×
Ad

ಗ್ರಾಮಸ್ಥರಿಂದ ಲಾರಿ ತಡೆದು ಪ್ರತಿಭಟನೆ

Update: 2017-05-18 23:02 IST

ಮೂಡಿಗೆರೆ, ಮೇ 18: ಹೇಮಾವತಿ ನದಿಯ ಮರಳು ಗಣಿಗಾರಿಕೆ ಪ್ರದೇಶದಲ್ಲಿ ಕಾನೂನು ಬಾಹಿರವಾಗಿ ಜೆಸಿಬಿ ಯಂತ್ರ ಬಳಸಿ ಅಕ್ರಮ ಮರಳು ತೆಗೆಯುತ್ತಿರುವುದರಿಂದ ರೈತರಿಗೆ ತೀವ್ರ ತೊಂದರೆಯಾಗಿದೆ ಎಂದು ಆರೋಪಿಸಿ, ಉದುಸೆ ಗ್ರಾಮಸ್ಥರು ಸುಮಾರು 110 ಲಾರಿಗಳನ್ನು ಮಾರ್ಗ ಮಧ್ಯೆ ಅಡ್ಡಗಟ್ಟಿ ಗುರುವಾರ ಪ್ರತಿಭಟಿಸಿದರು.


ಗೋಣಿಬೀಡು ಹೋಬಳಿ ಉದುಸೆ ಗ್ರಾಮದ ಹೇಮಾವತಿ ನದಿ ಪ್ರದೇಶದ ಸ.ನಂ. 171, 172, 173ರಲ್ಲಿ 3.30 ಎಕರೆ ಜಾಗದಲ್ಲಿ ಮರಳು ತೆಗೆದು ಸಾಗಿಸಲು ಮೈಸೂರು ಮೂಲದ ಇಬ್ಬರು ಗುತ್ತಿಗೆದಾರರಿಗೆ ಜಿಲ್ಲಾಡಳಿತ ಪರವಾನಿಗೆ ನೀಡಲಾಗಿದೆ. ಆದರೆ ಈ ಗುತ್ತಿಗೆದಾರರು ಸ.ನಂ.170, 174ರಲ್ಲಿ 14 ಎಕರೆ ಪ್ರದೇಶಗಳಲ್ಲಿ ಅಕ್ರಮವಾಗಿ ಮರಳನ್ನು ತೆಗೆಯುವ ಮೂಲಕ ನದಿ ಪಾತ್ರದ ಅಕ್ಕಪಕ್ಕದ ರೈತರ ಜಮೀನುಗಳಿಗೆ ಹಾಗೂ ಜನ ಜಾನುವಾರುಗಳಿಗೆ ತೊಂದರೆಯನ್ನುಂಟು ಮಾಡುತ್ತಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.


ಉದುಸೆ ಸ್ಟಾಕ್‌ಯಾರ್ಡ್‌ನಿಂದ ಮರಳು ಸಾಗಾಟಕ್ಕಾಗಿ ಗುರುವಾರ(ಮೇ18) 115 ಲಾರಿಗಳಿಗೆ ಮರಳು ಸಾಗಾಟದ ಪರ್ಮಿಟ್ ನೀಡಿದ್ದು, ಬೆಳಗ್ಗೆ 10 ಗಂಟೆ ವೇಳೆಗೆ 12 ಲಾರಿಗಳಲ್ಲಿ ಮರಳನ್ನು ಸಾಗಿಸಲಾಗಿತ್ತು. ನಂತರ 110 ಲಾರಿಗಳು ಇಲ್ಲಿಗೆ ಬಂದಿವೆ ಎಂದು ದೂರಿದ್ದಾರೆ.


 ‘ಈ ಬಗ್ಗೆ ನಾವು ಜಿಲ್ಲಾಧಿಕಾರಿಗೂ ದೂರು ನೀಡಿದ್ದೇವೆ. ಜಿಲ್ಲಾಡಳಿತದಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಇಂದು 110 ಲಾರಿಗಳನ್ನು ತಡೆದು ನಿಲ್ಲಿಸಿದ್ದೇವೆ. ಅಧಿಕಾರಿಗಳು ಸ್ಥಳಕ್ಕೆ ಬಂದು ಗುತ್ತಿಗೆದಾರರ ವಿರುದ್ಧ ಕ್ರಮ ಕೈಗೊಳ್ಳುವವರೆಗೆ ಲಾರಿಗಳನ್ನು ಬಿಡುವುದಿಲ್ಲ’ ಎಂದು ಗ್ರಾಮಸ್ಥರು ಪಟ್ಟು ಹಿಡಿದರು.


ಸ್ಥಳ ಭೇಟಿ ನೀಡಿದ ಮೂಡಿಗೆರೆ ಪಿಎಸ್ಸೈ ರಫೀಕ್, ಪರವಾನಿಗೆ ಹೊಂದಿರುವ ಲಾರಿಗಳನ್ನು ಬಿಡುವಂತೆ ಮನವಿ ಮಾಡಿದರು. ಸಂಜೆ ನಂತರ ಪೊಲೀಸ್ ರಕ್ಷಣೆಯಲ್ಲಿ ಲಾರಿಗಳಿಗೆ ಮರಳು ತುಂಬಿಸಲು ಅನುವು ಮಾಡಿಕೊಡಲಾಯಿತು.
ಈ ವೇಳೆ ಗ್ರಾಮಸ್ಥರಾದ ಯು.ಡಿ. ಅಣ್ಣೇಗೌಡ, ಎಂ.ಜೆ. ಸುಜಯ್, ಯು.ಬಿ. ಮಧು, ಯು.ಟಿ. ಆದರ್ಶ, ಯು.ಎನ್. ಪ್ರಜ್ವಲ್, ಯು.ಡಿ. ಪೂರ್ಣೇಶ್ ಮತ್ತಿತರರಿದ್ದರು.


ಹೇಮಾವತಿ ನದಿ ಪಾತ್ರದ 3.30 ಎಕರೆ ಪ್ರದೇಶದಲ್ಲಿ ಮರಳು ತೆಗೆಯಲು ಜಿಲ್ಲಾಡಳಿತ ಗುತ್ತಿಗೆದಾರರಿಗೆ ಅನುಮತಿ ನೀಡಿದೆ. ಆದರೆ ನಿಯಮಗಳನ್ನು ಗಾಳಿಗೆ ತೂರಿ ಗ್ರಾಮದ ರೈತರ ಸರ್ವೇ ನಂ.170, 174ರಲ್ಲಿ 14 ಎಕರೆ ಜಮೀನಿನಲ್ಲಿ ಅಕ್ರಮವಾಗಿ ಜೆಸಿಬಿ ಯಂತ್ರ ಬಳಸಿ ಮರಳು ತೆಗೆಯಲಾಗುತ್ತಿದೆ. ದಬ್ಬಾಳಿಕೆ ಮೂಲಕ ರೈತರ ಜಮೀನಿನಲ್ಲಿ ಸಾಗಿಸಲಾಗುತ್ತಿದೆ. ಪೊಲೀಸರು ಅಕ್ರಮದಲ್ಲಿ ಶಾಮೀಲಾಗಿದ್ದಾರೆ.
ಯು.ಬಿ. ಮಧು,ಉದುಸೆ ಗ್ರಾಮಸ್ಥ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News