಾಭಾಯಿ ಮಾತನಾಡಿದರು.
ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಸದಸ್ಯರಾದ ಎಂ ವೆಂಕಟರಾಮ ಮಾತನಾಡಿ, ಪರಿಸರ ಮಾಲಿನ್ಯಕ್ಕೆ ನಾವೇ ಕಾರಣಕರ್ತರು. ಹಿಂದೆಲ್ಲ ಗ್ರಾಮ ಮಟ್ಟದಲ್ಲೇ ಮಾಲಿನ್ಯದ ವಿರುದ್ಧ ಕ್ರಮ ಜರುಗಿಸಲಾಗುತ್ತಿತ್ತು. ಈಗ ಎಲ್ಲೆ ಮೀರಿ ಪರಿಸರ ನಾಶಕ್ಕೆ ಕಾರಣರಾಗುತ್ತಿದ್ದೇವೆ. ಆದ್ದರಿಂದ ಇದರ ವಿರುದ್ಧ ಕಾನೂನು ರೂಪಿಸುವುದು ಅನಿವಾರ್ಯವಾಗಿದ್ದು, ನಿಯಮಗಳನ್ನು ಪಾಲಿಸಿ ಪ್ರಕೃತಿ ಉಳಿಸಬೇಕಿದೆ ಎಂದು ಕರೆ ನೀಡಿದರು.
ಕ ರಾ ಮಾ ನಿ ಮಂಡಳಿಯ ಚಿತ್ರದುರ್ಗ ವಿಭಾಗೀಯ ಕಚೇರಿಯ ಹಿರಿಯ ಪರಿಸರ ಅಧಿಕಾರಿ ಎಂ ಕೆ ಪ್ರುದೇವ , ದಾವಣಗೆರೆಯ ಕ.ರಾ.ಮಾ.ನಿ.ಮಂಡಳಿ ಪರಿಸರ ಅಧಿಕಾರಿ ಕೆ ಎಸ್ ಮಂಜುನಾಥ್ ಸ್ವಾಗತಿಸಿದರು.
ಮಹಾನಗರ ಪಾಲಿಕೆ ಸದಸ್ಯೆ ಗೌರಮ್ಮ ಚಂದ್ರಪ್ಪ, ಮಂಡಳಿಯ ಸದಸ್ಯರಾದ ಡಾ. ಮಂಜಪ್ಪ, ರುದ್ರೇಶ್, ಸಿ ಡಿ ಕುಮಾರ್, ಎ ರಮೇಶ್, ಹರಿಶಂಕರ್, ಮಹೇಶ್ವರಪ್ಪ ಮತ್ತಿತರರು ಹಾಜರಿದ್ದರು.