×
Ad

ಕೇಂದ್ರ ಸಹಕರಿಸಿದರೆ ಸಾಲ ಮನ್ನಾ: ಮುಖ್ಯಮಂತ್ರಿ ಸಿದ್ದರಾಮಯ್ಯ

Update: 2017-05-13 19:14 IST

ಚಿತ್ರದುರ್ಗ, ಮೇ 13: ರಾಜ್ಯದ ರೈತರ ಸಾಲ 52 ಸಾವಿರ ಕೋಟಿ ರೂ.ಗಳಷ್ಟಿದ್ದು, ಆ ಪೈಕಿ 42 ಸಾವಿರ ಕೋಟಿ ರೂ.ಗಳಷ್ಟು ಸಾಲ ಕೇಂದ್ರ ಸರಕಾರದ ಸ್ವಾಮ್ಯದ ಬ್ಯಾಂಕುಗಳದ್ದು. ಕೇಂದ್ರ ಸರಕಾರ ಸಹಕರಿಸಿದಲ್ಲಿ ರೈತರ ಸಾಲಮನ್ನಾ ಮಾಡಲು ಸಿದ್ಧ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದಾರೆ.
ರವಿವಾರ ಇಲ್ಲಿನ ವಿಜ್ಞಾನ ಕಾಲೇಜು ಮೈದಾನದಲ್ಲಿ ಏರ್ಪಡಿಸಿದ್ದ ಸೌಲಭ್ಯ ವಿತರಣೆಯೆ ಸಂಭ್ರಮ- ಜನರಿಗೆ ಮನನ-ಜನರಿಗೆ ನಮನ ಎಂಬ ಸಮಾವೇಶನದಲ್ಲಿ ಬೆಂಗಳೂರು ವಿಭಾಗದ 9 ಜಿಲ್ಲೆಗಳ ಫಲಾನುಭವಿಗಳಿಗೆ ಸೌಲಭ್ಯ ವಿತರಣೆ ಮಾಡಿ ಅವರು ಮಾತನಾಡುತ್ತಿದ್ದರು.

ಕೇಂದ್ರ ಸರಕಾರ ವಾಣಿಜ್ಯ ಬ್ಯಾಂಕುಗಳಲ್ಲಿನ ರೈತರ ಸಾಲವನ್ನು ಮನ್ನಾ ಮಾಡಿದಲ್ಲಿ ಸಹಕಾರಿ ಬ್ಯಾಂಕುಗಳಲ್ಲಿನ ಸಾಲಮನ್ನಾ ಮಾಡಲು ರಾಜ್ಯ ಸರಕಾರ ಸಿದ್ಧವಿದೆ ಎಂದ ಅವರು, ಬರಗಾಲವನ್ನು ಅತ್ಯಂತ ದಕ್ಷವಾಗಿ ನಿರ್ವಹಿಸಿದೆ. ಉದ್ಯೋಗ, ಕುಡಿಯುವ ನೀರು, ದನಗಳಿಗೆ ಮೇವು ಒದಗಿಸಲು ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ. ಭೀಕರ ಬರಗಾಲದಲ್ಲಿಯೂ ಜನರು ಗುಳೆ ಹೋಗುವುದನ್ನು ತಪ್ಪಿಸಲು ಅನ್ನಭಾಗ್ಯ ಯೋಜನೆ ಕಾರಣ ಎಂದು ನುಡಿದರು.

ಜಿಲ್ಲೆಗೆ ನೀರು: ಚಿತ್ರದುರ್ಗದಲ್ಲಿ ಅತ್ಯಂತ ಭೀಕರ ಬರಗಾಲವಿದೆ. ಈ ವರ್ಷದ ಡಿಸೆಂಬರ್ ಒಳಗೆ ಭದ್ರಾ ಮೇಲ್ದಂಡೆ ಯೋಜನೆ ಪೂರ್ಣಗೊಳಿಸಿ, ಜಿಲ್ಲೆಗೆ ನೀರು ಕೊಡುತ್ತೇವೆ. ಇದಕ್ಕಾಗಿ ಆಯವ್ಯಯದಲ್ಲಿ ಸಾವಿರ ಕೋಟಿ ರೂ. ಮೀಸಲಿರಿಸಲಾಗಿದೆ. ಅಂತೆಯೇ ಎತ್ತಿನಹೊಳೆ ಮೂಲಕ ಶಾಶ್ವತ ಕುಡಿಯುವ ನೀರಿನ ಯೋಜನೆ ಜಾರಿಗೊಳಿಸುವುದು ಆದ್ಯ ಕರ್ತವ್ಯ ಎಂದು ಹೇಳಿದರು.

