ವೃಂದ ಮತ್ತು ನೇಮಕಾತಿ ಅಧಿಸೂಚನೆಗೆ ಒತ್ತಾಯಿಸಿ ಪಶುವೈದ್ಯರ ಧರಣಿ
ತುಮಕೂರು, ಮೇ 16: ವೃಂದ ಮತ್ತು ನೇಮಕಾತಿ ನಿಯಮಗಳ ಅಂತಿಮ ಅಧಿಸೂಚನೆ ಹೊರಡಿಸುವಂತೆ ಆಗ್ರಹಿಸಿ ಕರ್ನಾಟಕ ಪಶುವೈದ್ಯಕೀಯ ಸಂಘ, ಕರ್ನಾಟಕ ರಾಜ್ಯ ಪಶುವೈದ್ಯಕೀಯ ಪರಿವೀಕ್ಷಕರ ಸಂಘ ಹಾಗೂ ಕರ್ನಾಟಕ ರಾಜ್ಯ ಪಶುವೈದ್ಯಕೀಯ ಸಹಾಯಕರ ಸಂಘ ಪದಾಧಿಕಾರಿಗಳು ಇಂದು ಜಿಲ್ಲಾಧಿಕಾರಿಗಳ ಕಚೇರಿ ಎದುರು ಕೆಲಸ ಸ್ಥಗಿತಗೊಳಿಸಿ ಅನಿರ್ಷ್ಠಾವಧಿ ಮುಷ್ಕರ ಆರಂಭಿಸಿದ್ದಾರೆ.
ಕರ್ನಾಟಕ ಸರಕಾರವೂ 2012ರಲ್ಲಿ ಕರ್ನಾಟಕ ಪಶುಪಾಲನೆ ಮತ್ತು ಪಶುವೈದ್ಯಕೀಯ ಇಲಾಖೆಯ ಪುನರ್ ರಚನೆಗೆ ಸಂಬಂಧಿಸಿದಂತೆ ಹೊರಡಿಸಿದ ಆದೇಶದಂತೆ 2012ರ ಡಿಸೆಂಬರ್ 31ರಂದು ಗೆಜೆಟೆಡ್ ನೋಟಿಪಿಕೇಷನ್ ಹೊರಡಿಸ ಲಾಗಿತ್ತು. ಅದರಂತೆ ಇಲಾಖೆಯ ವೃಂದ ಮತ್ತು ನೇಮಕಾತಿ ನಿಯಮಗಳಿಗೆ ತಿದ್ದುಪಡಿ ತರಲು ಉನ್ನತ ಮಟ್ಟದ ಸಮಿತಿ ಯೊಂದನ್ನು ನೇಮಕಗೊಂಡಿದ್ದು, ಸಮಿತಿ ನೀಡಿದ ವರದಿಗೆ ಎಪ್ರಿಲ್ 2016 ರಲ್ಲಿ ಸಚಿವ ಸಂಪುಟದ ಒಪ್ಪಿಗೆ ದೊರೆತ್ತಿದ್ದರೂ ಇದುವರೆಗೂ ವೃಂದ ಮತ್ತು ನೇಮಕಾತಿ ಅಂತಿಮ ಅಧಿಸೂಚನೆ ಹೊರಡಿಸಿರುವುದಿಲ್ಲ. ಇದರಿಂದ ಕಳೆದ ಐದು ವರ್ಷಗಳಿಂದ ಇಲಾಖೆಯಲ್ಲಿ ಕೆಲಸ ಮಾಡುತ್ತಿರುವ ನೌಕರರು ಬಡ್ತಿ ವಚಿತರಾಗಿದ್ದಾರೆ. ಅಲ್ಲದೆ ಇಲಾಖೆಯ ಪುನರ್ ರಚನೆ ಕಾಲದಲ್ಲಿ ರದ್ದಾದ ಹುದ್ದೆಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸಿಬ್ಬಂದಿಗಳನ್ನು ಕಡ್ಡಾಯ ನಿರೀಕ್ಷಣಾವಧಿ ಯಲ್ಲಿರುವ ಕಾರಣ ಐದಾರು ತಿಂಗಳು ವೇತನವಿಲ್ಲದೆ ದುಡಿಯಬೇಕಾದ ಪರಿಸ್ಥಿತಿ ಎದುರಾಗಿದೆ. ಆದ್ದರಿಂದ ಕೂಡಲೇ ಸರಕಾರ ಪಶು ವೈದ್ಯಕೀಯ ಇಲಾಖೆಯ ವೃಂದ ಮತ್ತು ನೇಮಕಾತಿ ನಿಯಮಗಳ ಅಧಿಸೂಚನೆ ಹೊರಡಿಸಬೇಕೆಂಬುದು ಆಗ್ರಹವಾಗಿದೆ ಎಂದು ಧರಣಿ ನಿರತರು ತಿಳಿಸಿದರು.
ಈ ಸಂದರ್ಭ ಕರ್ನಾಟಕ ಪಶುವೈದ್ಯಕೀಯ ಸಂಘದ ಪದಾಧಿಕಾರಿಗಳಾದ ಡಾ.ವಿ.ಸಿ.ರುದ್ರಪ್ರಸಾದ್, ಪ್ರಧಾನ ಕಾರ್ಯದರ್ಶಿ ಡಾ.ದಿವಾಕರ್,ಎ.ಸಿ, ಜಂಟಿ ಕಾರ್ಯದರ್ಶಿ ಡಾ.ಬಿ.ಆರ್.ನಂಜೇಗೌಡ, ಖಜಾಂಚಿ ಡಾ.ಆರ್.ಎಂ.ನಾಗಭೂಷಣ್, ಕರ್ನಾಟಕ ರಾಜ್ಯ ಪಶುವೈದ್ಯಕೀಯ ಪರಿವೀಕ್ಷಕರ ಸಂಘದ ಅಧ್ಯಕ್ಷ ನಟರಾಜು, ಕಾರ್ಯದರ್ಶಿ ನಾಗರಾಜು, ಪಶುವೈದ್ಯಕೀಯ ಸಹಾಯಕರ ಸಂಘದ ಪದಾಧಿಕಾರಿಗಳು ಹಾಗೂ ಸಿಬ್ಬಂದಿ ಪಾಲ್ಗೊಂಡಿದ್ದರು. ಈ ಸಂಬಂಧ ಮನವಿ ಪತ್ರವನ್ನು ಜಿಲ್ಲಾಧಿಕಾರಿಗಳ ಸಲ್ಲಿಸಿದರು.