ನಾಲ್ಕು ವರ್ಷಗಳಲ್ಲಿ 11ಲಕ್ಷ ಮನೆ ನಿರ್ಮಿಸಿದ್ದೇವೆ. ಇನ್ನೊಂದು ವರ್ಷದಲ್ಲಿ 10 ಲಕ್ಷ ಮನೆ ಕಟ್ಟುತ್ತೇವೆ. ಕೌಶಲ್ಯ ಅಭಿವೃದ್ಧಿ ಮೂಲಕ 5ಲಕ್ಷ ಯುವಕರಿಗೆ ಉದ್ಯೋಗ ತರಬೇತಿ ನೀಡಲು ಉದ್ದೇಶಿಸಲಾಗಿದೆ ಎಂದು ಸಿದ್ಧರಾವುಯ್ಯ ಇದೇ ವೇಳೆ ಮಾಹಿತಿ ನೀಡಿದರು.

ತೋಟಗಾರಿಕಾ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಮಾತನಾಡಿ, ಜನತೆಗೆ ನೀಡಿದ ಪ್ರತಿ ಆಶ್ವಾಸನೆಯನ್ನು ಈಡೇರಿಸಿದ ಸರಕಾರ ನಮ್ಮದು. ಬರಗಾಲದಲ್ಲಿ ಜನ ಗುಳೆ ಹೋಗದಂತೆ ತಡೆಯುವಲ್ಲಿ ಅನ್ನಭಾಗ್ಯ ಪ್ರಮುಖ ಪಾತ್ರ ವಹಿಸಿದೆ. ನಮ್ಮ ಸರಕಾರದ ಯೋಜನೆಗಳು ಎಲ್ಲ ಜಾತಿ, ವರ್ಗಗಳ ಪರವಾಗಿವೆ ಎಂದರು.

ಕಾನೂನು ಸಚಿವ ಟಿ.ಬಿ.ಜಯಚಂದ್ರ ಮಾತನಾಡಿ, ಇಂದು 29 ಸಾವಿರ ಜನರಿಗೆ ಸೌಲಭ್ಯ ವಿತರಣೆ ಮಾಡಲಾಗಿದ್ದು, ಇದೊಂದು ಬೃಹತ್ ಕಾರ್ಯಕ್ರಮ. ಸಿದ್ದರಾಮಯ್ಯ ನೇತೃತ್ವದ ಸರಕಾರದ ಅವಧಿಯಲ್ಲಿ ಭದ್ರಾ ಮೇಲ್ದಂಡೆ ಮತ್ತು ಎತ್ತಿನಹೊಳೆ ಯೋಜನೆಗಳಿಗೆ ಹೆಚ್ಚಿನ ವೇಗ ದೊರೆತಿದೆ ಎಂದರು.
ಇಂಧನ ಸಚಿವ ಡಿ.ಕೆ.ಶಿವಕುಮಾರ್ ಮಾತನಾಡಿ, ಪಕ್ಷಕ್ಕೆ ಅಧಿಕಾರ ನೀಡಿದ್ದಕ್ಕಾಗಿ ನಾಡಿನ ಜನತೆಗೆ ಕತಜ್ಞತೆ ಅರ್ಪಿಸಿದರು. ಸಮಾಜದ ಋಣವನ್ನು ಧರ್ಮದಿಂದ ತೀರಿಸಬೇಕು. ನುಡಿದಂತೆ ನಡೆದ ಸರಕಾರ ನಮ್ಮದು. ಈ ಕಾರ್ಯಕ್ರಮಗಳು ಸರ್ವ ಜಾತಿಗಳ ಬಡವರಿಗಾಗಿ ಅಭಿವೃದ್ಧಿ ಎಂದರೆ ಎಲ್ಲ ವರ್ಗಗಳ ಅಭಿವೃದ್ಧಿ ಎಂದು ಬಣ್ಣಿಸಿದರು.

ಕೇಂದ್ರ ಸರಕಾರವೇ ನಮ್ಮ ರಾಜ್ಯದಲ್ಲಿ ಬಂಡವಾಳ ಹೂಡಲು ವಿಶ್ವದಾದ್ಯಂತ ಹೂಡಿಕೆದಾರರನ್ನು ಆಹ್ವಾನಿಸುತ್ತಿದೆ. ನಮ್ಮ ಸರಕಾರದ ಅಭಿವೃದ್ಧಿಯನ್ನು ಪಕ್ಷಭೇದ ಮರೆತು ಹೊಗಳಲಾಗುತ್ತಿದೆ ಎಂದ ಅವರು, ನಾಲ್ಕು ವರ್ಷಗಳಲ್ಲಿ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ 1ಲಕ್ಷಕ್ಕೂ ಹೆಚ್ಚು ಹುದ್ದೆಗಳನ್ನು ಭರ್ತಿ ಮಾಡಲಾಗಿದೆ. ಬಡವರಿಗೆ ಭೂಮಿ ಹಂಚಿದ ಹೆಗ್ಗಳಿಕೆ ನಮ್ಮ ಸರಕಾರದ್ದು ಎಂದರು.

ಆರಂಭದಲ್ಲಿ ಮೈಸೂರಿನ ನೂರಾರು ಪೌರ ಕಾರ್ಮಿಕರು ಚರ್ಮವಾದ್ಯಗಳನ್ನು ಬಾರಿಸಿ, ಮುಖ್ಯಮಂತ್ರಿ ಸಿದ್ಧರಾಮಯ್ಯರಿಗೆ ಶುಭಕೋರಿದರು. ಸಚಿವರಾದ ಎಚ್. ಆಂಜನೇಯ, ಡಾ.ಜಿ.ಪರಮೇಶ್ವರ್, ಉಮಾಶ್ರೀ, ಎಂ. ಆರ್.ಸೀತಾರಾಂ, ರುದ್ರಪ್ಪ ಲಮಾಣಿ, ಸಂಸದರಾದ ಕೆ.ಎಚ್. ಮುನಿಯಪ್ಪ, ಎಂ.ಚಂದ್ರಪ್ಪ, ವಾರ್ತಾ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಎಂ. ಲಕ್ಷ್ಮಿ ನಾರಾಯಣ, ವಾರ್ತಾ ಇಲಾಖೆ ನಿರ್ದೇಶಕ ಎನ್.ಆರ್.ವಿಶುಕುಮಾರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.


‘ಚಿತ್ರದುರ್ಗದಲ್ಲಿ ವೈದ್ಯಕೀಯ ಕಾಲೇಜು, ಕೆಎಸ್‌ಆರ್‌ಟಿಸಿ ಭಾಗೀಯ ಕಚೇರಿ ಘೋಷಣೆ ಸೇರಿದಂತೆ ಜಿಲ್ಲೆಯ 695 ಕೋಟಿ ರೂ.ವೆಚ್ಚದ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿದರು. ಅಲ್ಲದೆ, 90 ಕೋಟಿ ರೂ.ವೆಚ್ಚದ ವಿವಿಧ ಕಾಮಗಾರಿಗಳನ್ನು ಮುಖ್ಯಮಂತ್ರಿ ಸಿದ್ಧರಾಮಯ್ಯ ಉದ್ಘಾಟನೆ ನೆರವೇರಿಸಿದರು’ ನಾಲ್ಕು ವರ್ಷಗಳಲ್ಲಿ ಹಗರಣ ಮುಕ್ತ ಸರಕಾರ ನಮ್ಮದು. ಪ್ರಜಾಪ್ರಭುತ್ವದ ದೊರೆಗಳು ಜನರು.

ನಿಮಗೆ ಲೆಕ್ಕ ಒಪ್ಪಿಸುವುದು ನಮ್ಮ ಜವಾಬ್ದಾರಿ ಎಂದ ಸಿದ್ಧರಾಮಯ್ಯ, ಸಮ ಸಮಾಜದ ಕಲ್ಪನೆಯಲ್ಲಿ ನಂಬಿಕೆ ಇರುವ ಸರಕಾರ ನಮ್ಮದು. ಎಲ್ಲರಿಗೂ ಸಾಮಾಜಿಕ ನ್ಯಾಯ ನೀಡುವುದು ನಮ್ಮ ಜವಾಬ್ದಾರಿ.
-ಸಿದ್ದರಾಮಯ್ಯ, ಮುಖ್ಯಮಂತ್ರಿ

ಸಿದ್ದರಾಮಯ್ಯ ಮತ್ತು ಅವರ ಸರಕಾರಕ್ಕೆ ಜನರು ತೋರಿಸುತ್ತಿರುವ ಪ್ರೀತಿಗೆ ನಾವು ಚಿರಋಣಿ. ಅಂದು ‘ಉಳುವವನೇ ಭೂಮಿಯ ಒಡೆಯ, ಇಂದು ಇರುವವನೆ ಮನೆಯ ಒಡೆಯ’ದಂತಹ ಯೋಜನೆಗಳ ಮೂಲಕ ಸರ್ವರಿಗೂ ಸೂರು ಒದಗಿಸುವುದು ನಮ್ಮ ಉದ್ದೇಶ.
-ಕಾಗೋಡು ತಿಮ್ಮಪ್ಪಕಂದಾಯ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News